'ಕನ್ನಡಿಗ' ಮೋದಿಗೆ ಮತ್ತೆ ಪಂಚ ಪ್ರಶ್ನೆ ಕೇಳಿದ ಸಿದ್ದರಾಮಯ್ಯ
Recommended Video
ಬೆಂಗಳೂರು, ಮೇ 1: ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಖಡಕ್ ಪ್ರಶ್ನೆಗಳನ್ನು ಕೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮತ್ತೆ ತಮ್ಮ ಪ್ರಶ್ನೆಗಳ ಸರಣಿಯನ್ನು ಮುಂದುವರಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಂತೆಮಾರನಹಳ್ಳಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಸಿದ್ದರಾಮಯ್ಯ 5 ಸರಣಿ ಟ್ಟೀಟ್ ಗಳನ್ನು ಮಾಡಿದ್ದಾರೆ. ತಮ್ಮ ಟ್ಟಿಟರ್ ಖಾತೆಯಲ್ಲಿ ಉತ್ತರ ಕೊಡಿ ಮೋದಿ (#AnswerMaadiModi) ಎಂಬ ಹ್ಯಾಷ್ ಟ್ಯಾಗ್ ಬಳಸಿ ಕನ್ನಡದಲ್ಲೇ ಪ್ರಶ್ನೆಗಳನ್ನು ಕೇಳಿದ್ದಾರೆ.
ಮೋದಿ ಏನು ಕರ್ನಾಟಕ ಮುಖ್ಯಮಂತ್ರಿ ಆಗ್ತಾರಾ? ಖರ್ಗೆ ಲೇವಡಿ
ಮುಖ್ಯವಾಗಿ ಪ್ರಧಾನಿ ಇತ್ತೀಚೆಗೆ ಬಿಜೆಪಿ ನಾಯಕರ ಜೊತೆಗಿನ ಸಂವಾದದಲ್ಲಿ ನಾನೂ ಕನ್ನಡಿಗ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಸಿದ್ದರಾಮಯ್ಯ ಟ್ಟೀಟ್ ಮಾಡಿದ್ದು, ಕನ್ನಡಿಗನಾಗುವುದೆಂದರೆ ಹೇಗೆ ಎಂದು ವಿವರಣೆ ನೀಡಿದ್ದಾರೆ.
ನಾಡಧ್ವಜಕ್ಕೆ ಅಂಗೀಕಾರ ನೀಡಿ, ನಿಜವಾದ ಕನ್ನಡಿಗರಾಗುವಿರಾ?
"ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ.
ಕನ್ನಡಿಗನಾಗುವುದೆಂದರೆ.... ನಾಡಭಾಷೆ, ನಾಡಗೀತೆ, ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ, ನಿಜವಾದ ಕನ್ನಡಿಗರಾಗುವಿರಾ?" ಎಂದು ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ನೇರ ಪ್ರಶ್ನೆ ಕೇಳಿದ್ದಾರೆ.
ಪ್ರಚಾರಕ್ಕೆ ಬರುವ ಮೋದಿ ಉಡುಪಿಯಲ್ಲಿ ಇರೋದು ಎಷ್ಟು ಹೊತ್ತು?
ಕನ್ನಡಿಗರಾಗಲು ಸಿದ್ಧ ಇದ್ದೀರಾ?
"ಕನ್ನಡಿಗನಾಗುವುದೆಂದರೆ... ಬಲತ್ಕಾರದ ಹಿಂದಿ ಹೇರಿಕೆಯನ್ನು ಕೈಬಿಡುವುದು, ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು. ಕನ್ನಡಿಗರಾಗಲು ಸಿದ್ದ ಇದ್ದೀರಾ?" ಎಂದು ಮೋದಿಯವರನ್ನು ಸಿದ್ದರಾಮಯ್ಯ ಕೇಳಿದ್ದಾರೆ.
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕೇಂದ್ರ ಸರಕಾರ ಒತ್ತಾಯಪೂರ್ವಕವಾಗಿ ಹಿಂದಿ ಹೇರುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಿಎಸ್ವೈ ಇನ್ನೂ ನಿಮ್ಮ ಸಿಎಂ ಅಭ್ಯರ್ಥಿಯೇ? ಮೋದಿ ಕೆಣಕಿದ ಸಿಎಂ
ಮಹಾದಾಯಿ ವಿವಾದ ಬಗೆಹರಿಸಲು ಸಭೆ ಕರೆಯುವಿರಾ?
"ಕನ್ನಡಿಗನಾಗುವುದೆಂದರೆ... ನೆಲ, ಜಲ, ಭಾಷೆಯ ರಕ್ಷಣೆಗೆ ಬದ್ದವಾಗಿರುವುದು. ಮಹಾದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುವಿರಾ?" ಎಂಬುದಾಗಿ ಸಿದ್ದರಾಮಯ್ಯ ಕೇಳಿದ್ದಾರೆ. ಈ ಮೂಲಕ ಮಹಾದಾಯಿ ಜಲ ವಿವಾದ ಬಗೆಹರಿಸುವಂತೆ ಸಿಎಂ ಮತ್ತೊಮ್ಮೆ ಪ್ರಧಾನಿಯವರಿಗೆ ಮೊರೆ ಇಟ್ಟಿದ್ದಾರೆ.
ಬ್ಯಾಂಕುಗಳ ಪ್ರವೇಶ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡ್ತೀರಾ?
ಕನ್ನಡದಲ್ಲಿ ಬ್ಯಾಂಕ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬ ಕೂಗು ಹಲವು ತಿಂಗಳುಗಳಿಂದ ಕರ್ನಾಟಕದಲ್ಲಿ ಕೇಳಿ ಬರುತ್ತಿದೆ. ಇದೇ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿದ್ದರಾಮಯ್ಯ ಪ್ರಶ್ನೆ ಕೇಳಿದ್ದು, "ಕನ್ನಡಿಗನಾಗುವುದೆಂದರೆ.... ಕನ್ನಡ - ಕನ್ನಡಿಗ - ಕರ್ನಾಟಕದ ಹಿತರಕ್ಷಣೆ. ರಾಷ್ಟೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಕನ್ನಡಿಗರಾಗುವಿರಾ?" ಎಂದು ಕೇಳಿದ್ದಾರೆ.
ಮುಸ್ಲಿಮ್, ಕ್ರಿಶ್ಚಿಯನ್ಗೆ ಟಿಕೆಟ್ ಯಾಕೆ ನೀಡಿಲ್ಲ?
ಇತರ ಧರ್ಮೀಯರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂಬುದನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. "ಕನ್ನಡಿಗನಾಗುವುದೆಂದರೆ... ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು ಗೌರವಿಸುವುದು. ಒಬ್ಬನೇ ಒಬ್ಬ ಮುಸ್ಲಿಮ್, ಕ್ರಿಶ್ಚಿಯನ್ಗೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ?" ಎಂದು ಮೋದಿ ನಿಲುವಿಗೆ ತಗಾದೆ ತೆಗೆದಿದ್ದಾರೆ.