ವೈರಲ್ ಸುದ್ದಿ : ಸಕ್ರಿಯ ರಾಜಕಾರಣದಿಂದ ಎಸ್.ಎಂ.ಕೃಷ್ಣ ನಿವೃತ್ತಿ?
Recommended Video
ಬೆಂಗಳೂರು, ಆಗಸ್ಟ್ 24 : ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯಲಿದ್ದಾರೆ?. ಹೌದು..ಶುಕ್ರವಾರ ಇಂತಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐದು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ ಕೆಲಸ ಮಾಡಿದ್ದರು. 2017ರ ಮಾರ್ಚ್ನಲ್ಲಿ ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು.
ಇದೇನಿದು..? ಮತ್ತೆ ಕಾಂಗ್ರೆಸ್ಸಿಗೆ ಬರುತ್ತಾರಾ ಎಸ್ ಎಂ ಕೃಷ್ಣ..?!
ಬಿಜೆಪಿ ಸೇರಿದ ಬಳಿಕ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದಾರೆ. ಪಕ್ಷದ ಸಭೆ, ಸಮಾರಂಭಗಳಲ್ಲಿ ಅವರು ಕಾಣಿಸಿಕೊಂಡಿದ್ದು ಕಡಿಮೆ. ಇದಕ್ಕೆ ವಯಸ್ಸು ಮತ್ತು ಆರೋಗ್ಯದ ಕಾರಣಗಳು ಇರಬಹುದು.
ಚುನಾವಣೆ ಹೊತ್ತಲ್ಲಿ 'ಕೃಷ್ಣ' ಅಜ್ಞಾತವಾಸ! ಬಿಜೆಪಿಯಲ್ಲೂ ಕಡೆಗಣನೆ?
ಆದರೆ, ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಎಸ್.ಎಂ.ಕೃಷ್ಣ ಅವರು ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ? ಎಂಬ ಸುದ್ದಿ ಹಬ್ಬಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ. ಇದುವರೆಗೂ ಎಸ್.ಎಂ.ಕೃಷ್ಣ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಿರಿಯ ಮುತ್ಸದ್ದಿ ಎಸ್ಸೆಂ ಕೃಷ್ಣ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?
ಆಪ್ತರ ಬಳಿ ಎಸ್.ಎಂ.ಕೃಷ್ಣ ಚರ್ಚೆ
ಸುಧೀರ್ಘ ರಾಜಕೀಯ ಅನುಭವವನ್ನು ಎಸ್.ಎಂ.ಕೃಷ್ಣ ಅವರು ಪುಸ್ತಕ ರೂಪದಲ್ಲಿ ಹೊರ ತರುತ್ತಿದ್ದಾರೆ. ಜೀವನ ಚರಿತ್ರೆ ಪುಸ್ತಕ ಪ್ರಕಟವಾದ ಬಳಿಕ ಅವರು ರಾಜಕೀಯ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಆಪ್ತರ ಬಳಿ ಅವರು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಎಸ್.ಎಂ.ಕೃಷ್ಣ ಅವರ ಕಚೇರಿ ಈ ಸುದ್ದಿಯನ್ನು ತಳ್ಳಿ ಹಾಕಿದೆ. ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ಅಲ್ಲಗಳೆದಿರುವ ಕಚೇರಿ, ರಾಜಕೀಯದಲ್ಲಿ ಅವರು ಮುಂದುವರೆಯಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ಬಿಜೆಪಿ ಸೇರಿದ ಮೇಲೆ ಹುದ್ದೆ ಇಲ್ಲ
2017ರ ಮಾರ್ಚ್ನಲ್ಲಿ ಎಸ್.ಎಂ.ಕೃಷ್ಣ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಪಕ್ಷ ಸೇರಿದ್ದರು. ಬಳಿಕ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿರಳ. ಎಸ್.ಎಂ.ಕೃಷ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ರಾಜ್ಯ ನಾಯಕರು ಬಳಿಕ ಮೂಲೆಗುಂಪು ಮಾಡಿದರು ಎಂಬ ಆರೋಪಗಳಿವೆ.
ಪರಿವರ್ತನಾ ಯಾತ್ರೆ, 2018ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಎಸ್.ಎಂ.ಕೃಷ್ಣ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಮಾತ್ರ ಅವರು ಪಾಲ್ಗೊಂಡಿದ್ದರು. ಪಕ್ಷ ಮೂಲೆಗುಂಪು ಮಾಡಿದ ಹಿನ್ನಲೆಯಲ್ಲಿ ಅವರು ಸಕ್ರಿಯ ರಾಜಕಾರಣ ತೊರೆಯುತ್ತಿದ್ದಾರೆ? ಎಂಬುದು ಸದ್ಯದ ಸುದ್ದಿ.
ಐಟಿ ದಾಳಿ, ಚುನಾವಣಾ ಫಲಿತಾಂಶ
ಅಳಿಯನ ಮನೆ, ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಎಸ್.ಎಂ.ಕೃಷ್ಣ ಅವರು ಬೇಸರಗೊಂಡಿದ್ದರು. ಅವರು ಬಿಜೆಪಿ ಸೇರಿದ ಕೆಲವೇ ದಿನದಲ್ಲಿ ಅಳಿಯ ಸಿದ್ದಾರ್ಥ ಮನೆ, ಕಚೇರಿ ಮೇಲೆ ದಾಳಿ ನಡೆದಿತ್ತು.
ಕಾಫಿ ಡೇ ಎಂಬ ಬೃಹತ್ ಉದ್ಯಮವನ್ನು ಹೊಂದಿರುವ ಸಿದ್ದಾರ್ಥ ಅವರ ಮೇಲೆ ದಾಳಿ ನಡೆಯದಂತೆ ತಡೆಯಲು ಅವರು ಬಿಜೆಪಿಗೆ ಸೇರಿದ್ದರು ಎಂಬ ವಿಶ್ಲೇಷಣೆಯೂ ನಡೆದಿತ್ತು.
2018ರ ಚುನಾವಣೆಯಲ್ಲಿಯೂ ಎಸ್.ಎಂ.ಕೃಷ್ಣ ಅವರ ಪ್ರಭಾವ ಹೆಚ್ಚು ಕೆಲಸ ಮಾಡಿದಂತೆ ಕಾಣಲಿಲ್ಲ. ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲಿಯೂ ಬಿಜೆಪಿ ಶಾಸಕರು ಜಯಗಳಿಸಲಿಲ್ಲ.
ಸ್ವಾಗತಿಸಿದ್ದ ಕಾಂಗ್ರೆಸಿಗರು
2018ರ ಏಪ್ರಿಲ್ನಲ್ಲಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಕೆಲವು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಮರಳಿದರೆ ಸ್ವಾಗತ ಎಂದೂ ಹೇಳಿಕೆ ನೀಡಿದ್ದರು. ಆದರೆ, ಕೆಲವು ದಿನಗಳ ಬಳಿಕ ಕೃಷ್ಣಾ ಅವರು ಕಾಂಗ್ರೆಸ್ಗೆ ಮರಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಈಗ ಹಬ್ಬಿರುವ ಸುದ್ದಿಗಳ ಪ್ರಕಾರ ಎಸ್.ಎಂ.ಕೃಷ್ಣ ಪುತ್ರಿ ಶಾಂಭವಿ ಅವರು ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆ ವೇಳೆಗೆ ಅವರ ರಾಜಕೀಯ ನಡೆ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೊಗಳಿ ಪುಸ್ತಕ ಬರೆದಿದ್ದಾರೆ
ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಪಕ್ಷವನ್ನು ಹೊಗಳಿ ಜೀವನ ಚರಿತ್ರೆ ಪುಸ್ತಕ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಪುಸ್ತಕ ಬಿಡುಗಡೆಯಾದ ಬಳಿಕ ಬಿಜೆಪಿ ಪಕ್ಷಕ್ಕೆ ಮುಜುರಗ ಆಗಬಾರದು ಎಂದು ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಎಸ್.ಎಂ.ಕೃಷ್ಣ ಅವರು ರಾಜಕೀಯ ನಿವೃತ್ತಿ ಬಗ್ಗೆ ಹಬ್ಬಿರುವ ಸುದ್ದಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ.