ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ : ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 19 : 2018ರ ಚುನಾವಣೆಗೆ ಉತ್ತರ ಕರ್ನಾಟಕದಿಂದ ವಿವಿಧ ನಾಯಕರು ಸ್ಪರ್ಧೆ ಮಾಡುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. 'ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಪಕ್ಷ ಸಂಘಟನೆಗೆ ಉತ್ತರ ಕರ್ನಾಟಕದಲ್ಲಿ ಮನೆ ಮಾಡಿರುವುದು ನಿಜ. ಆದರೆ, ಅಲ್ಲಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ' ಎಂದರು.
ಉತ್ತರ ಕರ್ನಾಟಕದಿಂದ ಬಿಎಸ್ವೈ ಸ್ಪರ್ಧೆ : ಯಾರು, ಏನು ಹೇಳಿದರು?
'ರಾಮನಗರದ ಜನರಿಗೆ ನನ್ನ ಮೇಲೆ ಅಪಾರವಾದ ಅಭಿಮಾನವಿದೆ. ಸದಾ ನನಗೆ ಬೆಂಬಲ ನೀಡುತ್ತಿದ್ದಾರೆ. ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಅವರ ಮನಸ್ಸಿಗೆ ನೋವು ಉಂಟು ಮಾಡುವುದಿಲ್ಲ. ಉತ್ತರ ಕರ್ನಾಟದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಕುಮಾರಸ್ವಾಮಿ ತಿಳಿಸಿದರು.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ?, ಸೋನಿಯಾಗೆ ಪತ್ರ!
ಈಗಾಗಲೇ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಬಾಗಲಕೋಟೆ ಅಥವ ಹಾವೇರಿಯು ಯಾವುದಾದದರೂ ಒಂದು ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ.
ಅತ್ತ ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಬಾಗಲಕೋಟೆಯಿಂದ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಬೇಕು ಎಂದು ಹಲವು ನಾಯಕರು ಆಹ್ವಾನ ನೀಡಿದ್ದಾರೆ.