HD Kumaraswamy: ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕವಾಗಿ ಹೇಳಿಕೆ; ಅಷ್ಟಕ್ಕೂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ಹಾಸನ, ಏಪ್ರಿಲ್ 12: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಬ್ಬರದ ಪ್ರಚಾರದ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಯ ಮತ್ತೆ ಸಿಎಂ ಆಗುವ ಬಗ್ಗೆ ಮಾರ್ಮಿಕವಾಗಿ ಹೇಳಿಕೆ ನೀಡಿದ್ದು, ಸದ್ಯ ರಾಜಕೀಯ ವಲಯದಲ್ಲಿ ಗುಸು ಗುಸು ಶುರುವಾಗಿದೆ.
ಈ ಕುರಿತು ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ದೇವರ ಇಚ್ಛೆಯಿಂದ ನಿಮ್ಮ ಸೇವೆ ಮಾಡಲು ನನಗೆ ಇನ್ನೊಂದು ಅವಕಾಶ ಸಿಗುತ್ತದೆ. ನಾನು ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ನನಗೆ ಮೂರನೇ ಜನ್ಮ ಸಿಕ್ಕಿದೆ. ಈ ಜನ್ಮದಲ್ಲಿ ಇನ್ನೊಂದು ವರ್ಷದೊಳಗೆ ನಿಮ್ಮ ಸೇವೆಗೆ ಅವಕಾಶ ಸಿಗಲಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಒಂದು ವರ್ಷದೊಳಗೆ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಏನ್ ಆಗುತ್ತೆ ಅಂತ ಕಾದು ನೋಡಿ. ರಾಜಕೀಯ ಎಂದರೆ ಅದು ಹರಿಯುವ ನೀರು. ಯಾವಾಗ ಏನೇನಾಗುತ್ತದೆಯೋ ನಮಗೂ ಗೊತ್ತಾಗಲ್ಲ. ಅವರಿಗೂ ಗೊತ್ತಾಗೋದಿಲ್ಲ. ಸಚಿವರೇ ಹೇಳುತ್ತಿದ್ದಾರೆ, ಕಾಂಗ್ರೆಸ್ ನಾಯಕರೇ ದಿನ ಬೆಳಗಾದರೆ ಹೇಳುತ್ತಿದ್ದಾರಲ್ಲ, ನೀವು ಅವರನ್ನೇ ಕೇಳಿ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಎಲ್ಲಿದೆ ಎನ್ನುವ ದುರಹಾಂಕರ ಮಾತುಗಳನ್ನು ಇವರು ಆಡುತ್ತಿದ್ದಾರೆ. ಸಹವಾಸ ಮಾಡಿದಕ್ಕೆ ಈಗ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟರಲ್ಲ, ಅದಕ್ಕೆ ಮರು ಜೀವ ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ.ಪಕ್ಕದಲ್ಲಿಯೇ ಕೂತು ಹಳ್ಳ ತೋಡಿದ್ರಲ್ಲ, ಎಲ್ಲಾ ನೆನಪಿದೆ ನನಗೆ ಎಂದರು.
ನಿಮ್ಮ ಸರಕಾರ ತೆಗೆದವರು ಯಾರು ಎಂದು ಹಾಸನಾಂಬೆ ಸನ್ನಿಧಿಗೆ ಬಂದು ಆಣೆ ಮಾಡಿ ಎಂದು ಡಿ.ಕೆ.ಶಿವಕುಮಾರ್ ಹಾಕಿರುವ ಸವಾಲಿಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ ಅವರು; ಆಣೆ ಯಾಕೆ ಮಾಡಬೇಕು? ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ಮೈತ್ರಿ ಸರಕಾರ ತೆಗೆಯಲು ಗುಳಿಗೆ ಅರೆದಿದ್ದನ್ನು ನೀವೇ (ಮಾಧ್ಯಮಗಳು) ತೋರಿಸಿದರಲ್ಲ. ಅದಕ್ಕೆ ಹಾಸನಾಂಬೆಯ ಮುಂದೆ ಪ್ರಮಾಣ ಮಾಡಬೇಕಾ..? ಧರ್ಮಸ್ಥಳದಲ್ಲಿ ಕುತಂತ್ರ ಮಾಡಿ ಬಂದರಲ್ಲ, ಈ ಸರಕಾರ ಒಂದೇ ವರ್ಷ ಎಂದು ಹೇಳಿದರಲ್ಲ.. ಆಮೇಲೆ ಏನಾಯಿತು ಎನ್ನುವುದು ನಾಡಿನ ಜನರಿಗೆ ಗೊತ್ತಿದೆಯಲ್ಲ.
ಮಾಜಿ ಶಾಸಕ ಪ್ರೀತಮ್ ಗೌಡ ಅವರ ಕುರಿತು ಮಾತನಾಡಿ, ಪಾಪ.. ಪದೇಪದೆ ಯಾಕೆ ಅವರ ಹೆಸರು ಎಳೆದು ತರುತ್ತೀರಿ? ಅವರು ಎನ್ ಡಿಎ ಪರ ಮತ ಕೇಳಿದ್ದಾರೆ. ಎನ್ ಡಿಎ ಅಭ್ಯರ್ಥಿಗೆ ಮತ ಕೊಡಿ ಎಂದು ಹೇಳಿದ್ದಾರೆ. ಅವರು ರಾಜ್ಯದ ನಾಯಕರಿದ್ದಾರೆ. ಬೆರೆ ಬೇರೆ ಕಡೆ ಜವಾಬ್ದಾರಿ ಕೊಟ್ಟಿದ್ದಾರೆ, ಎಲ್ಲಾ ಕಡೆ ಹೋಗಬೇಕಿದೆ. ಅವರ ಜತೆಗೆ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಯಾವುದೇ ಗೊಂದಲ ಇಲ್ಲ ಎಂದರು.
ಮಂಡ್ಯಕ್ಕೆ ಕುಮಾರಸ್ವಾಮಿ ಹೊರಗಿನವರು ಎಂಬ ಕಾಂಗ್ರೆಸ್ ಆರೋಪದ ಕುರಿತು ಮಾತನಾಡಿ, ಅವರ ತಟ್ಟೆಯಲ್ಲಿ ಹೆಗ್ಗಣವೇ ಸತ್ತು ಬಿದ್ದಿದೆ. ಇಲ್ಲಿ ನೊಣ ಹುಡುಕುತ್ತಿದ್ದಾರೆ. ಸೋನಿಯಾ ಗಾಂಧಿ ಬಂದಾಗ ಅವರಿಗೆ ಬೇರೆ ದೇಶದವರು ಅನ್ನಿಸಲಿಲ್ವ? ಬಳ್ಳಾರಿಗೆ ಬಂದು ಚುನಾವಣೆಗೆ ಬಂದು ನಿಂತರಲ್ಲ.. ಅವರೇನು ಬಳ್ಳಾರಿಯವರಾ? ನಾನಾದರೂ ಕನ್ನಡಿಗ. ಈ ರಾಜ್ಯದ ಮಣ್ಣಲ್ಲಿ ಹುಟ್ಡಿದವನು. ಇಂದಿರಾಗಾಂಧಿ ಚಿಕ್ಕಮಗಳೂರಿಗೆ ಯಾಕೆ ಬಂದರು? ರಾಹುಲ್ ಗಾಂಧಿ ಅವರು ವೈನಾಡಿಗೆ ಹೋಗಿಲ್ಲವೇ? ಅಮೇಥಿ ಬಿಟ್ಟು ಯಾಕೆ ಹೋದರು? ನಾನು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಅಪರಾಧವೇ? ಎಂದು ಪ್ರಶ್ನಿಸಿದರು.
ಜೆಡಿಎಸ್ ಒಂದು ಸ್ಥಾನ ಗೆಲ್ಲಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಉತ್ತರಿಸಿ, ಅವರು ಭವಿಷ್ಯ ಹೇಳುವುದರಲ್ಲಿ ಎಕ್ಸಪರ್ಟ್ ಇದ್ದಾರೆ. ಅವರು ಜ್ಯೋತಿಷಿನೇ ಅಲ್ಲವೇ? ಅವರ ಬ್ಯಾಗ್ ತೆಗೆದರೆ ಜ್ಯೋತಿಷ್ಯದ ಬಗ್ಗೆ ಸಾಕಷ್ಟು ಪುಸ್ತಕಗಳು ಸಿಗುತ್ತವೆ. ಅವರು ಸಂಶೋಧನೆ ಮಾಡಿರಬಹುದು. ನಾವೂ ರೀಸರ್ಚ್ ಮಾಡಿದೇವೆ. ಈ ರಾಜ್ಯದಲ್ಲಿ ಕಾಂಗ್ರೆಸ್ ತೆಗೆಯಲು ಏನು ಮಾಡಬೇಕೊ ಜನ ಅದನ್ನೇ ಮಾಡುತ್ತಾರೆ. ಹಿಂದೆ ಹೋದ ಕಡೆ ಜನ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಕೂಗುತ್ತಿದ್ದರು. ಅದು ಜನರ ಆಶೀರ್ವಾದ. ಈಗ ಕೇಂದ್ರದ ಮಂತ್ರಿ ಆಗುತ್ತಾರೆ ಎಂದು ಕೂಗುತ್ತಿದ್ದಾರೆ. ಅದಕ್ಕೆ ನಾನು ಋಣಿ.
ಪ್ರದಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರಂದು ಮೈಸೂರಿಗೆ ಬರುತ್ತಾರೆ. ನಂತರ ಇನ್ನು ಎರಡು ಮೂರು ಕಡೆ ಬರುವವರಿದ್ದಾರೆ. ನಾನು ಕೂಡ 50 ಸಾರ್ವಜನಿಕ ಸಭೆಗಳಲ್ಲಿ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ನವರು, ಪಾಪ.. ಕುಮಾರಸ್ವಾಮಿ ಕಾಣೆ ಆಗಿದ್ದಾರೆ ಎಂದು ಮಂಡ್ಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಕಾಣೆ ಆಗಿಲ್ಲ. 28ಕ್ಕೆ 28 ಸ್ಥಾನ ಗೆಲ್ಲುವುದಕ್ಕೆ ಬಿಜೆಪಿ ಜತೆ ಸೇರಿ 50 ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications