ಮೋದಿ ಮೈಸೂರು, ಶಿವಮೊಗ್ಗಕ್ಕೆ ಪ್ರಚಾರಕ್ಕೆ ಬರ್ತಾರಾ?
ಮೈಸೂರು, ಮಾರ್ಚ್ 28- ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪಕ್ಷದ ಪರ ಕರ್ನಾಟಕದಲ್ಲಿ ಮತ್ತೊಂದು ಸುತ್ತು ಪ್ರಚಾರ ನಡೆಸಲು ಆಗಮಿಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ಇದುವರೆಗೆ ರಾಜ್ಯಕ್ಕೆ ಮೂರು ಬಾರಿ ಬಂದುಹೋಗಿದ್ದಾರೆ.
ಮಾರ್ಚ್ 30ರಂದು ಎರಡು ಜಿಲ್ಲಾ ಕೇಂದ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಮಾರ್ಚ್ 30 ಭಾನುವಾರ ಮಧ್ಯಾಹ್ನ 3 ಗಂಟೆಗೆ ಬಿಜಾಪುರದಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ, ಸಂಜೆ 5 ಗಂಟೆಗೆ ಬೆಳಗಾವಿಯಲ್ಲಿ ನಮೋ ಸಮಾವೇಶ ನಡೆಯಲಿದೆ. ಮುಂಬೈ-ಕರ್ನಾಟಕ ಭಾಗ ಬಿಜೆಪಿಯ ಗಟ್ಟಿ ನೆಲೆಯಾಗಿದೆ. ಹಾಗಾಗಿ ನಾಲ್ಕನೆಯ ಹಂತದ ಪ್ರವಾಸವನ್ನು ಈ ಜಿಲ್ಲೆಗಳಲ್ಲಿ ಮಾಡಲು ಮೋದಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ಕಾರ್ಯಕರ್ತರು ಬಿಜಾಪುರ ಸಮಾವೇಶದಲ್ಲೂ, ಕಾರವಾರ, ಧಾರವಾಡ ಮತ್ತು ಹಾವೇರಿ ಭಾಗದ ಕಾರ್ಯಕರ್ತರು ಬೆಳಗಾವಿ ಸಮಾವೇಶದಲ್ಲೂ ಪಾಲ್ಗೊಳ್ಳಲಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಹಾಗೆ ನೋಡಿದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಟ್ಟು 8 ಕಡೆ ಪ್ರಚಾರಕ್ಕೆ ಬರುವುದಾಗಿ ರಾಜ್ಯ ಬಿಜೆಪಿಗೆ ಮೋದಿ ಭರವಸೆ ನೀಡಿದ್ದರು. ಈಗಾಗಲೇ ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರಿನಲ್ಲಿ ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಂದರೆ ಐದು ಕಡೆ ಮುಗಿದಿದ್ದು, ಮಾರ್ಚ್ 30ರ ಬಿಜಾಪುರ ಮತ್ತು ಬೆಳಗಾವಿ ಸೇರಿದರೆ 7 ಕಡೆ ಮೋದಿ ಸಮಾವೇಶ ನೆರವೇರಿದಂತಾಗುತ್ತದೆ.
ಉಳಿದ ಒಂದು ಸಮಾವೇಶ ಎಲ್ಲಿ ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆ! ಈ ಪ್ರಶ್ನೆಯ ಬೆನ್ನತ್ತಿ ಹೋದಾಗ ಗೋಚರವಾಗುವುದು ಮೈಸೂರು ಮತ್ತು ಶಿವಮೊಗ್ಗ. ಸ್ಪರ್ಧೆಯ ದೃಷ್ಟಿಯಿಂದ ಎರಡೂ ಕಡೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಹಾಗಾದಲ್ಲಿ ಮೋದಿ ಈ ಎರಡೂ ಕ್ಷೇತ್ರಗಳ ಪೈಕಿ ಯಾವುದನ್ನು ಆರಿಸಿಕೊಳ್ಳುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅಥವಾ ಇಬ್ಬರೂ ಅಭ್ಯರ್ಥಿಗಳ ಮೇಲೆ ಹೆಚ್ಚಿನ ಒಲವು ಇರುವುದರಿಂದ ಎರಡೂ ಕ್ಷೇತ್ರಗಳಿಗೆ ಬಂದು ಹೋಗುತ್ತಾರಾ? ಕಾದುನೋಡಬೇಕಿದೆ. ಅಂದಹಾಗೆ ಪ್ರಚಾರಕ್ಕಿನ್ನು 20 ದಿನಗಳಷ್ಟೇ ಬಾಕಿಯಿದೆ.