ಅನಿತಾ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುವ ವಿಚಾರ: ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು, ಫೆ 9: ಮುಂದಿನ ವರ್ಷ ಅಂದರೆ 2023ರಲ್ಲಿ ನಡೆಯಬೇಕಾಗಿರುವ ಅಸೆಂಬ್ಲಿ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಮುಂದುವರಿಯುತ್ತಾ, ಪತ್ನಿ ಅನಿತಾ ಕುಮಾರಸ್ವಾಮಿಯವರು ಕಣಕ್ಕೆ ಇಳಿಯಲಿದ್ದಾರಾ ಎನ್ನುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆಯನ್ನು ನೀಡಿದರು.
"ಮೇಕೆದಾಟು ಯೋಜನೆ, ಗಡಿ ಬಿಕ್ಕಟ್ಟು ಸೇರಿದಂತೆ ರಾಜ್ಯ ಎದುರಿಸುತ್ತಿರುವ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಬೇಕಾದರೆ 2023ರಲ್ಲಿ ರಾಷ್ಟ್ರೀಯ ಪಕ್ಷಗಳಿಲ್ಲದ್ದಲ್ಲದ, ಕನ್ನಡಿಗರದ್ದೇ ಸರಕಾರ ಬರಬೇಕಿದೆ" ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಬಲವಾಗಿ ಪ್ರತಿಪಾದಿಸಿದರು.
ಹಿಜಾಬ್ ವಿವಾದ ಹುಟ್ಟಿದ್ದು ಎಲ್ಲಿ, ಬೆಳೆಸಿದ್ದು ಯಾರು, ಲಾಭನಷ್ಟ ಯಾರಿಗೆ?
ಬೆಂಗಳೂರಿನಲ್ಲಿ ಬುಧವಾರ ಕನ್ನಡಪರ ಹೋರಾಟಗಾರರ ಜತೆ ನಾಡು ನುಡಿ ನೆಲ ಜಲ ಇತ್ಯಾದಿ ಸವಾಲುಗಳಿಗೆ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಕ್ತ ಮಾತುಕತೆ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, "ನಮ್ಮ ನ್ಯಾಯಯುತ ಹಕ್ಕುಗಳನ್ನು ಸಾಧಿಸಿಕೊಳ್ಳಲು ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕನ್ನಡಪರ ಹೋರಾಟಗಾರರು ಕೂಡ ವಿಧಾನಮಂಡಲಕ್ಕೆ ಬರಲೇಬೇಕು" ಎಂದು ಕರೆ ನೀಡಿದರು.
ಕನ್ನಡಪರ ಸಂಘಟನೆಗಳನ್ನು ರಾಜಕೀಯಕ್ಕೆ ಆಹ್ವಾನಿಸುವ ಬಗ್ಗೆ ತಮ್ಮದೇ ಆದ ವಿಚಾರ ಸರಣಿ ಮಂಡಿಸಿದ ಮಾಜಿ ಮುಖ್ಯಮಂತ್ರಿಗಳು, ಕನ್ನಡಕ್ಕೆ ಅಪಮಾನವಾದಾಗ ಮಾತ್ರ ನೀವು ಬೀದಿಗೆ ಇಳಿಯುವುದಲ್ಲ. ಪ್ರತಿನಿತ್ಯ ಜನರೊಂದಿಗೆ ಬೆರೆಯಿರಿ. ಅವರ ಸಮಸ್ಯೆಗಳಿಗೆ ದನಿಯಾಗಿ. ಆ ಮೂಲಕವೇ ರಾಜಕೀಯಕ್ಕೂ ಬನ್ನಿ ಎಂದು ಕುಮಾರಸ್ವಾಮಿ ಹೇಳಿದರು.
ಹಿಜಾಬ್ ಹಿಂದೆ ಕಾಂಗ್ರೆಸ್, ಕೇಸರಿ ಹಿಂದೆ ಬಿಜೆಪಿ: ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೇ?
ನಾಡಿನ ಪ್ರಗತಿಯ ದೃಷ್ಟಿಯಿಂದ ರಾಜಕೀಯಕ್ಕೆ ಬನ್ನಿ ಎಂದು ಕುಮಾರಸ್ವಾಮಿ ಆಹ್ವಾನ
"ನಾನು ಇಲ್ಲಿಗೆ ನನ್ನ ಪಕ್ಷದ ಪ್ರಚಾರಕ್ಕೆ ಬಂದಿಲ್ಲ. ನೀವು ಕೆಲ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ. ಚುನಾವಣೆಗೆ ಇನ್ನೂ 14 ತಿಂಗಳ ಕಾಲಾವಕಾಶವಿದೆ. ಈಗಿನಿಂದಲೇ ಕೆಲಸ ಮಾಡಿ. ನಾವೇಕೆ ವಿರೋಧ ಪಕ್ಷದಲ್ಲಿ ಕೂಡಬೇಕು? ನಮಗೆ ನಲವತ್ತು ಸ್ಥಾನಗಳನ್ನ ಗೆಲ್ಲುವುದು ಕಷ್ಟವಲ್ಲ. ನಿಮ್ಮೆಲ್ಲರ ಬೆಂಬಲ ಇದ್ದರೆ 125 ಕ್ಷೇತ್ರಗಳನ್ನು ಗೆಲ್ಲುವುದು ಅಸಾಧ್ಯವಲ್ಲ. ರಾಜ್ಯದ ಸಂಪನ್ಮೂಲ ಲೂಟಿಯಾಗುತ್ತಿದೆ. ನೂರಕ್ಕೆ ಶೇ.70ರಷ್ಟು ಹಣ ಕಮಿಷನ್ ರೂಪದಲ್ಲೇ ಕೊಳ್ಳೆ ಹೋಗುತ್ತಿದೆ. ನೀವು ಮಾತ್ರ ಕನ್ನಡಕ್ಕಾಗಿ ದುಡಿಯುತ್ತಿದ್ದೀರಿ. ಅದು ತಪ್ಪಲ್ಲ. ಆದರೆ ರಾಜಕೀಯ ಯಾರಪ್ಪನ ಸ್ವತ್ತೂ ಅಲ್ಲ. ಭ್ರಷ್ಟಾಚಾರ ತಡೆಯಲು ಹಾಗೂ ನಾಡಿನ ಪ್ರಗತಿಯ ದೃಷ್ಟಿಯಿಂದ ರಾಜಕೀಯಕ್ಕೆ ಬನ್ನಿ"ಎಂದು ಕುಮಾರಸ್ವಾಮಿ, ಕನ್ನಡಪರ ಹೋರಾಟಗಾರರನ್ನು ರಾಜಕೀಯಕ್ಕೆ ಆಹ್ವಾನಿಸಿದರು.
ಬಿಜೆಪಿ ಜತೆ ಸರಕಾರ ಮಾಡಿದೆ ಎಂದು ನಮ್ಮ ತಂದೆ ನನ್ನಿಂದ ದೂರ ಇದ್ದರು
"ಇತರೆ ರಾಜಕಾರಣಿಗಳಂತೆಯೂ ಅಲ್ಲ. ರಾಜಕೀಯಕ್ಕೆ ಬರಲೇಬೇಕು ಎಂದು ಕೊಂಡವನು ನಾನಲ್ಲ. ಆಕಸ್ಮಿಕವಾಗಿ ಬಂದೆ. ಅಷ್ಟೇ ಆಕಸ್ಮಿಕವಾಗಿ 2006ರಲ್ಲಿ ಮುಖ್ಯಮಂತ್ರಿ ಆದೆ. ಆಗ ನನಗೆ ಆಡಳಿತದ ಅನುಭವ ಇರಲಿಲ್ಲ. ಬಿಜೆಪಿ ಜತೆ ಸರಕಾರ ಮಾಡಿದೆ ಎಂದು ನಮ್ಮ ತಂದೆ ನನ್ನಿಂದ ದೂರ ಇದ್ದರು. ಆಗ ತಂದೆಯವರ ಆರೋಗ್ಯ ಹದಗೆಟ್ಟಿತ್ತು. ಆ ಸರಕಾರ ಮಾಡಿದಾಗ ಅವರು ತುಂಬಾ ಕುಗ್ಗಿ ಹೋಗಿದ್ದರು. ಆದರೂ ಅಂತಃಕರಣದಿಂದ ಆಡಳಿತ ನಡೆಸಿದೆ" ಎಂದು ಕುಮಾರಸ್ವಾಮಿ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ಮುಂದಿನ ಚುನಾವಣೆಗೆ ಅನಿತಾ ಕುಮಾರಸ್ವಾಮಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ
"ಕೆಲ ಹೋರಾಟಗಾರರು ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ. ನಾನು ರಾಜಕಾರಣಕ್ಕೆ ಬರದೇ ಇದ್ದದ್ದರೆ ಇಂದು ನಮ್ಮ ಪಕ್ಷ ಇರುತ್ತಿರಲಿಲ್ಲ. ಪಕ್ಷವನ್ನು ಉಳಿಸಿಕೊಳ್ಳಲು ನನ್ನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಬೇಕಾಯಿತು. ಮುಂದಿನ ಚುನಾವಣೆಗೆ ಅವರನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ" ಎಂದು ನೇರ ಮಾತುಗಳಲ್ಲಿ ಕುಮಾರಸ್ವಾಮಿ ಹೇಳಿದರು.
ಡಾ.ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ನಾನು
"ಬಿಡದಿಯ ತೋಟದ ಹೊರತಾಗಿ ಬೇರೆ ಯಾವುದೇ ಆಸ್ತಿ ನನಗಿಲ್ಲ. ಆದರೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿದ್ದೇನೆ. ಅದುಬಿಟ್ಟು ಯಾವುದೇ ವಿದ್ಯಾಸಂಸ್ಥೆ, ಕೈಗಾರಿಕೆಗಳನ್ನು ಮಾಡಲು ಸಿಎಂ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಚಿಕ್ಕಂದಿನಿಂದ ಡಾ.ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ನಾನು. ತಂದೆ, ತಾಯಿಯಿಂದ ಮಾನವೀಯತೆ ಕಲಿತಿದ್ದೇನೆ" ಎಂದು ಕುಮಾರಸ್ವಾಮಿ ಅವರು ಹೇಳಿದರು.
Recommended Video