ಕೈಗಡಿಯಾರದ ಗಲಾಟೆಯಲ್ಲಿ ದೊರೆಗೆ ಕಾಣದ ಕರುನಾಡ ಕುವರ
ಬೆಂಗಳೂರು, ಫೆಬ್ರವರಿ, 11: ಯೋಧ ಹನುಮಂತಪ್ಪ ಕೊಪ್ಪದ್ ನಮ್ಮನ್ನು ಅಗಲಿದ್ದಾರೆ. ಇಡೀ ದೇಶವೇ ಅವರ ಸಾವಿಗೆ ಕಂಬನಿ ಮಿಡಿಯುತ್ತಿದೆ. ನವದೆಹಲಿಯಲ್ಲಿ ಸಕಲ ಗೌರವ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಗುರುವಾರ ಯೋಧನ ಆರೋಗ್ಯ ವಿಚಾರಿಸಲು ದೆಹಲಿಗೆ ತೆರಳುವರಿದ್ದರು. ಗುರುವಾರ 5 ಗಂಟೆ ವಿಮಾನಕ್ಕೆ ಸಿಎಂ ದೆಹಲಿಗೆ ತೆರಳುತ್ತೇನೆ ಎಂದು ಹೇಳಿದ್ದರು. ಆದರೆ ವಿಧಿ ಬರಹವೇ ಬೇರೆ ಆಗಿತ್ತು. ಯೋಧ ಹನುಮಂತಪ್ಪ ಗುರುವಾರ ಮಧ್ಯಾಹ್ನವೇ ಕೊನೆ ಉಸಿರೆಳೆದಿದ್ದರು.[ವೀರ ಯೋಧ ಹನುಮಂತಪ್ಪ ಹುತಾತ್ಮ]
ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಿಎಂ ಹನುಮಂತಪ್ಪ ಮನೆಗೆ ಭೇಟಿ ನೀಡುವ ಸೌಜನ್ಯವನ್ನು ತೋರಿಸಿರಲಿಲ್ಲ. ಅತ್ತ ನವದೆಹಲಿಯಲ್ಲಿ ಪ್ರಧಾನಿ, ರಾಷ್ಟ್ರಪತಿ ಆದಿಯಾಗಿ ಎಲ್ಲರೂ ಹನುಮಂತಪ್ಪ ಆರೋಗ್ಯ ವಿಚಾರಿಸಿದ್ದರು. ಆದರೆ ನಮ್ಮ ಸಿಎಂ ಗೆ ಇಲ್ಲಿನ ಕೆಲಸಗಳೇ ಹೆಚ್ಚಾಯ್ತು![ಮಾಜಿ, ಹಾಲಿಗಳ ಮುಗಿಯದ 'ವಾಚ್' ಸಮರ]
ಯೋಧ ನಮ್ಮನ್ನು ಅಗಲಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಎಲ್ಲ ವ್ಯವಸ್ಥೆ ಮಾಡಿದ್ದೇವೆ. ವಿಮಾನದಲ್ಲಿ ಪಾರ್ಥಿವ ಶರೀರವನ್ನು ತಂದು ನಂತರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ಪರಿಹಾರ ಘೋಷಣೆಗೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಹೇಳಿದರು.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]
ದೆಹಲಿ ವಿಮಾನ ಹೊಸದಲ್ಲ
ಸಚಿವ ಸಂಪುಟ ವಿಸ್ತರಣೆ, ಪಕ್ಷದಲ್ಲಿ ಗೊಂದಲ ಎದ್ದಾಗ ದಿಢೀರ್ ಎಂದು ನವದೆಹಲಿಗೆ ಭೇಟಿ ನೀಡುವ ಸಿದ್ದರಾಮಯ್ಯ ಅವರಿಗೆ ಈ ಬಾರಿ ವಿಮಾನ ಟಿಕೆಟ್ ಸಿಗಲಿಲ್ಲವೇ? ಎಂಬ ಪ್ರಶ್ನೆ ಸಾಮಾಜಿಕ ತಾಣದಲ್ಲೂ ಎದ್ದಿದೆ.
ದುಬಾರಿ ವಾಚ್ ಗಲಾಟೆ
ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ದುಬಾರಿ ವಾಚ್ ನ ಕುರಿತಾಗಿ ವಾಕ್ಸಮರ ನಡೆದೇ ಇದೆ. ಈ ಗಲಾಟೆ ಗೊಂದಲಗಳ ನಡುವೆ ಸಿಎಂಗೆ ಯೋಧನ ಭೇಟಿ ಮಾಡಲು ಸಮಯವೆಲ್ಲಿ?
ಚುನಾವಣೆ ಪರ್ವ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯೊಂದಿಗೆ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಿಸಿ ಸಿಎಂರನ್ನು ವಿಮಾನ ಏರಲು ಬಿಡಲಿಲ್ಲವೇ? ಈ ಪ್ರಶ್ನೆಯನ್ನು ಸ್ವತಃ ತಾವೇ ಕೇಳಿಕೊಳ್ಳಬೇಕಿದೆ.
ಕೃಷ್ಣ ಗುದ್ದು
ಕರ್ನಾಟಕದ ಸಚಿವ ಸಂಪುಟದ ಬಗ್ಗೆ ಕಿಡಿಕಾರಿದ್ದ ಕಾಂಗ್ರೆಸ್ಸಿನವರೇ ಆದ ಮಾಜಿ ಸಿಎಂ ಕೃಷ್ಣ ಸಿದ್ದರಾಮಯ್ಯ ನಡೆಯನ್ನು ದೂಷಿಸಿದ್ದರು. ಇಂಥ ಅಸಮರ್ಪಕ ಸಚಿವ ಸಂಪುಟದಿಂದ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ ಎಂದು ಛಾಟಿ ಬೀಸಿದ್ದರು.
ರಾಹುಲ್ ಗಾಂಧಿ ಎಲ್ಲಿ?
ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಸೈನಿಕ ಹನುಮಂತಪ್ಪರನ್ನು ನೋಡಲು ತೆರಳದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಕೇರಳದಲ್ಲಿ ನಡೆದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಹೈದರಾಬಾದ್ ವಿದ್ಯಾರ್ಥಿ ವೇಮುಲಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಮಾತ್ರ ವಿಚಿತ್ರ.