ಆಕ್ಸಿಜನ್ ಕೊರತೆಯ ಹಿಂದೆ ಮಾಫಿಯಾ: ರಾಜ್ಯ ಡಿಸಿಎಂಗೆ ಯಾಕೀ ಅನುಮಾನ?
ರಾಜ್ಯಕ್ಕೆ ಬೇಕಾಗುವಷ್ಟು ಆಮ್ಲಜನಕ ಉತ್ಪಾದಿಸುವಲ್ಲಿ ಕರ್ನಾಟಕ ಸ್ವಾವಲಂಬಿಯಾಗಿದ್ದರೂ, ಯಾಕೆ ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ರಾಜಧಾನಿಯಲ್ಲಿ ಇದರ ಕೊರತೆ ತೀವ್ರವಾಗಿ ಕಾಡುತ್ತಿದೆ?
ಸಿಕ್ಕಿದ್ದೇ ಚಾನ್ಸ್ ಎಂದು ಕೊಂಡು ಆಕ್ಸಿಜನ್ ಸರಬರಾಜಿನಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ, ಇದರ ಹಿಂದೆ ಬಹುದೊಡ್ಡ ಮಾಫಿಯಾ ಇದೆಯೇ ಎನ್ನುವ ಪ್ರಶ್ನೆ ಖುದ್ದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರಿಗೆ ಕಾಡುತ್ತಿರುವುದು ವಿಪರ್ಯಾಸ.
ಆಕ್ಸಿಜನ್ ಸಪ್ಲೈನ ಲೆಕ್ಕ ಇಟ್ಟುಕೊಳ್ಳಬೇಕಾಗಿರುವ ಡ್ರಗ್ಸ್ ಕಂಟ್ರೋಲ್ ಮೇಲೆ ಅಶ್ವಥ್ ನಾರಾಯಣ ಸಂದೇಹ ಪಡುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದು, ಆಡಿಟ್ ಮಾಡಿ ಲೆಕ್ಕ ಕೊಡಬೇಕಿದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ರೆಮ್ ಡಿಸಿವಿರ್ ಲಸಿಕೆ ವಿತರಣೆಯಲ್ಲೂ ಕೃತಕ ಅಭಾವವನ್ನು ಸೃಷ್ಟಿಸಲಾಗುತ್ತಿದೆ ಎನ್ನುವುದರ ಬಗ್ಗೆ ಸಂಪುಟ ದರ್ಜೆಯ ಸಚಿವರುಗಳೇ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ, ಇವರೆಲ್ಲಾ ಅಸಾಹಯಕರಾಗಿ ಕುಳಿತಿದ್ದಾರೆಯೇ ಎನ್ನುವ ಪ್ರಶ್ನೆ ಏಳಲಾರಂಭಿಸುತ್ತದೆ. ಡ್ರಗ್ಸ್ ಕಂಟ್ರೋಲ್ ಅಧಿಕಾರಿಗಳು ಈ ಬಗ್ಗೆ ಏನನ್ನು ಹೇಳುತ್ತಾರೆ?

ಡ್ರಗ್ಸ್ ಕಂಟ್ರೋಲ್ ಅಧಿಕಾರಿಗಳು
ಏಪ್ರಿಲ್ 24ಕ್ಕೆ ಅನ್ವಯವಾಗುವಂತೆ ಡ್ರಗ್ಸ್ ಕಂಟ್ರೋಲ್ ಅಧಿಕಾರಿಗಳು ನೀಡಿದ ಲೆಕ್ಕದ ಪ್ರಕಾರ, ಒಟ್ಟು ರಾಜ್ಯದಲ್ಲಿ 51,995 ಆಮ್ಲಜನಕಯುಕ್ತ ಹಾಸಿಗೆಗಳಿವೆ. ಇದಕ್ಕೆ ದಿನವೊಂದಕ್ಕೆ 1,634.5 ಟನ್ ಬೇಕಿದೆ. ಆದರೆ, ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ದಿನವೊಂದಕ್ಕೆ 812 ಟನ್. ಹೀಗಾಗಿ, ಆಮ್ಲಜನಕದ ಕೊರತೆ ಕಾಡುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಹೌದು ಎಂದಾದಲ್ಲಿ ಕೇಂದ್ರದಿಂದ ಬರುವ ಲೆಕ್ಕ ಏಲ್ಲಿಗೆ ಹೋಯಿತು?

ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಫ್ಯಾಕ್ಟರಿ
ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಫ್ಯಾಕ್ಟರಿಗಳೆಂದರೆ, ಭುರೂಕಾ ಗ್ಯಾಸಸ್ ಸಂಸ್ಥೆಯ ಎರಡು ಯುನಿಟ್ ಗಳು, ಏರ್ ವಾಟರ್ಸ್ ಇಂಡಿಯಾ, ಬಳ್ಳಾರಿ ಆಕ್ಸಿಜನ್, ಯುನಿವರ್ಸಲ್ ಪ್ರೊಡಕ್ಟ್ಸ್, ಜಿಂದಾಲ್ ಸಂಸ್ಥೆಯ ಉತ್ಪಾದನಾ ಘಟಕವಿದೆ. ಈ ಎಲ್ಲಾ ಸಂಸ್ಥೆಗಳು ಸಂಪೂರ್ಣವಾಗಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡರೆ 5,780 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ಆದರೆ ಈ ಮಟ್ಟದಲ್ಲಿ ಉತ್ಪಾದನೆಯಾಗುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ, ಎಲ್ಲಾ ಸಂಸ್ಥೆಗಳು ಖಾಸಗಿ ಒಡೆತನದ್ದು. ಹಾಗಾಗಿ, ಸರಕಾರ ಈ ಸಂಸ್ಥೆಗಳ ಮೇಲೆ ಸವಾರಿ ಮಾಡಲು ಆಗುವುದಿಲ್ಲ.

ಸಿಲಿಂಡರ್ ಗಳು ರಾಜ್ಯದ ಇತರ ಭಾಗಗಳಿಗೆ ಹೊರಹೋಗುತ್ತಿದೆ
ಸದ್ಯದ ಮಾಹಿತಿಯ ಪ್ರಕಾರ, ಈ ಎಲ್ಲಾ ಸಂಸ್ಥೆಗಳು ಈಗ ಉತ್ಪಾದಿಸುತ್ತಿರುವ ಆಕ್ಸಿಜನ್ ದಿನವೊಂದಕ್ಕೆ ಸರಾಸರಿ 900-940 ಟನ್. ಇದಲ್ಲದೇ, ಕೇಂದ್ರದಿಂದಲೂ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಜೊತೆಗೆ, ಆಕ್ಸಿಜನ್ ಡಿಮಾಂಡ್ ಹೆಚ್ಚಾದ ನಂತರ, ಫ್ಯಾಕ್ಟರಿಗಳಿಂದ ಹೊರಹೋಗುವ ಎಲ್ಲಾ ಲೆಕ್ಕವನ್ನು ಡ್ರಗ್ಸ್ ಕಂಟ್ರೋಲ್ ಇಟ್ಟು, ಪೊಲೀಸ್ ಸುಪರ್ದಿಯಲ್ಲೇ ಸಿಲಿಂಡರ್ ಗಳು ರಾಜ್ಯದ ಇತರ ಭಾಗಗಳಿಗೆ ಹೊರಹೋಗುತ್ತಿದೆ.
Recommended Video

ಏನಿದು ಡಿಸಿಎಂಗೆ ಕಾಡುತ್ತಿರುವ ಅನುಮಾನ
ಹಾಗಾಗಿ, ಫ್ಯಾಕ್ಟರಿ ಮತ್ತು ಆಸ್ಪತ್ರೆಗಳಿಗೆ ಸಪ್ಲೈ ಮಾಡುವ ಕಂಪೆನಿಗಳು/ಮಧ್ಯವರ್ತಿಗಳು ಅಭಾವ ಸೃಷ್ಟಿಸುತ್ತಿದ್ದಾರಾ ಎನ್ನುವ ಡಿಸಿಎಂ ಸಂದೇಹದಲ್ಲಿ ನಿಜಾಂಶ ಇರಬಹುದು. ಯಾಕೆಂದರೆ, ರಾಜ್ಯದ ಉತ್ಪಾದನೆ ಮತ್ತು ಕೇಂದ್ರದ ವಿತರಣೆಯನ್ನು ಲೆಕ್ಕ ಹಾಕಿದರೆ ಈ ಮಟ್ಟಿನ ಅಭಾವ ಸೃಷ್ಟಿಯಾಗಬಾರದು. ಆದರೆ, ಆಡಳಿತ ಯಂತ್ರ ತಮ್ಮಲ್ಲೇ ಇರುವುದರಿಂದ, ಅಶ್ವಥ್ ನಾರಾಯಣ ಅವರು ಸಂದೇಹ ವ್ಯಕ್ತಪಡಿಸುವ ಬದಲು, ಅಸಲಿ ವಿಚಾರದ ಬಗ್ಗೆ ಗಮನಹರಿಸದು ಯಾವಾಗ ಎನ್ನುವುದೇ ಇಲ್ಲಿ ದೊಡ್ಡ ಪ್ರಶ್ನೆ. ಯಾಕೆಂದರೆ, ವಿ ಆರ್ ರನ್ನಿಂಗ್ ಔಟ್ ಆಫ್ ಟೈಮ್.












Click it and Unblock the Notifications