ಈ ಬಾರಿಯ ವಿಧಾನಸಭಾ ಚುನಾವಣೆ ರೋಚಕವಾದೀತು... ಯಾಕೆ?
Recommended Video
ಮೈಸೂರು, ಮಾರ್ಚ್ 27: ಈ ಹಿಂದೆ 2013ರಲ್ಲಿ ನಡೆದ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ವಿಧಾನಸಭಾ ಚುನಾವಣೆ ಒಂದಷ್ಟು ವಿಭಿನ್ನವಾಗಿದೆ. ಅಷ್ಟೇ ಅಲ್ಲ, ಇಂತಹದ್ದೇ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ ಎಂದು ಹೇಳುವುದು ಕಷ್ಟಸಾಧ್ಯವಾಗಿದೆ.
ಹಿಂದಿನ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಜತೆಗೆ ಬಿಜೆಪಿ ಒಡೆದು ಚೂರಾಗಿತ್ತು. ಘಟಾನುಘಟಿ ನಾಯಕ ಬಿ.ಎಸ್.ಯಡಿಯೂರಪ್ಪನವರೇ ಪಕ್ಷ ಬಿಟ್ಟು ಹೊರಬಂದು ಹೊಸಪಕ್ಷ ಕಟ್ಟಿದ್ದರು. ಇನ್ನೊಂದೆಡೆ ಶ್ರೀರಾಮಲು ಬಿಎಸ್ ಆರ್ ಪಕ್ಷವನ್ನು ಹುಟ್ಟುಹಾಕಿದ್ದರು. ಬಿಜೆಪಿಯಲ್ಲಿ ಹೇಳಿಕೊಳ್ಳುವಂಥ ನಾಯಕತ್ವವೇ ಇರಲಿಲ್ಲ.
ಸಿಫೋರ್ ಸಮೀಕ್ಷೆ: ಬಿಜೆಪಿಯಿಂದ ಹಿಂದಿ ಹೇರಿಕೆಯಾಗುತ್ತಿದೆಯೇ?
ಜತೆಗೆ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದ ಸಿದ್ದರಾಮಯ್ಯನವರ ಪರವಾದ ಅಲೆಗಳು ರಾಜ್ಯದಲ್ಲಿ ಎದ್ದಿದ್ದವು. ಬಿಜೆಪಿಯ ಆಡಳಿತದಿಂದ ರೋಸಿಹೋಗಿದ್ದ ಜನಕ್ಕೆ ಪರ್ಯಾಯ ಆಡಳಿತದ ಅಗತ್ಯ ಹೆಚ್ಚು ಕಂಡುಬಂದಿತ್ತು. ಹೀಗಾಗಿ ಅನಾಯಾಸವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈಗ ಆಡಳಿತ ಪಕ್ಷದ ವಿರುದ್ಧವೇ ಅಸಮಾಧಾನ!
ಇವತ್ತಿನ ಪರಿಸ್ಥಿತಿ ಹಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವು ಭಾಗ್ಯಗಳ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಜನರಲ್ಲಿ ಚಿಕ್ಕದಾದ ಅಸಮಾಧಾನ ಇದ್ದೇ ಇದೆ. ನಿರಂತರವಾಗಿ ನಡೆದ ರೈತರ ಆತ್ಮಹತ್ಯೆಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಅಧಿಕಾರಿಗಳ ಮೇಲಿನ ಹಲ್ಲೆ, ಕಾಂಗ್ರೆಸ್ ಮುಖಂಡರು ನಡೆಸಿದ ದಾದಾಗಿರಿ, ಭ್ರಷ್ಟಾಚಾರ ಪ್ರಕರಣಗಳು ಹೀಗೆ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಸಜ್ಜಾಗಿರುವುದು ಕಂಡುಬಂದಿದೆ.
ಜೆಡಿಎಸ್ ಗೆ ಅಗ್ನಿಪರೀಕ್ಷೆ
ಹಿಂದೆ ಒಡೆದ ಮನೆಯಾಗಿದ್ದ ಬಿಜೆಪಿ ಮೇಲ್ನೋಟಕ್ಕೆ ಈಗ ಒಂದಾಗಿದೆ. ಜತೆಗೆ ಮೋದಿ ಅಲೆಯೂ ಒಂದಷ್ಟು ಪ್ರಭಾವ ಬೀರಲಿದೆ. ರಾಜಕೀಯ ಚಾಣಕ್ಯ ಅಮಿತ್ ಶಾ ಅವರ ನಿರ್ಧಾರಗಳು, ತಂತ್ರಗಳು ಬಿಜೆಪಿಗೆ ವರದಾನವಾಗಲಿದೆ. ಜತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಲ್ಲಿಯೂ ಬಿಜೆಪಿ ಶಕ್ತವಾಗಿದೆ. ಬಿಜೆಪಿ ಹೈಕಮಾಂಡ್ ಗಟ್ಟಿಯಾಗಿದೆ. ಈ ಸಲ ರಾಜ್ಯನಾಯಕರ ಯಾವ ಆಟವೂ ನಡೆಯದಂತೆ ನೋಡಿಕೊಳ್ಳುವ ಮತ್ತು ಸಮರ್ಥವಾಗಿ ನಿಯಂತ್ರಿಸುವ ಶಕ್ತಿ ಅದಕ್ಕಿದೆ.
ಇನ್ನು ಇತ್ತೀಚೆಗಿನ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಕಿಂಗ್ಮೇಕರ್ ಎಂದೇ ಕರೆಯಿಸಿಕೊಳ್ಳುತ್ತಿರುವ ಜೆಡಿಎಸ್ ಗೆ ಪ್ರಸಕ್ತ ಚುನಾವಣೆ ಅಗ್ನಿಪರೀಕ್ಷೆ. ಪ್ರಾದೇಶಿಕ ಪಕ್ಷಗಳ ಅಸ್ತಿತ್ವದ ಪ್ರಶ್ನೆಯೂ ಹೌದು. ಈಗಾಗಲೇ ರಾಷ್ಟ್ರೀಯ ಪಕ್ಷಗಳ ಆರ್ಭಟಕ್ಕೆ ಸಿಕ್ಕಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಹೀಗಿರುವಾಗ ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಇಲ್ಲಿ ಹೇಗೆ ನೆಲೆ ಕಂಡು ಕೊಳ್ಳುತ್ತದೆ ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ.
ಸಿಫೋರ್ ಸಮೀಕ್ಷೆ: ಕ್ಷೇತ್ರದ ಸಮಸ್ಯೆಗಳ ಪಟ್ಟಿ ಬಹಿರಂಗ
ಸಿದ್ದು ಕಣ್ಣು ಜೆಡಿಎಸ್ ಮೇಲೆ
ಇಲ್ಲಿವರೆಗೆ ಕಾಂಗ್ರೆಸ್ ಕೂಡ ಜೆಡಿಎಸ್ ನತ್ತ ಮೃದು ಧೋರಣೆಯನ್ನೇ ತಾಳುತ್ತಾ ಬಂದಿತ್ತಾದರೂ ಇದೀಗ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡುವ ಮೂಲಕ ಜೆಡಿಎಸ್ ಗೆ ವಿರುದ್ಧವಾಗಿ ನಿಂತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜೆಡಿಎಸ್ ನ್ನು ಹತ್ತಿಕ್ಕಿದಷ್ಟು ಕಾಂಗ್ರೆಸ್ ಗೆ ಲಾಭ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ಜತೆಗೆ ತಾನು ಈಗಾಗಲೇ ದೇವೇಗೌಡರನ್ನು ಟಾರ್ಗೆಟ್ ಮಾಡಿರುವುದರಿಂದ ಮುಂದೆ ತನ್ನನ್ನು ರಾಜಕೀಯವಾಗಿ ಮುಗಿಸಲು ಜೆಡಿಎಸ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಹಾಗಾಗಿ ಜೆಡಿಎಸ್ ಅನ್ನು ಹಣಿದು ಅದು ಕಿಂಗ್ಮೇಕರ್ ಆಗದಂತೆ ನೋಡಿಕೊಳ್ಳುವ ಎಲ್ಲ ರೀತಿಯ ತಂತ್ರಗಳನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ.
ಕೈ ತೆಕ್ಕೆಗೆ ಜೆಡಿಎಸ್ ನಾಯಕರು
ಹಾಗೆನೋಡಿದರೆ ಇಲ್ಲಿವರೆಗೆ ಸಿದ್ದರಾಮಯ್ಯ ಅವರು ಕೂಡ ಜೆಡಿಎಸ್ ತಮಗೆ ಸ್ಪರ್ಧಿಯೇ ಅಲ್ಲ ಎನ್ನುತ್ತಾ ಬಂದಿದ್ದರು. ಆದರೆ ಜೆಡಿಎಸ್ ಮತ್ತು ಬಿಜೆಪಿ ಒಂದನ್ನೊಂದು ಟೀಕೆ ಮಾಡಿಕೊಳ್ಳದೆ ಆಡಳಿತ ಪಕ್ಷದ ಮೇಲೆಯೇ ಬೊಟ್ಟು ಮಾಡುತ್ತಿದ್ದು, ಇದನ್ನು ನೋಡಿದ ಮೇಲೆ ಎಚ್ಚೆತ್ತುಕೊಂಡ ಸಿಎಂ ಈಗ ಜೆಡಿಎಸ್ ಅನ್ನು ಟಾರ್ಗೆಟ್ ಮಾಡಿದ್ದಾರೆ. ಅದರ ಮೊದಲ ಪ್ರಯೋಗ ಎಂಬಂತೆ ಜೆಡಿಎಸ್ ನ ಒಂದಷ್ಟು ಮುಖಂಡರನ್ನು ತಮ್ಮ ಪಾಳೇಯಕ್ಕೆ ಎಳೆದುಕೊಳ್ಳುವುದರೊಂದಿಗೆ ಮರ್ಮಾಘಾತ ನೀಡಿದ್ದಾರೆ.
ಬಳ್ಳಾರಿಯಲ್ಲಿ ಶಾಸಕ ಆನಂದ್ ಸಿಂಗ್, ಚಾಮರಾಜನಗರದಲ್ಲಿ ಮಾಜಿ ಶಾಸಕ, ಬಿಜೆಪಿಯ ಮುಖಂಡ ಎ.ಆರ್.ಕೃಷ್ಣಮೂರ್ತಿ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆಗೊಳಿಸುವ ಮೂಲಕ ಬಿಜೆಪಿಗೂ ಟಾಂಗ್ ನೀಡಿದ್ದಾರೆ. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಿನ ಪರಿಸ್ಥಿತಿಯಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಅನಿವಾರ್ಯತೆ ಎದುರಾಗಿದ್ದು, ಅದನ್ನು ತುಂಬಾ ಜಾಣ್ಮೆಯಿಂದ ಮಾಡುತ್ತಿದ್ದಾರೆ. ದಿನಕಳೆದು ಚುನಾವಣಾ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಗೆಲುವಿಗಾಗಿ ಏನೆಲ್ಲ ಗಿಮಿಕ್ ಗಳನ್ನು ಮಾಡುತ್ತವೆ ಎಂಬುದು ಮಾತ್ರ ಕುತೂಹಲಕಾರಿಯಾಗಿದೆ.