Answer Madi Modi: ನೀವು ಕಾವೇರಿ ವಿಚಾರದಲ್ಲಿ ಮೌನಿಯಾದದ್ದು ಯಾಕೆ?
ಬೆಂಗಳೂರು, ಅಕ್ಟೋಬರ್ 28: ಪ್ರಧಾನಿ ನರೇಂದ್ರ ಮೋದಿ ಅವರೇ, ಬರದಿಂದ ಕಂಗಾಲಾಗಿರುವ ಕನ್ನಡಿಗರ ಕಷ್ಟ ಅರಿತು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದ್ದ ನೀವು ಕಾವೇರಿ ವಿಚಾರದಲ್ಲಿ ಮೌನಿಯಾದದ್ದು ಯಾಕೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಮಳೆಕೊರತೆಯಿಂದಾಗಿ ಕೆಆರ್ಎಸ್, ಕಬಿನಿ, ಹೇಮಾವತಿ ಸೇರಿದಂತೆ ಬಹುತೇಕ ಜಲಾಶಯಗಳ ಒಡಲು ಬರಿದಾಗಿದೆ, ಗಾಯದ ಮೇಲೆ ಬರೆ ಎಳೆದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಲಿಂದ ಮೇಲೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸುತ್ತಲೇ ಇದೆ.

ನಿಮ್ಮ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಉತ್ತರ ಕೊಡಿ ಮೋದಿ ಎಂದು ಹ್ಯಾಶ್ ಟ್ಯಾಗ್ ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಟುಕಿದ್ದಾರೆ.
ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರದ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸುವುದು ಬಹುದೊಡ್ಡ ಸವಾಲು, ಈ ಉದ್ದೇಶಕ್ಕಾಗಿಯೇ ಸಿದ್ಧಪಡಿಸಿರುವ ಯೋಜನೆ ಮೇಕೆದಾಟು ಕೇಂದ್ರ ಸರ್ಕಾರದ ಅನುಮತಿ ಸಿಗದೆ ನೆನೆಗುದಿಗೆ ಬಿದ್ದಿದೆ.
— Siddaramaiah (@siddaramaiah) October 28, 2023
ಪ್ರಧಾನಿ @narendramodi ಅವರೇ, ಕಾವೇರಿ ನಮ್ಮದು, ಮಳೆಗಾಲದಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನಮ್ಮ… pic.twitter.com/hKbtdNxWKR
ಒಂದೂವರೆ ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ನಗರದ ಅಗತ್ಯಕ್ಕೆ ತಕ್ಕಷ್ಟು ನೀರು ಒದಗಿಸುವುದು ಬಹುದೊಡ್ಡ ಸವಾಲು, ಈ ಉದ್ದೇಶಕ್ಕಾಗಿಯೇ ಸಿದ್ಧಪಡಿಸಿರುವ ಯೋಜನೆ ಮೇಕೆದಾಟು ಕೇಂದ್ರ ಸರ್ಕಾರದ ಅನುಮತಿ ಸಿಗದೆ ನೆನೆಗುದಿಗೆ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ, ಕಾವೇರಿ ನಮ್ಮದು, ಮಳೆಗಾಲದಲ್ಲಿ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನಮ್ಮ ಪಾಲಿನ ನೀರನ್ನು ನಾವು ಬಳಕೆ ಮಾಡಿಕೊಳ್ಳಲು ಇನ್ನೆಷ್ಟು ವರ್ಷ ಕಾಯಬೇಕು? ಎಂದು ಪ್ರಶ್ನಿಸಿದ್ದಾರೆ.

ಬರಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನಿತ್ಯ ಕಾವೇರಿ ನೀರು ಬಿಡುವಂತೆ ಸಿ.ಡಬ್ಲ್ಯೂ.ಸಿ ಆದೇಶಿಸಿದೆ. ಕನ್ನಡಿಗರ ಕಷ್ಟ ಅರಿತು ಮಧ್ಯಪ್ರವೇಶಿಸಬೇಕಿದ್ದ ಪ್ರಧಾನಿಗಳು ಮತ್ತು ರಾಜ್ಯವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ 26 ಲೋಕಸಭಾ ಹಾಗೂ 6 ರಾಜ್ಯಸಭಾ ಸದಸ್ಯರ ಮೌನ ನೊಂದ ಜೀವಗಳನ್ನು ಅಣಕಿಸಿದಂತಿದೆ.
ಸಾಮಾಜಿಕ ಜಾಲತಾಣ ಅಭಿಯಾನದ ಮುಂದಿನ ಭಾಗವಾಗಿ ಇಂದು ಅಂತರ್ರಾಜ್ಯ ನೀರು ಹಂಚಿಕೆಗೆ ಸಂಬಂಧಿಸಿದ ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಯ ಉದ್ದೇಶದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ, ಅನುದಾನ ಮತ್ತು ಪ್ರಾಶಸ್ತ್ಯ ನೀಡದೆ, ಬರದ ನಡುವೆ ಕನ್ನಡಿಗರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿರುವ ಬಗ್ಗೆ ಧ್ವನಿಯೆತ್ತಲಾಗುವುದು.
ಕಾವೇರಿ ನೀರು ಹಂಚಿಕೆಯಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಪ್ರಧಾನಿ ಮೋದಿ ಅವರ ಮೌನ, ಮೇಕೆದಾಟು ಯೋಜನೆಗೆ ಸಿಗದ ಅನುಮತಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಘೋಷಿಸಲಾದ ಅನುದಾನ ಬಜೆಟ್ ಪುಸ್ತಕಕ್ಕಷ್ಟೇ ಸೀಮಿತವಾಗಿರುವುದು ಹೀಗೆ ಕೇಂದ್ರದ ಅಸಹಕಾರದಿಂದಾಗಿ ಕರುನಾಡು ಬಡವಾಗುತ್ತಿರುವ ಬಗ್ಗೆ ನ್ಯಾಯಕ್ಕಾಗಿ ಆಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications