ಕರ್ನಾಟಕದಲ್ಲಿ ಅವಧಿಗೆ ಮುನ್ನ ಎಲೆಕ್ಷನ್ ಗೆ ಈ 5 ಕಾರಣ ಸಾಲದೆ?
ಕರ್ನಾಟಕದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ಚುನಾವಣೆ ನಡೆಯಲಿದೆಯಾ? ರಾಜಕೀಯ ಶಕುನಗಳು ಅದನ್ನೇ ಹೇಳುತ್ತಿವೆ. ಸಿದ್ರಾಮಣ್ಣ ಅವರು ದಿನಕ್ಕೊಂದು ಜಾತಿಯ ಓಲೈಕೆಗೆ ನಿಂತಿದ್ದಾರೆ. ಮೊನ್ನೆ ದಿಢೀರನೆ ಕೃಷಿ ಸಾಲ ಮನ್ನಾ ಮಾಡಿದ್ದಾರೆ. ನಾವೆಲ್ಲ ಒಳ್ಳೆ ದೋಸ್ತ್ ಗಳು ಅನ್ನೋ ಥರ ಕಾಂಗ್ರೆಸ್ ನ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ.
ಇವೆಲ್ಲ ಒಂದು ಕಡೆಯಾಯಿತು. ಮತ್ತೊಂದು ಕಡೆಯಿಂದ ಈ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ನ ನಾಯಕರು ಸುಳಿವು ಕೊಡುತ್ತಿದ್ದಾರೆ. ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಈ ಡಿಸೆಂಬರ್ ಗೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬಂದು ಹೋದ ನಂತರ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹಲವು ಸುತ್ತಿನ ಮಾತುಕತೆ ನಡೆಸಿದ ನಂತರ, ಕೆಪಿಸಿಸಿಯಲ್ಲಿ ಪರಮೇಶ್ವರ್ ರನ್ನೇ ಮುಂದುವರಿಸಿ, ಜಾತಿ ಸಮೀಕರಣದಲ್ಲಿ ಕೆಲ ಮುಖಂಡರಿಗೆ ಜವಾಬ್ದಾರಿ ಕೊಟ್ಟ ನಂತರ ಅನುಮಾನ ಬಲವಾಗಿದೆ. ಅವಧಿಗೆ ಮುಂಚೆಯೇ ಅದರೆ ಡಿಸೆಂಬರ್ ಹೊತ್ತಿಗೆ ರಾಜ್ಯದಲ್ಲಿ ಚುನಾವಣೆ ನಡೆಸುವ ಇರಾದೆ ಗೋಚರಿಸುತ್ತಿದೆ.

ಡಿಸೆಂಬರ್ ನಲ್ಲೇ ಏಕೆ ಚುನಾವಣೆ?
ಇದು ಯಾಕೆ ಪದೇ ಪದೇ ಡಿಸೆಂಬರ್ ನಲ್ಲೇ ಚುನಾವಣೆ ಎಂಬ ಮಾತು ಬರುತ್ತಿದೆ ಎಂಬ ಪ್ರಶ್ನೆ ಸಹಜ. ಏಕೆಂದರೆ ಬಹುತೇಕ ಇದೇ ವೇಳೆಯಲ್ಲೇ ಗುಜರಾತ್ ನಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಅಮಿತ್ ಶಾ-ನರೇಂದ್ರ ಮೋದಿ ಜೋಡಿ ಅಲ್ಲಿ ಚುನಾವಣೆಯಲ್ಲಿ ತೊಡಗಿಕೊಂಡರೆ ಕರ್ನಾಟಕದ ಕಡೆ ಅಷ್ಟೊಂದು ಗಮನ ಕೊಡುವುದು ಕಷ್ಟ.
ಆಗ ಇಲ್ಲಿನ ಬಿಜೆಪಿ ನಾಯಕರಿಗೆ ಎದುರು ಜವಾಬು ಕೊಡುವುದು ದೊಡ್ಡ ಮಟ್ಟದ ಕಷ್ಟವಾಗಲಾರದು. ಅದರ ಬದಲು ಇನ್ನೂ ಮುಂದಕ್ಕೆ ಸಮಯ ಕೊಟ್ಟರೆ ಉತ್ತರಪ್ರದೇಶದಲ್ಲಿ ಈ ಜೋಡಿ ಎಬ್ಬಿಸಿದ ಬಿರುಗಾಳಿ ಕರ್ನಾಟಕದಲ್ಲಿ ಶುರುವಾಗುತ್ತದೆ. ಆಗ ಬಿಜೆಪಿಯನ್ನು ಎದುರಿಸುವುದು ಸಲೀಸಲ್ಲ.

ಮತ್ತೊಂದು ಬಜೆಟ್ ಗೆ ಅವಕಾಶ ಕೊಡಬಾರದು
ಕೇಂದ್ರ ಸರಕಾರದ ಮುಂದಿನ ಬಜೆಟ್ ವರೆಗೆ ಸುಮ್ಮನಿದ್ದು ಬಿಟ್ಟರೆ ಕರ್ನಾಟಕ ವಿಧಾನಸಭೆ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಕೊಟ್ಟುಬಿಟ್ಟರೆ ಇಲ್ಲಿ ಚುನಾವಣೆಗೆ ತೆರಳುವುದು ಕಾಂಗ್ರೆಸ್ ಗೆ ಕಷ್ಟವಾಗಿಬಿಡುತ್ತದೆ.

ಮತ್ತೆ ಬರ-ಕಾವೇರಿ ಸಮಸ್ಯೆ
ಇನ್ನು ಏಪ್ರಿಲ್-ಮೇ ವೇಳೆಗೆ ಮತ್ತೆ ಬೇಸಿಗೆ ಕಾಲ, ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಕಾವೇರಿ ಜಲ ವಿವಾದ ತಲೆ ಎತ್ತಿಬಿಟ್ಟರೆ ಅದರಿಂದ ಆಡಳಿತಾರೂಢ ಪಕ್ಷಕ್ಕೆ ಹೊಡೆತವೇ. ಮಾಡಿದ ಎಂಥ ಒಳ್ಳೆ ಕೆಲಸಗಳಿದ್ದರೂ ಉಳಿದ ಕೊರತೆಗಳು ಜನರ ಮನದಲ್ಲಿ ಉಳಿದು, ಕಾಂಗ್ರೆಸ್ ಗೆ ಮೈನಸ್ ಆಗುವ ಸಾಧ್ಯತೆಗಳಿರುತ್ತವೆ.

ಗುಪ್ತಚರ ಇಲಾಖೆ ಮಾಹಿತಿ
ಗುಪ್ತಚರ ಇಲಾಖೆಯ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಮುಖ್ಯಮಂತ್ರಿಗಳಿಗೆ ಜನರ ಅಭಿಪ್ರಾಯದ ಬಗ್ಗೆ ಮಾಹಿತಿ ರವಾನೆ ಆಗುತ್ತಿರುತ್ತದೆ. ಪ್ರತಿಪಕ್ಷಗಳು ಪ್ರಬಲ ಆಗುವ ಮುನ್ನ, ರಾಜ್ಯ ಸರಕಾರದ ಚರಿಷ್ಮಾ ಚೆನ್ನಾಗಿ ಇರುವಾಗಲೇ ಚುನಾವಣೆ ಎದುರಿಸಿದರೆ ಹೆಚ್ಚು ಅನುಕೂಲ. ಆ ಬಗ್ಗೆ ಉತ್ತಮ ಸಂದೇಶ ಬಂದಿರುವ ಕಾರಣಕ್ಕೆ ಚುನಾವಣೆಗೆ ಹೋಗುವ ಮನಸ್ಸು ಮಾಡಬಹುದು.

ಕಾದ ಕಬ್ಬಿಣವನ್ನೇ ಬಡಿಯಬೇಕು
ಕಬ್ಬಿಣವು ಕಾದಿರುವಾಗಲೇ ಬಡಿಯಬೇಕು. ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಮತ್ತಿತರ ಯೋಜನೆಗಳ ಹೆಸರಲ್ಲಿ ಜನರ ಮುಂದೆ ಹೋಗಬಹುದು. ಒಂದು ವೇಳೆ ಮುಂದಿನ ರಾಜ್ಯ ಬಜೆಟ್ ಮಂಡಿಸಿದರೂ ಅದನ್ನು ಎಷ್ಟೇ ಜನಪರ, ಜನಹಿತ ಎಂದು ಕೊಂಡಾಡಿದರೂ ಅದರಿಂದ ಆಗುವ ಪ್ರಯೋಜನ ಏನೂ ಇಲ್ಲ. ಏಕೆಂದರೆ ಕಾಂಗ್ರೆಸ್ ನ ಅವಧಿಯೇ ಮುಗಿಯುತ್ತಾ ಬಂದಿರುತ್ತದೆ. ಆ ಬಜೆಟ್ ನ ಜನ ನಂಬುವುದಿಲ್ಲ.












Click it and Unblock the Notifications