ಆಟಕ್ಕುಂಟು ಲೆಕ್ಕಕ್ಕಿಲ್ಲದ ಡಿಸಿಎಂ ಹುದ್ದೆಗೆ ಬೊಮ್ಮಾಯಿ ಸರ್ಕಾರದಲ್ಲಿ ಕೊಕ್
ಬೆಂಗಳೂರು, ಜು. 04: ಡಿಸಿಎಂ ಹುದ್ದೆಗಳ ನೇಮಕ ಸಂಸ್ಕೃತಿಗೆ ಶಾಶ್ವತವಾಗಿ ತಿಲಾಂಜಲಿ ಇಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಆರಂಭಿಕ ಹೆಜ್ಜೆ ಇಟ್ಟಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಡಿಸಿಎಂ ಹುದ್ದೆಗಳನ್ನು ರದ್ದು ಮಾಡಿ ಹೊಸ ಫಂಕ್ತಿಗೆ ನಾಂದಿ ಹಾಡಿದೆ. ರಾಜ್ಯದಲ್ಲಿ ಡಿಸಿಎಂ ಹುದ್ದೆಗಳ ಸೃಷ್ಟಿಯ ಉಸಾಬರಿಯೇ ಬೇಡ ಎಂದು ಆರ್ಎಸ್ಎಸ್ ನಾಯಕರು ನೀಡಿದ ಸಲಹೆಯನ್ನು ಬಿಜೆಪಿ ಕೇಂದ್ರ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಯಡಿಯೂರಪ್ಪನ ಅವಧಿ ಸೃಷ್ಟಿಯಾಗಿದ್ದ ಮೂರು ಡಿಸಿಎಂ ಹುದ್ದೆಗಳನ್ನು ರದ್ದು ಮಾಡಲಾಗಿದೆ. ಅಂತೂ ಡಿಸಿಎಂ ಹುದ್ದೆ ಕಿರಿಕಿರಿ ಇಲ್ಲದೇ ಆಡಳಿತ ನಡೆಸಲು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ.
ಒನ್ ಇಂಡಿಯಾ ಕನ್ನಡ ವರದಿ ಸುಳಿವು : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಕಾದಾಟ ಶುರುವಾಗಿತ್ತು. ಪ್ರಭಲ ಜಾತಿವಾರು ಹಿರಿಯ ನಾಯಕರು ಡಿಸಿಎಂ ಹುದ್ದೆಗಳಿಗಾಗಿ ಪೈಪೋಟಿ ನಡೆಸುತ್ತಿದ್ದರು. ಬಿ.ಎಸ್. ಯಡಿಯೂರಪ್ಪ ಆಡಳಿತದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಲಾಗಿತ್ತು. ಡಿಸಿಎಂ ಹುದ್ದೆಗೆ ಆಯ್ಕೆಯಾದವರಿಗೆ ಪ್ರಭಾವಿ ಸಚಿವ ಖಾತೆಯನ್ನು ನೀಡಬೇಕು. ಸಂವಿಧಾನದಲ್ಲಿ ಮಾನ್ಯತೆ ಇಲ್ಲದ ಡಿಸಿಎಂ ಹುದ್ದೆಗಳ ಸೃಷ್ಟಿಯಿಂದ ಆದ ಲಾಭಕ್ಕಿಂತಲೂ ನಷ್ಟವೇ ಹೆಚ್ಚಾಗಲು ಶುರುವಾಯಿತು. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭ ಹೊರತು ಪಡಿಸಿ ನಮ್ಮ ಪಕ್ಷ ಆಡಳಿತದಲ್ಲಿದ್ದರೆ ಡಿಸಿಎಂ ಹುದ್ದೆ ರಚನೆ ಮಾಡುವುದೇ ಬೇಡ. ಡಿಸಿಎಂ ಹುದ್ದೆಗಳ ಸೃಷ್ಟಿಯಿಂದ ಆಗುವ ಪ್ರಯೋಜನ ಏನೂ ಇಲ್ಲ. ಡಿಸಿಎಂ ಹುದ್ದೆ ಸೃಷ್ಟಿಸಿ ಗೊಂದಲ, ಭಿನ್ನಮತಕ್ಕೆ ನಾಂದಿ ಹಾಡುವ ಬದಲಿಗೆ ಸುಗಮ ಆಡಳಿತಕ್ಕೆ ಅವಕಾಶ ಮಾಡಿಕೊಡುವುದು ಸೂಕ್ತ ಎಂದು ಆರ್ಎಸ್ಎಸ್ ನಾಯಕರು ಬಿಜೆಪಿ ವರಿಷ್ಠರಿಗೆ ಸೂಚನೆ ನೀಡಿದ್ದರು. ಇದನ್ನು ಉಲ್ಲೇಖಿಸಿ ಒನ್ ಇಂಡಿಯಾ ಕನ್ನಡ "ಡಿಸಿಎಂ ಹುದ್ದೆಗೆ ತಿಲಾಂಜಲಿ ಇಡಲು ಆರ್ಎಸ್ಎಸ್ ನಾಯಕರ ಕಸರತ್ತು" ಅಡಿ ಬರಹದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಡಿಸಿಎಂ ಹುದ್ದೆ ರದ್ದು ಮಾಡಿರುವುದು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ.

ಯಡಿಯೂರಪ್ಪ ಅವಧಿಯ ಮೂರು ಡಿಸಿಎಂಗಳ ಕಥೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಾತಿಗೊಂದು ಡಿಸಿಎಂ ಹುದ್ದೆ ನೀಡಿದ್ದರು. ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಡಿಸಿಎಂಗಳಾಗಿದ್ದರು. ವಾಸ್ತವದಲ್ಲಿ ಅದ ಸಂವಿಧಾನ ಬದ್ಧವಾಗಿ ರಚನೆಯಗಿರುವ ಹುದ್ದೆಗಳು ಅಲ್ಲ. ಅದಕ್ಕೆ ಯಾವುದೇ ವೇತನ, ಸರ್ಕಾರಿ ಸೌಲತ್ತುಗಳು ಇಲ್ಲ. ಆಡಳಿತ ರೂಢ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಿಕೊಂಡಿರುವ ಹುದ್ದೆಗಳು. ಕರ್ನಾಟಕದಲ್ಲಿ ಮೂವರು ಡಿಸಿಎಂಗಳ ನೇಮಕದಿಂದ ಆದ ಉಪಯೋಗ ವೇನು ಎಂಬ ಮೂಲ ಭೂತ ಪ್ರಶ್ನೆಯನ್ನು RSS ನಾಯಕರು ಎತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ವರಿಷ್ಠರಿಗೂ ಇದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಡಿಸಿಎಂ ಹುದ್ದೆಗಳಿಗೆ ತಿಲಾಂಜಲಿ ಇಡಲಾಗಿದೆ.

ಡಿಸಿಎಂ ಹುದ್ದೆಗೆ ಸಂವಿಧಾನಿಕ ಮಾನ್ಯತೆ ಇಲ್ಲ ಎಂಬುದು ಎಲ್ಲಾ ರಾಜಕಾರಣಿಗಳಿಗೂ ಗೊತ್ತು. ಆದರೆ ಡಿಸಿಎಂ ಆಗಿ ಎರಡು ವರ್ಷ ಸೇವೆ ಸಲ್ಲಿಸಿದರೆ ಸಿಎಂ ಅಭ್ಯರ್ಥಿಗೆ ಅರ್ಹತೆ ಪಡೆದಂತಾಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಜನರ ಭಾವನೆಯಲ್ಲಿ ಸಹ ಡಿಸಿಎಂ ಅಂದ್ರೆ ಸಿಎಂ ಗಿಂತಲೂ ಸ್ವಲ್ಪ ಕೆಳಗಿನ ಹುದ್ದೆ ಎಂಬ ಭಾವನೆಯಿದೆ. ಇದರ ಲಾಭ ಪಡೆಯುವ ಉದ್ದೇಶಕ್ಕಾಗಿಯೇ ತಮ್ಮ ಸಮುದಾಯದ ನಾಯಕ ಎಂಬ ಅಜೆಂಡಾ ಮುಂದಿಟ್ಟುಕೊಂಡು ಡಿಸಿಎಂ ಹುದ್ದೆ ಗಿಟ್ಟಿಸಲು ಪೈಪೋಟಿ ನಡೆಸುತ್ತಿದ್ದಾರೆ. ಆಡಳಿತಾತ್ಮಕವಾಗಿ ಮುಖ್ಯಮಂತ್ರಿಗಳು ಹೊರತು ಪಡಿಸಿದರೆ ಅವರ ಅನುಪಸ್ಥಿತಿಯಲ್ಲಿ ಸಹ ಡಿಸಿಎಂ ಯಾವುದೇ ಕಡತಕ್ಕೆ ಸಹಿ ಹಾಕಲು ಅವಕಾಶವಿಲ್ಲ. ಒಂದು ಕಡತ ನೋಡಲು ಸಾಧ್ಯವಿಲ್ಲ. ಇಂತಹ ಪದವಿಗಾಗಿ ನಾಯಕರ ನಡುವೆ ಗುದ್ದಾಟ ಶುರುವಾಗಿ ಇಡೀ ಪಕ್ಷಕ್ಕೆ ನಷ್ಟವುಂಟು ಮಾಡುವ ಬೆಳವಣಿಗೆ ಕರ್ನಾಟಕದಲ್ಲಿ ಶುರುವಾಯಿತು. ಡಿಸಿಎಂ ಹುದ್ದೆಗಾಗಿ ಬರೋಬ್ಬರಿ ಆರು ಮಂದಿ ಹಿರಿಯ ನಾಯಕರು ಪೈಪೋಟಿಗೆ ಇಳಿದಿದರು. ಇದೆಲ್ಲದಕ್ಕೂ ಕಡಿವಾಣ ಹಾಕಲು ಆರ್.ಎಸ್. ಎಸ್. ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಲ್ಲ ಎಂದು ಆರ್ಎಸ್ಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.











Click it and Unblock the Notifications