Karnataka CM : ಡಿಕೆಶಿ Vs ಸಿದ್ದರಾಮಯ್ಯ : ಒನ್ ಇಂಡಿಯಾ ಓದುಗರ ಆಯ್ಕೆ ಯಾರು?
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಪಡೆದ ಕಾಂಗ್ರೆಸ್ ಸರ್ಕಾರ ರಚಿಸಲು ಕಸರತ್ತು ಮಾಡುತ್ತಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಿಎಂ ಖುರ್ಚಿಗಾಗಿ ಹಗ್ಗ ಜಗ್ಗಾಟ ಮಾಡುತ್ತಿದ್ದು, ಮುಂದಿನ ಸಿಎಂ ಯಾರಾಗ್ತಾರೆ ಎನ್ನುವ ಕುತೂಹಲ ಸದ್ಯ ರಾಜ್ಯದ ಜನರನ್ನು ಕಾಡುತ್ತಿದೆ.
ಭಾನುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ 135 ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಮುಖ್ಯಮಂತ್ರಿ ಯಾರು ಎಂದು ನಿರ್ಧರಿಸುವ ಹೊಣೆಯನ್ನು ಹೈ ಕಮಾಂಡ್ಗೆ ವಹಿಸಲಾಗಿದೆ. ರಾಜ್ಯದ ಜನ ತಮ್ಮದೇ ಆಯ್ಕೆಗಳನ್ನು ಮುಂದಿಟ್ಟು, ಇವರೇ ಸಿಎಂ ಆಗಲಿ ಎನ್ನುತ್ತಿದ್ದಾರೆ. ಮಠಾಧಿಪತಿಗಳು, ವಕ್ಫ್ ಬೋರ್ಡ್ ಕೂಡ ಸಿಎಂ, ಡಿಸಿಎಂ ಸ್ಥಾನ ಇಂತಹವರಿಗೆ ನೀಡಬೇಕು ಎನ್ನುವ ಬೇಡಿಕೆ ಇಡುತ್ತಿದ್ದಾರೆ.

ಮುಂದಿನ ಸಿಎಂ ಯಾರಾಗಬೇಕು ಎನ್ನುವ ಒನ್ ಇಂಡಿಯಾ ಕನ್ನಡ ಕೇಳಿದ ಪ್ರಶ್ನೆಗೆ ಓದುಗರು ಉತ್ತರ ನೀಡಿದ್ದಾರೆ. ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾರು ಎಂದು ಕೇಳಲಾಗಿತ್ತು. ಟ್ವಿಟರ್ ನಲ್ಲಿ ಕೇಳಿದ ಪ್ರಶ್ನೆಗೆ ಶೇ. 67.8 ಮಂದಿ ತಮ್ಮ ಆಯ್ಕೆ ಸಿದ್ದರಾಮಯ್ಯ ಎಂದಿದ್ದರೆ, ಉಳಿದ ಶೇ. 32.2 ಓದುಗರು ಡಿಕೆಶಿ ಮೇಲೆ ಒಲವು ತೋರಿದ್ದಾರೆ.
ಫೇಸ್ಬುಕ್ನಲ್ಲಿ ಕೂಡ ಓದುಗರು ಸಿದ್ದರಾಮಯ್ಯ ಅವರ ಪರವಾಗಿ ಹೆಚ್ಚಿನ ಒಲವು ತೋರಿದ್ದಾರೆ. ಡಿಕೆ ಶಿವಕುಮಾರ್ ಆಗಲಿ ಎಂದು ಕೆಲವು ಓದುಗರು ಹೇಳಿದ್ದರು, ಇನ್ನೂ ಕೆಲವು ಇಬ್ಬರೂ ಬೇಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿ, ಪರಮೇಶ್ವರ್ ಅವರನ್ನು ಸಿಎಂ ಮಾಡಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕಗ್ಗಂಟು ಬಿಡಿಸಲು ಅಧಿಕಾರ ಹಂಚಿಕೆ ಸೂತ್ರ?
ಇಬ್ಬರೂ ಪ್ರಬಲ ನಾಯಕರಾಗಿದ್ದು ಒಬ್ಬರು ಮುನಿಸಿಕೊಂಡರೂ ಪಕ್ಷಕ್ಕೆ ಭಾರಿ ಹೊಡೆತ ಬೀಳಲಿದೆ, ಹೈಕಮಾಂಡ್ ಈ ಕಗ್ಗಂಟು ಬಿಡಿಸಲು ಭಾರಿ ಕಸರತ್ತು ಮಾಡುತ್ತಿದೆ, ಏನೇ ಆದರು ಒಗ್ಗಟ್ಟಾಗಿ ಹೋಗಲು ಇಬ್ಬರು ನಾಯಕರ ಮನವೊಲಿಸಲು ಪ್ರಯತ್ನ ಮಾಡಲಾಗುತ್ತಿದೆ.
ಇಬ್ಬರನ್ನೂ ಸಮಾಧಾನ ಪಡಿಸಲು ಅಧಿಕಾರ ಹಂಚಿಕೆ ಸೂತ್ರವನ್ನು ಹೈಕಮಾಂಡ್ ಮುಂದಿಟ್ಟಿದೆ ಎನ್ನಲಾಗಿದೆ. ಡಿಕೆ ಶಿವಕುಮಾರ್ 2.5 ವರ್ಷಗಳಿಗೆ ಸಿಎಂ ಆದರೆ ಸಿದ್ದರಾಮಯ್ಯ 2.5 ವರ್ಷಗಳ ಅವಧಿಗೆ ಸಿಎಂ ಆಗಲಿ ಎಂದು ಕೇಳಿದೆ, ಇದಕ್ಕೆ ಡಿಕೆ ಶಿವಕುಮಾರ್ ಇನ್ನೂ ಒಪ್ಪಿಗೆ ನೀಡಿಲ್ಲ ಎನ್ನಲಾಗಿದ್ದು, ಸಿದ್ದರಾಮಯ್ಯ ಈ ಸೂತ್ರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಮೊದಲು ಸಿಎಂ ಯಾರಾಗಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಇಂದು (ಸೋಮವಾರ) ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತುಕತೆ ಬಳಿಕ ಮುಖ್ಯಂಮತ್ರಿ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.












Click it and Unblock the Notifications