ಬಿಜೆಪಿ ಹಾಲಿ ಸಂಸದರಲ್ಲಿ ಈ ಬಾರೀ ಯಾರಿಗೆ ಮತ್ತೊಮ್ಮೆ ಚಾನ್ಸ್, ಯಾರಿಗೆ ಟಿಕೆಟ್ ಇಲ್ಲ?
ಬೆಂಗಳೂರು, ಜನವರಿ 16: 2023 ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ರಾಜ್ಯ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿರುವ ತನ್ನ ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಟಿಕೆಟ್ ನೀಡುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ಹೌದು, ವಿಧಾನಸಭಾ ಚುನಾವಣೆಯ ತಂದ ಬದಲಾವಣೆಯಂತೆ ವಯೋಮಿತಿಯ ಆಧಾರದ ಮೇಲೆ ಹಾಗೂ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಅನಿವಾರ್ಯತೆ ದೃಷ್ಟಿಯಿಂದ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವನ್ನ ಹಾಕಿಕೊಂಡಿದೆ.

ಬಿಜೆಪಿಯಲ್ಲಿ 70 ವರ್ಷ ಮೇಲ್ಪಟ್ಟ ಹಲವು ಹಾಲಿ ಸಂಸದರಿಗೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದೆ. ಅಲ್ಲದೇ ಹೊಸ ಮುಖಕ್ಕೆ ಮಣೆ ಹಾಕಲು ಹೈಕಮಾಂಡ್ ತಯಾರಿ ನಡೆಸಿದೆ. ಇತ್ತ ಬಿಜೆಪಿಯಲ್ಲಿ ನಾಲ್ಕೈದು ಹಾಲಿ ಸಂಸದರು ವೈಯಕ್ತಿಕವಾಗಿಯೇ ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ನಡೆಸಿದ್ದಾರೆ. ಹಾಗಾದರೆ ಯಾರಿಗೆ ಮತ್ತೊಮ್ಮೆ ಟಿಕೆಟ್ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
2024 ರ ಲೋಕಸಭಾ ಚುನಾವಣೆಯಲ್ಲಿ ಈ ಸಂಸದರಿಗೆ ಟಿಕೆಟ್ ಫಿಕ್ಸ್?
ಬೆಂಗಳೂರು ಕೇಂದ್ರ; ಪಿ ಸಿ ಮೋಹನ್
ಬೆಂಗಳೂರು ಉತ್ತರ : ಡಿ ವಿ ಸದಾನಂದಗೌಡ
ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಶಿವಮೊಗ್ಗ: ಬಿ ವೈ ರಾಘವೇಂದ್ರ
ದಾವಣಗೆರೆ: ಜಿ ಎಂ ಸಿದ್ದೇಶ್ವರ್
ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲ್
ಹುಬ್ಬಳ್ಳಿ-ಧಾರವಾಡ: ಪ್ರಹ್ಲಾದ್ ಜೋಶಿ
ಬಾಗಲಕೋಟೆ: ಪಿ. ಸಿ. ಗದ್ದಿಗೌಡರ್
ಉತ್ತರ ಕನ್ನಡ: ಅನಂತ ಕುಮಾರ್ ಹೆಗ್ಡೆ
ಕೊಪ್ಪಳ: ಕರಡಿ ಸಂಗಣ್ಣ
ವಿಜಯಪುರ: ರಮೇಶ್ ಜಿಗಜಿಣಗಿ
ಕಲಬುರ್ಗಿ: ಉಮೇಶ್ ಜಾದವ್
ಬೀದರ್: ಭಗವಂತ್ ಖೂಬಾ
ಚಿತ್ರದುರ್ಗ: ಎ ನಾರಾಯಣಸ್ವಾಮಿ
ರಾಯಚೂರು : ರಾಜಾ ಅಮರೇಶ್ವರ
ಮೈಸೂರು: ಪ್ರತಾಪ್ ಸಿಂಹ
ಹಾಲಿ ಸಂಸದರಲ್ಲಿ ಯಾರಿಗೆ ಟಿಕೆಟ್ ಡೌಟ್?
ಬಿಜೆಪಿಯ ಹಿರಿಯ ನಾಯಕ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರ ಪತ್ನಿ ಮಂಗಳ ಅಂಗಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ, ಮುಂದಿನ ಚುನಾವಣೆಯಲ್ಲಿ ಮಂಗಳ ಅಂಗಡಿ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಸೋಲಾಗಬಹುದು ಎಂಬ ಲೆಕ್ಕಾಚಾರವನ್ನ ಬಿಜೆಪಿ ಹಾಕಿಕೊಂಡಿದ್ದು, ಈ ಬಾರೀ ಮಂಗಳ ಅಂಗಡಿಯವರ ಬದಲಿದೆ ಮಾಜಿ ಸಚಿವ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಹಲವು ಹಾಲಿ ಸಂಸದರ ಪೈಕಿ ತುಮಕೂರು ಹಾಲಿ ಸಂಸದರಾದ ಜಿ ಎಸ್ ಬಸವರಾಜು ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನವಾಗಿದೆ. ಏಕೆಂದರೆ, ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಸೋಲು ಕಂಡ ವಿ ಸೋಮಣ್ಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಹೈಕಮಾಂಡ್ ನಾಯಕರ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿ ಸೋಮಣ್ಣ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ತುಮಕೂರು ಹಾಲಿ ಸಂಸದರಾದ ಜಿ ಎಸ್ ಬಸವರಾಜು ಅವರು ಟಿಕೆಟ್ ಸಿಗುವುದು ಅನುಮಾನವಾಗಿದೆ.
ಇನ್ನೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವರಾದ ಸಿ ಪಿ ಯೋಗೇಶ್ವರ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಸಿ ಪಿ ಯೋಗೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ರಾಜಕೀಯ ಜೀವನದಲ್ಲಿ ಮುಂದುವರೆಯಲು ಇಷ್ಟ ಇಲ್ಲದೇ ನಾನು ಮಾರ್ಚ್ ತಿಂಗಳಿನಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿಗೊಳಿಸುವುದಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಶ್ರೀನಿವಾಸ್ ಪ್ರಸಾದ್ ಹೇಳಿದ್ದು, ಈ ಬಾರಿಯ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.
ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರೂ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಷ್ಟೊಂದು ಆಸಕ್ತರಾಗಿಲ್ಲ. ಹೀಗಾಗಿ ಈ ಬಾರೀ ಹೊಸಬರಿಗೆ ಅವಕಾಶ ಸಿಗಲಿದೆ. ಹಾವೇರಿ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯ ಕೊರತೆ ಉಂಟಾಗಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ತಮ್ಮ ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನ ಕೂಡ ಈಶ್ವರಪ್ಪ ಭೇಟಿ ಮಾಡಿದ್ದಾರೆ. ಹೀಗಾಗಿ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಸಿಗಲಿದೆ ಎನ್ನಲಾಗಿದೆ.
ಇತ್ತ ಚಿಕ್ಕಬಳ್ಳಾಪುರ ಹಾಲಿ ಸಂಸದರಾದ ಬಿ ಎನ್ ಬಚ್ಚೇಗೌಡರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕಾಗಿ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಚಿವ ಡಾ. ಕೆ ಸುಧಾಕರ್, ಮಾಜಿ ಸಚಿವ ಎಂ ಟಿ ನಾಗರಾಜ್ ಪುತ್ರ ನಿತೀನ್ ಪುರುಷೋತ್ತಮ್ ಹಾಗೂ ಎಸ್ ಆರ್ ವಿಶ್ವನಾಥ್ ತಮ್ಮ ಪುತ್ರನನ್ನ ಕಣಕ್ಕಿಳಿಸುವ ಕುರಿತು ಪೈಪೋಟಿ ನಡೆಸಿದ್ದು, ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನ ಕಾದುನೋಡಬೇಕಾಗಿದೆ.
ಚಿಕ್ಕೋಡಿ ಹಾಲಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದ್ದು, ಈ ಬಾರೀ ರಮೇಶ್ ಕತ್ತಿ ಅವರಿಗೆ ಟಿಕೆಟ್ ಸಿಗಲಿದೆ. ಇನ್ನೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಶ್ರೀರಾಮಲು ಅವರು ಬಳ್ಳಾರಿಯಿಂದ ಸ್ಪರ್ಧಿಸುವ ಕುರಿತು ಬಿಜೆಪಿ ಹಿರಿಯ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ನಲಿ, ಈ ಬಾರಿ ಹಲವು ಹಾಲಿ ಸಂಸದರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದ್ದು, ಯಾರಿಗೆ ಟಿಕೆಟ್ ಸಿಗುತ್ತೆ, ಈ ಬಾರೀ ಯಾವ ಹೊಸ ಮುಖಗಳಿಗೆ ಅವಕಾಶ ಸಿಗುತ್ತೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications