Bengaluru 2nd Airport: ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆಯಾದ 3 ಸ್ಥಳಗಳಲ್ಲಿ ಯಾವ ಜಾಗ ಬೆಸ್ಟ್?
ಬೆಂಗಳೂರು, ಮಾರ್ಚ್ 14: ಬೆಂಗಳೂರಲ್ಲಿ ಎರಡನೇ ಇಂಟರ್ನ್ಯಾಷನಲ್ ಏರ್ಪೋರ್ಟ್ ನಿರ್ಮಾಣದ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. 2 ನೇ ವಿಮಾನ ನಿಲ್ದಾಣದ ಕುರಿತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ದೇಶದ ಸಂಸತ್ನಲ್ಲೂ ಪ್ರಸ್ತಾಪ ಗಮನ ಸೆಳೆದಿದ್ದು, ಇನ್ನೂ ಈ ವಿಚಾರವಾಗಿ ತಮಿಳು ನಾಡು ಹಾಗೂ ಕರ್ನಾಟಕದಲ್ಲೂ ಜಟಾಪಡಿ ಶುರುವಾಗಿದೆ. ಸದ್ಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದು, ವಿಮಾನಗಳ ಹಾರಾಟದ ನಿರ್ವಹಣೆಯೇ ಭಾರೀ ಸವಾಲಾಗಿದೆ.
ಕರ್ನಾಟಕ ಸರ್ಕಾರ ಬೆಂಗಳೂರಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಎರಡನೇ ಏರ್ಪೋರ್ಟ್ ಅನ್ನು ಎಲ್ಲಿ ನಿರ್ಮಿಸಬೇಕು ಎಂಬುದು ಇನ್ನು ಫೈನಲ್ ಆಗಿಲ್ಲವಾದರೂ ಮೂರು ಸ್ಥಳಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನ ಕಳುಹಿಸಲಾಗಿದೆ. ರಾಜ್ಯ ಸರ್ಕಾರ ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳು ಹಾಗೂ ನೆಲಮಂಗಲ - ಕುಣಿಗಲ್ ನಡುವೆ ಇರುವ ಸೋಲೂರು ಬಳಿ ಇಂಟರ್ನ್ಯಾಶನಲ್ ಏರ್ಪೋರ್ಟ್ ನಿರ್ಮಿಸುವ ಕುರಿತು ಪ್ರಸ್ತಾಪ ಇದೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮೂರು ಸ್ಥಳಗಳನ್ನು ಅಂತಿಮಗೊಳಿಸಿದೆ. ಈ ಸ್ಥಳಗಳ ಪೈಕಿ ಯಾವುದು ಬೆಸ್ಟ್ ಎಂಬ ಚರ್ಚೆ ಆರಂಭವಾಗಿದ್ದು, ಯಾವ ಸ್ಥಳದಲ್ಲಿ ಏರ್ಪೋರ್ಟ್ ಬಂದರೆ ಯಾರಿಗೆಲ್ಲಾ ಅನುಕೂಲ? ಎಂಬ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣ ಯೋಜನೆಗೆ ನಿರ್ಧರಿಸಿದೆ. ಹೀಗಾಗಿ ಕನಕಪುರ ರಸ್ತೆಯಲ್ಲಿ 2 ಸ್ಥಳ ಹಾಗೂ ನೆಲಮಂಗಲ ಹಾಸನ ಹೆದ್ದಾರಿ ಸಮೀಪ ಇನ್ನೊಂದು ಸ್ಥಳಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಯಾವುದು ಬೆಸ್ಟ್ ಸ್ಥಳ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವರ್ಷಕ್ಕೆ 10 ಕೋಟಿ ಜನರನ್ನು ನಿರ್ವಹಿಸಲಿದೆ. ಹೊಸ ವಿಮಾನ ನಿಲ್ದಾಣಕ್ಕೆ 4,500 ರಿಂದ 5,000 ಎಕರೆ ಭೂಮಿ ಬೇಕಾಗಿದೆ. ಅದರಲ್ಲೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಮದಟ್ಟಾದ ಭೂಮಿಯ ಅವಶ್ಯಕತೆವಿದ್ದು, ಸರ್ಕಾರದ ಭೂಮಿ ಹೆಚ್ಚಿರೋ ಕಡೆ ಏರ್ಪೋರ್ಟ್ ನಿರ್ಮಿಸಿದರೆ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ ಎಂದು ಸರ್ಕಾರ ಪ್ಲಾನ್ ಹಾಕಿಕೊಂಡಿದೆ. ಸ್ಥಳ ಫೈನಲ್ ಮಾಡುವ ವೇಳೆ ರಾಜ್ಯ ಸರ್ಕಾರ ಇದನ್ನು ಪ್ರಮುಖವಾಗಿ ಗಮನಕ್ಕೆ ತೆಗೆದುಕೊಳ್ಳಲಿದೆ. ಈ ಎಲ್ಲ ಅಂಶಗಳನ್ನು ಗಮನಿಸಿಯೇ ರಾಜ್ಯ ಸರ್ಕಾರ ಈ ಮೂರು ಸ್ಥಳಗಳನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕನಕಪುರ ರಸ್ತೆಯಲ್ಲಿ ಏರ್ಪೋರ್ಟ್ ಯಾಕೆ ಬೆಸ್ಟ್
ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಬೆಂಗಳೂರು ಉತ್ತರದಲ್ಲಿದ್ದು, ಹೊಸ ಏರ್ಪೋರ್ಟ್ಗೆ ಬೆಂಗಳೂರು ದಕ್ಷಿಣವೇ ಸೂಕ್ತ ಎನ್ನಲಾಗಿದೆ. ಹೀಗಾಗಿ ಏರ್ಪೋರ್ಟ್ ಬಳಕೆಯಲ್ಲಿ ಬೆಂಗಳೂರು ದಕ್ಷಿಣದವರೇ ಹೆಚ್ಚು ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ದಕ್ಷಿಣದಲ್ಲಿ ಬರುತ್ತದೆ. ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಿಸಲು ತಮಿಳುನಾಡು ಸಿದ್ಧತೆ ಮಾಡಿಕೊಂಡಿರುವ ಹಿನ್ನೆಲೆ ಐಟಿ ಬಿಟಿ ಕಂಪನಿ ಸೆಳೆವ ತಮಿಳುನಾಡಿಗೆ ಟಕ್ಕರ್ ಕೊಡುವ ತಂತ್ರ ರಾಜ್ಯ ಸರ್ಕಾರ ಮುಂದಾಗಬಹುದು ಎನ್ನಲಾಗಿದೆ. ಅಲ್ಲದೇ ತುಮಕೂರು, ಮೈಸೂರು ಕಡೆಯಿಂದ ಬರುವವರಿಗೆ ಅನುಕೂಲವಾಗಲಿದ್ದು, ನೈಸ್ ರಸ್ತೆಯಿಂದ ಕೇವಲ 10 ಕಿಮೀ ಹಾಗೂ ಮೆಟ್ರೋ ನಿಲ್ದಾಣ 5 ಕಿಮೀ ದೂರವಾಗಲಿದೆ.
ನೆಲಮಂಗಲದ ಸೋಲೂರು ಬಳಿ ಏರ್ಪೋರ್ಟ್ ಏಕೆ ಬೇಕು?
ನೆಲಮಂಗಲದ ಸೋಲೂರು ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾದರೇ ಬೆಂಗಳೂರು ಮಾತ್ರವಲ್ಲದೇ ನೆರೆ ಜಿಲ್ಲೆಗಳಿಗೂ ವಿಮಾನ ಭಾಗ್ಯ ಕಲ್ಪಿಸಿಕೊಟ್ಟಾಂತಾಗುತ್ತದೆ. ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ಸ್ ಸಮಸ್ಯೆ ಇರುವುದರಿಂದ ಸಂಚಾರ ದಟ್ಟಣೆ ವಿಚಾರದಲ್ಲಿ ಕನಕಪುರ ರಸ್ತೆ, ಹಾರೋಹಳ್ಳಿಗಿಂತ ಉತ್ತಮವಾಗಲಿದೆ. ಅಲ್ಲದೇ ಕರಾವಳಿ, ಉತ್ತರ ಕರ್ನಾಟಕದ ಜನರಿಗೆ ಭಾರೀ ಅನುಕೂಲವಾಗಲಿದ್ದು, ಐಟಿ ವಲಯವು ತುಮಕೂರು ಹಾಗೂ ನೆಲಮಂಗಲ ಭಾಗಕ್ಕೂ ವಿಸ್ತರಣೆಯಾಗಲಿದೆ. ಸದ್ಯ ಮಾದಾವರದವರೆಗೆ ಮೆಟ್ರೋ ಇದ್ದು ಶೀಘ್ರ ನೆಲಮಂಗಲದವರೆಗೆ ವಿಸ್ತರಣೆಯಾಗಿ ಅನುಕೂಲವಾಗಲಿದೆ.
ನೆಲಮಂಗಲದ ಸೋಲೂರು ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾದರೇ ಅಭಿವೃದ್ಧಿಗೆ ಹಾಗೂ ಇತರೆ ವಾಣಿಜ್ಯ ಚಟುವಟಿಕೆ ವಿಸ್ತರಣೆಗೆ ಭಾರೀ ಅವಕಾಶ ಸಿಗುವ ಸಾಧ್ಯತೆ ಇದೆ. ಇನ್ನು, ಪುಣೆ - ಬೆಂಗಳೂರು ಹೆದ್ದಾರೆ, ಚೆನ್ನೆ ಇಂಡಸ್ಟೀಯಲ್ ಕಾರಿಡಾರ್ಗೆ ಸಮೀಪವಾಗಲಿದ್ದು, ನೆಲಮಂಗಲದ ಬಳಿ ಹೊಸ ವಿಮಾನ ನಿಲ್ದಾಣ ನಿರ್ಮಾಣವಾದರೇ ನೆರೆ ಹೊರೆ ಜಿಲ್ಲೆಗಳಿಗೆ ಭಾರೀ ಅನುಕೂಲವಾಗಲಿದೆ.
ಈಗಾಗಲೇ ರಾಜ್ಯ ಸರ್ಕಾರ ಮೂರು ಸ್ಥಳಗಳನ್ನ ಅಂತಿಮಗೊಳಿಸಿ ಕೇಂದ್ರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಿದೆ. ಈ ಕುರಿತು ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅವಲೋಕಿಸಲಿದೆ. ಕರ್ನಾಟಕ ಸರ್ಕಾರ ನಿಗದಿಪಡಿಸಿರುವ ಈ ಮೂರು ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಒಂದು ಜಾಗವನ್ನ ಅಂತಿಮಗೊಳಿಸಿ ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ.
ಹೊಸ ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ಸಾಧ್ಯತೆಗಳ ಮೌಲ್ಯಮಾಪನವನ್ನು ರಾಜ್ಯ ಸರ್ಕಾರ ಪುನಃ ಮಾಡಲಿದೆ. ಅಲ್ಲದೇ ಸಂಪೂರ್ಣ ಅಧ್ಯಯನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅದಾದ ಬಳಿಕ ವಿಮಾನ ನಿಲ್ದಾಣದ ನಿರ್ಮಾಣದ ಕಾಮಗಾರಿಗೆ ಚಾಲನೆ ಸಿಗಲಿದ್ದು, 2035ರ ಹೊತ್ತಿಗೆ ಎರಡನೇ ವಿಮಾನ ನಿಲ್ದಾಣ ಜನರ ಬಳಕೆಗೆ ಸಿಗಬೇಕು ಎಂದು ಸರ್ಕಾರ ತನ್ನ ಕೆಲಸಗಳಿಗೆ ವೇಗವನ್ನು ನೀಡಿದೆ.
ಸಚಿವ ಎಂ.ಬಿ. ಪಾಟೀಲ್ ಹೇಳಿದ್ದೇನು?
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ಪ್ರಸ್ತಾಪಿಸಲಾಗಿದ್ದು, ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಕೇಂದ್ರಕ್ಕೆ ಪ್ರಸ್ತಾಪಿಸಲಾಗಿದೆ. ಕನಕಪುರ ರಸ್ತೆ ಹಾರೋಹಳ್ಳಿ ಬಳಿ ಎರಡು ಕಡೆ ಹಾಗೂ ನೆಲಮಂಗಲದ ಕುಣಿಗಲ್ ರಸ್ತೆಯ ಒಂದು ಕಡೆ ಸ್ಥಳ ಗುರುತಿಸಲಾಗಿದ್ದು, ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಕರ್ನಾಟಕದ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.












Click it and Unblock the Notifications