ಡಿಕೆಶಿ ಉಲ್ಲೇಖಿಸುತ್ತಿರುವ ಆ 'ಗುಪ್ತಗಾಮಿನಿ' ಬಿಜೆಪಿ ಸಂಸದರು ಯಾರು?
Recommended Video
ರಾಜ್ಯ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ವಾಂತಿಬೇಧಿಯ ನಡುವೆಯೂ ಸುಮಾರು ಮೂವತ್ತು ನಿಮಿಷದ ಪತ್ರಿಕಾಗೋಷ್ಠಿಯನ್ನು ಬುಧವಾರ (ಸೆ 19) ನಡೆಸಿದರು. ನಿರೀಕ್ಷೆಯಂತೆ ತಮ್ಮನ್ನು ತಾನು ಸಮರ್ಥಿಸಿಕೊಂಡರು. ಜೊತೆಗೆ, ಗೋಷ್ಠಿಯುದ್ದಕ್ಕೂ ತಾನು ನೀಡುತ್ತಿದ್ದ ಸಮಜಾಯಿಷಿಗೆ ಅವರಲ್ಲಿ ಸ್ಪಷ್ಟನೆ ಕಂಡುಬರುತ್ತಿತ್ತು.
ತಮ್ಮ ಪತ್ರಿಕಾಗೋಷ್ಠಿಯುದ್ದಕ್ಕೂ ಹಲವು ವಿಚಾರಗಳನ್ನು ಡಿಕೆ ಶಿವಕುಮಾರ್ ಪ್ರಸ್ತಾವಿಸಿದ್ದರೂ, ಕನಿಷ್ಠ ಮೂರು ಬಾರಿ ಅವರು ಉಲ್ಲೇಖಿಸಿದ ಹೇಳಿಕೆ ಮಾತ್ರ ಬಿಜೆಪಿ ವಲಯದಲ್ಲಿ ಗುಸುಗುಸು ಚರ್ಚೆಗೆ ಆಸ್ಪದ ನೀಡಿದೆ. ನಮ್ಮಲ್ಲೇ ಇರುವ ಆ 'ಜಾಸೂಸ್' ಯಾರು ಎಂದು ಒಬ್ಬರನ್ನೊಬ್ಬರು ಅನುಮಾನಿಸಿ ನೋಡುವಂತಾಗಿದೆ.
ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್
ನೀವೇನೂ ತಪ್ಪು ಮಾಡಿಲ್ಲದಿದ್ದರೆ ನಿಮ್ಮ ಸಹೋದರ ಯಾಕೆ ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದ್ದು ಎಂದು ಎದುರಾದ ಪ್ರಶ್ನೆಗೆ, ನಮ್ಮ ರಾಜ್ಯದ ಬಿಜೆಪಿ ಸಂಸದರೇ ನಿಮ್ಮನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದು, ಅದಕ್ಕಾಗಿಯೇ ನನ್ನ ಸಹೋದರ ಗೋಷ್ಠಿ ನಡೆಸಿದ್ದು ಎನ್ನುವ ಮಾತನ್ನು ಡಿ ಕೆ ಶಿವಕುಮಾರ್ ಹೇಳಿದ್ದರು.
ಪ್ರಮುಖವಾಗಿ, ಬೆಂಗಳೂರು ನಗರದ ರಾಜಕೀಯ ವಿಚಾರದಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿಯದ್ದು ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಎನ್ನುವುದು ಬಿಜೆಪಿ ಕಾರ್ಯಕರ್ತರ ವಲಯದಲ್ಲೇ ಕೇಳಿಬರುತ್ತಿರುವ ಮಾತು. ಬಿಜೆಪಿ, ಅಸೆಂಬ್ಲಿ ಚುನಾವಣೆಯಲ್ಲಿ ಹೆಚ್ಚಿನ ಸೀಟು ಬೆಂಗಳೂರು ನಗರದಲ್ಲಿ ಗಳಿಸಲಾಗದೇ ಇದ್ದದ್ದು ಇದೇ ಕಾರಣಕ್ಕೆ ಎನ್ನುವ ಮಾತೂ ಅಸೆಂಬ್ಲಿ ಚುನಾವಣೆ ಫಲಿತಾಂಶ ಹೊರಬಿದ್ದಾಗ ಕೇಳಿಬರುತ್ತಿತ್ತು.
ಎದುರಾಳಿ ಇಲ್ಲದೆ ಚೆಸ್ ಆಡೋದು ಹೇಗೆ? ಡಿಕೆಶಿಗೆ ಬಿಎಸ್ ವೈ ಪ್ರಶ್ನೆ
ಬಿಜೆಪಿಯಲ್ಲೂ ನನಗೆ ಬೇಕಾದಷ್ಟು ಜನ ಹಿತೈಷಿಗಳು ಇದ್ದಾರೆ ಎನ್ನುವ ಮಾತನ್ನು ಡಿಕೆ ಶಿವಕುಮಾರ್ ಅದೆಷ್ಟೋ ಬಾರಿ ಹೇಳಿದ್ದರು. ಹಾಗಿದ್ದರೆ, ಕೇಂದ್ರ ತನಿಖಾ ದಳದ ಮುಂದಿನ ನಡೆಯನ್ನು ಪತ್ತೆಹಚ್ಚಿ, ಬಿಜೆಪಿಯವರೇ ಡಿಕೆಶಿಗೆ ಸೋರಿಕೆ ಮಾಡಿದ್ದಾರಾ ಎನ್ನುವ ಪ್ರಶ್ನೆ ಕಾಡುವುದು ಸಹಜ.
ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ತುರ್ತು ಪತ್ರಿಕಾಗೋಷ್ಟಿ
ಕಳೆದ ಶನಿವಾರ (ಸೆ 8) ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ತುರ್ತು ಪತ್ರಿಕಾಗೋಷ್ಟಿಯನ್ನು ಕರೆದು, ತಮ್ಮ ಸಹೋದರ ಡಿಕೆಶಿ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಿದ್ದು, ಸಿಬಿಐ, ಇಡಿ, ಮತ್ತು ಐಟಿ ಇಲಾಖೆಗಳು ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದೆ ಮತ್ತು ಸದ್ಯದಲ್ಲೇ ಬಂಧಿಸಲಿವೆ. ಬಿಜೆಪಿಗೆ ಸೇರುತ್ತಿಲ್ಲ ಎನ್ನುವ ಕೋಪಕ್ಕೆ ಬಿಎಸ್ ಯಡಿಯೂರಪ್ಪ ಅವರು ಆದಾಯ ತೆರಿಗೆ ಇಲಾಖೆಗೆ ಡಿಕೆ ಶಿವಕುಮಾರ್ ಅವರ ವಿರುದ್ಧ ಪತ್ರ ರವಾನಿಸಿದ್ದರು ಎಂದು ಒಂದು ಪತ್ರವನ್ನು ಡಿ ಕೆ ಸುರೇಶ್ ಬಿಡುಗಡೆ ಮಾಡಿದ್ದರು.
ಬಿಜೆಪಿ ಸಂಸದ ಗೆಳೆಯರೇ ನಮಗೆ ಮಾಹಿತಿ ನೀಡಿದ್ದರು
ಈ ಬಗ್ಗೆ, ನಿನ್ನೆಯ (ಸೆ 19) ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ, ನಾನೂ ನನ್ನ ಸಹೋದರನನ್ನು ಕೇಳಿದೆ, ಯಾಕೆ ಆ ಪತ್ರ ಬಿಡುಗಡೆ ಮಾಡಿದ್ದು ಎಂದು. ಕೇಂದ್ರ ತನಿಖಾ ದಳದ ಅಧಿಕಾರಿಗಳು ನಮ್ಮನ್ನು ಬಂಧಿಸುವ ಸಾಧ್ಯತೆಯಿದೆ ಎನ್ನುವುದನ್ನು, ನಮ್ಮ ಬಿಜೆಪಿ ಸಂಸದ ಗೆಳೆಯರೇ ನಮಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಕಾರಣಕ್ಕಾಗಿ ನನ್ನ ಸಹೋದರ ಅಂದು ಆ ಪತ್ರವನ್ನು ಮಾಧ್ಯಮಗಳಿಗೆ ನೀಡಿದ್ದು ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನ ಎಟಿಎಂ: ಸಂಬಿತ್ ಪಾತ್ರಾ ಆರೋಪ
ಒಕ್ಕಲಿಗ ಸಮುದಾಯದ ಸಂಸದರು
ಡಿ ಕೆ ಶಿವಕುಮಾರ್ ಅವರಿಗೆ ಬಿಜೆಪಿಯ ಯಾವ ಸಂಸದರು ಮಾಹಿತಿ ನೀಡುತ್ತಿರಬಹುದು. ಇಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡುತ್ತಿದೆಯಾ? ಒಕ್ಕಲಿಗ ಸಮುದಾಯದ ಸಂಸದರು ತಮ್ಮದೇ ಸಮುದಾಯದ ಡಿ ಕೆ ಶಿವಕುಮಾರ್ ಅವರಿಗೆ ಮಾಹಿತಿ ನೀಡುತ್ತಿದ್ದಾರಾ ಎನ್ನುವ ಸಂಶಯ ಕಾಡದೇ ಇರದು. ಒಟ್ಟು ಈಗಿನ ಹದಿನೈದು ಬಿಜೆಪಿ ಸಂಸದರುಗಳ ಪೈಕಿ, ನಾಲ್ಕು ಸಂಸದರು ಇದೇ ಸಮುದಾಯದವರು.
ಸಾಮ್ರಾಟ್ ಅಶೋಕ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ
ಬಿಬಿಎಂಪಿ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನವನ್ನು ಗೆದಿದ್ದರೂ ಬಿಜೆಪಿಗೆ ಮೇಯರ್, ಉಪಮೇಯರ್ ಸ್ಥಾನ ದಕ್ಕಿಸಿಕೊಳ್ಳಲಾಗಿರಲಿಲ್ಲ. ಬೆಂಗಳೂರು ಉಸ್ತುವಾರಿಯಾಗಿದ್ದ ಸಾಮ್ರಾಟ್ ಅಶೋಕ್ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ಟೀಕೆ ಸ್ವಪಕ್ಷೀಯರಿಂದಲೇ ಬಂದಿತ್ತು. ಅಶೋಕ್ ಅವರ ಓವರ್ ಕಾನ್ಫಿಡೆನ್ಸ್ ಇದಕ್ಕೆ ಕಾರಣ ಎನ್ನುವ ಮಾತಿನ ಜೊತೆಗೆ, ಇದೆಲ್ಲಾ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಎನ್ನುವ ಮಾತೂ ಚಾಲ್ತಿಯಲ್ಲಿತ್ತು.
ಬಿಜೆಪಿಯೊಳಗೆ 'ಸಾಮ್ರಾಟ್' ಅಶೋಕ ಸಾಮ್ರಾಜ್ಯದ ಅಂತ್ಯ ಕಾಲ ಸನ್ನಿಹಿತವೇ?!
ಜಯನಗರ ಮತ್ತು ಆರ್ ಆರ್ ನಗರ ಅಸೆಂಬ್ಲಿ ಚುನಾವಣೆ
ಮೊನ್ನೆಮೊನ್ನೆಯ ಜಯನಗರ ಮತ್ತು ಆರ್ ಆರ್ ನಗರ ಅಸೆಂಬ್ಲಿ ಚುನಾವಣೆಯಲ್ಲಿನ ಸೋಲಿನ ವಿಚಾರದಲ್ಲೂ ಬಿಜೆಪಿ ಕಾರ್ಯಕರ್ತರೇ ಅಶೋಕ್ ಮತ್ತು ಅನಂತ್ ಕುಮಾರ್ ಸಿಟ್ಟಾಗಿದ್ದ ವಿಚಾರ, ಗುಟ್ಟಾಗೇನೂ ಉಳಿದಿರಲಿಲ್ಲ. ಜಯನಗರ ಭೈರಸಂದ್ರ ವಾರ್ಡಿನ ಬಿಜೆಪಿ ಕಾರ್ಪೋರೇಟರ್ ಆಗಿದ್ದ ನಾಗರಾಜು, ಬಹಿರಂಗವಾಗಿಯೇ ಕಾಂಗ್ರೆಸ್ಸಿನ ಸೌಮ್ಯ ರೆಡ್ಡಿ ಜೊತೆ ಗುರುತಿಸಿಕೊಂಡಿದ್ದರೂ, ಬಿಜೆಪಿ ಬೆಂಗಳೂರು ಘಟಕ ಸುಮ್ಮನಿತ್ತು. ಆದರೆ, ಕಾರ್ಯಕರ್ತರ ತೀವ್ರ ಒತ್ತಡದ ನಂತರ ನಾಗರಾಜು ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಾಗಿತ್ತು.
ಬಿಜೆಪಿಯ ಯಾವ ಮುಖಂಡರು ಆಮಿಷವೊಡ್ಡುತ್ತಿದ್ದಾರೆ
ಸಮ್ಮಿಶ್ರ ಸರಕಾರ ಪತನಗೊಳಿಸಲು ಬಿಜೆಪಿಯ ಆಪರೇಶನ್ ಕಮಲದ ವಿಚಾರದಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿಯ ಯಾವ ಮುಖಂಡರು ಆಮಿಷವೊಡ್ಡುತ್ತಿದ್ದಾರೆ ಎನ್ನುವುದನ್ನು ಹೆಸರು ಸಮೇತ ಬಹಿರಂಗಗೊಳಿಸಿದ್ದರು. ಹಾಗಿದ್ದರೆ, ಸಿಎಂಗೆ ಈ ವಿಚಾರದ ಮಾಹಿತಿ ನೀಡಿದ್ದು ಯಾರು ಎಂದಾಗ, ಬೊಟ್ಟು ಬೆಂಗಳೂರು ನಗರದ ಪ್ರಮುಖ ಬಿಜೆಪಿ ಶಾಸಕರತ್ತ ಸಾಗುತ್ತದೆ.
ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ: ಎಚ್ಡಿಕೆ ಹೊಸ ಬಾಂಬ್