ಚೌಕಿದಾರರಾಗಿ ಏನು ಮಾಡಿದ್ರಿ ನರೇಂದ್ರ ಮೋದಿಯವರೇ? ಸಿದ್ದರಾಮಯ್ಯ ಪ್ರಶ್ನೆ
ಚಾಮರಾಜನಗರ, ಮಾರ್ಚ್ 24: ಚಾಮರಾಜನಗರದಲ್ಲಿ ಜನಾಶಿರ್ವಾದ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
"ನರೇಂದ್ರ ಮೋದಿ, ನಾನು ಚೌಕೀದಾರ. ದೇಶದ ಜನರ ಹಣಕ್ಕೆ ಭದ್ರತೆ ನೀಡುತ್ತೇನೆ ಎಂದ್ರಿ. ಆದರೆ ಲಲಿತ್ ಮೋದಿ 22,000 ಕೋಟಿ ರೂಪಾಯಿ ಲೂಟಿ ಹೊಡೆದು ವಿದೇಶಕ್ಕೆ ಓಡಿ ಹೋದರು. ಚೌಕಿದಾರರಾಗಿ ಏನು ಮಾಡಿದ್ರಿ ನರೇಂದ್ರ ಮೋದಿಯವರೇ?" ಎಂದು ಪ್ರಶ್ನಿಸಿದರು. ವಿಜಯ ಮಲ್ಯ 9 ಸಾವಿರ ಕೋಟಿ ರೂಪಾಯಿ ದೋಚಿದರು, ಲಲಿತ್ ಮೋದಿ ಹೊರಟು ಹೋದ್ರು. ಚೌಕಿದಾರರಾಗಿ ನೀವು ಯಾಕೆ ತಡೆಯಲಿಲ್ಲ? ಯಾಕೆ ಹಿಡಿಯಲಿಲ್ಲ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
"ಇವತ್ತು ಬಿಜೆಪಿಯವರು ಅನ್ನಭಾಗ್ಯ ಕೇಂದ್ರ ಸರಕಾರದ ಯೋಜನೆ ಎನ್ನುತ್ತಿದ್ದಾರೆ. ಆಹಾರ ಭದ್ರತಾ ಮಸೂದೆ ಜಾರಿಗೆ ತಂದವರು ನಿಮ್ಮ ನರೇಂದ್ರ ಮೋದಿ ಸರಕಾರ ಅಲ್ಲ. ಅದನ್ನು ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಸರಕಾರ; ಸೋನಿಯಾ ಗಾಂಧಿ ಸರಕಾರ. ಅನ್ನಭಾಗ್ಯ ಜಾರಿಗೆ ತಂದವರು ನಾವು ಎನ್ನುತ್ತೀರಿ. ಆದರೆ ಮಧ್ಯಪ್ರದೇಶ, ಗುಜರಾತ್, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಯಾಕೆ ಅನ್ನಭಾಗ್ಯ ಯೋಜನೆ ಇಲ್ಲ?," ಎಂದು ಅವರು ಪ್ರಶ್ನೆ ಎಸೆದರು.
In Pics: ಅರಮನೆ ನಗರಿ ಮೈಸೂರಲ್ಲಿ ರಾಹುಲ್ ಗಾಂಧಿ ಕಮಾಲ್

ನಮ್ಮದು ಸುಭದ್ರ ಸರಕಾರ
ಅಧಿಕಾರದಲ್ಲಿದ್ದಾಗ ಸುಭದ್ರ, ಭ್ರಷ್ಟಾಚಾರ ರಹಿತ ಸರಕಾರವನ್ನು ನೀಡಲು ಬಿಜೆಪಿಯವರಿಗೆ ಆಗಲಿಲ್ಲ. ಆದರೆ ನಾವು ಸ್ಥಿರ ಸರಕಾರವನ್ನು ನೀಡುತ್ತಿದ್ದು, ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹಿಂದೆ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಲೋಕಪಾಲ ಮಸೂದೆ ಮಂಡನೆ ಮಾಡಲಾಗಿತ್ತು. ಪ್ರಧಾನಮಂತ್ರಿಯಾಗಿ 4 ವರ್ಷವಾಯ್ತು. ಇವತ್ತಿನವರೆಗೆ ಕೇಂದ್ರದಲ್ಲಿ ಲೋಕಪಾಲ ನೇಮಕ ಮಾಡಲು ನಿಮಗೆ ಆಗಲಿಲ್ಲ. ಹೀಗಿದ್ದೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತೀರಿ ಎಂದು ಅವರು ಛೇಡಿಸಿದರು.

ಅಚ್ಛೇ ದಿನ್ ಆಯೇಗಾ
ಅಚ್ಛೇ ದಿನ್ ಆಯೇಗಾ ಎಂಬ ಮೋದಿ ಘೋಷಣೆಗ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಕಬ್ ಆಯೆಗಾ? (ಯಾವಾಗ ಬರುತ್ತದೆ) ಎಂದು ಪ್ರಶ್ನಿಸಿದರು. "ಟಾಟಾ, ಬಿರ್ಲಾ, ಅದಾನಿ, ಅಂಬಾನಿಗೆ ಅಚ್ಛೇ ದಿನ್ ಬಂತು ಅಷ್ಟೇ. ಬಡವರು, ದಲಿತರು, ಅಲ್ಪಸಂಖ್ಯಾತರಿಗೆ ಅಚ್ಛೇ ದಿನ್ ಬಂದಿಲ್ಲ. ಹೆಚ್ಚೆಂದರೆ ಅಮಿತ್ ಶಾ ಮಗನಿಗೆ ಬಂದಿರಬಹುದು. ಅಚ್ಛೇದಿನ್ ಆಯೇಗಾ..." ಎಂದು ಮತ್ತೊಮ್ಮೆ ವ್ಯಂಗ್ಯವಾಡಿದರು.
"ಅಕೌಂಟಿಗೆ 15 ರೂಪಾಯಿನಾದರೂ ಹಾಕಿದ್ರಾ? 2 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ರಾ? ಇದರ ಬಗ್ಗೆ ಮಾತನಾಡಲ್ಲ. ಇಲ್ಲಿಗೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಜೈಲಿಗೆ ಹೋಗಿ ಬಂದ ಕಳಂಕ ಹೊತ್ತವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿ, ನಮಗೆ ಪಾಠ ಹೇಳಲು ನಿಮಗೆ ಯಾವ ನೈತಿಕತೆ ಇದೆ?," ಎಂದು ಸಿಎಂ ಕಿಡಿಕಾರಿದರು.

ಕನ್ನಡ ಅಸ್ಮಿತೆ
ಕರ್ನಾಟಕದ ಬಗ್ಗೆ, ಇಲ್ಲಿನ ಜನರ ಬಗ್ಗೆ ಪ್ರಧಾನಿ ಲಘುವಾಗಿ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
"ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಕರ್ನಾಟಕದಲ್ಲೇ ಅತೀ ಹೆಚ್ಚಿನ ಒಣಭೂಮಿ ಇದೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಒಣಭೂಮಿ ಕೃಷಿಗೆ ಹೆಕ್ಟೇರ್ ಗೆ 5,000 - 10,000 ರೂಪಾಯಿ ಅನುದಾನ ನೀಡುವ ಯೋಜನೆ ಘೋಷಿಸಲಾಗಿದೆ. ಇದಕ್ಕಾಗಿ 3500 ಕೋಟಿ ರೂ. ಮೀಸಲಾಗಿಟ್ಟಿದ್ದೇವೆ. ಏಪ್ರಿಲ್ 1ರಿಂದ ಎಲ್ಲಾ ಹುಡುಗಿಯರಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ, ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ," ಎಂದು ತಮ್ಮ ಯೋಜನೆಗಳ ಬಗ್ಗೆ ಅವರು ವಿವರಿಸಿದರು.

ಚಾಮರಾಜನಗರ ಶಾಪ ವಿಮೋಚನೆ
ಚಚಾಮರಾಜನಗರಕ್ಕೆ ಬಂದರೆ ಮುಖ್ಯಮಂತ್ರಿ ಪದವಿ ಹೋಗುತ್ತದೆ ಎಂಬ ಮೂಢ ನಂಬಿಕೆ ಇತ್ತು. ನನಗೂ ಹೋಗಬೇಡಿ ಎಂದು ಹೇಳಿದರು. ಆದರೆ ನಾನು 9 ಸಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ಇಲ್ಲಿ ಬಂದ ಮೇಲೆಯೇ 5 ವರ್ಷ ನನ್ನ ಕುರ್ಚಿ ಭದ್ರವಾಗಿದ್ದು. ನಮ್ಮ ಸರಕಾರ ಚಾಮರಾಜನಗರವನ್ನು ಶಾಪವಿಮುಕ್ತಿಗೊಳಿಸಿದೆ. ಮುಂದೆಯೂ ಇಲ್ಲಿಗೆ ಮುಖ್ಯಮಂತ್ರಿಗಳು ಬರಲಿದ್ದಾರೆ ಎಂದು ಹೇಳಿದರು.
ಭಾಷಣದ ವೇಳೆ ಚಾಮರಾಜನಗರದ ಪ್ರಮುಖ ರಾಜಕೀಯ ನಾಯಕ ದಿವಂಗತ ಎಚ್.ಎಸ್ ಮಹಾದೇವ ಪ್ರಸಾದ್ ರನ್ನು ಸಿದ್ದರಾಮಯ್ಯ ನೆನೆದರು.
ನಮ್ಮ ಸರಕಾರಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕೈಗೆ ಶಕ್ತಿ ನೀಡಲು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಈ ಮೂಲಕ ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ನೀವೆಲ್ಲಾ ನಮಗೆ ಮತ ಹಾಕಿ 2019ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುವುದಕ್ಕೆ ನಾಂದಿ ಹಾಡಬೇಕು ಎಂದು ಕರೆ ನೀಡಿದರು.












Click it and Unblock the Notifications