ಸೆಪ್ಟಂಬರ್ 3ರಂದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ?
Recommended Video

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ 'ರೂಮರ್ ಮಿಲ್' ನಂತೆ ಆಗಿರುವ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಅಂತೆಕಂತೆ ಸುದ್ದಿ, ಅದಕ್ಕೆ ಪುಷ್ಟಿ ನೀಡುವಂತೆ ಮೂರು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳು. ಮೇಲ್ನೊಟಕ್ಕೆ ಮಾತ್ರ ಎಲ್ಲವೂ ಸರಿ, ಒಳಗೊಳಗೆ ಏನೂ ಸರಿಯಿಲ್ಲ ಎನ್ನುವ ಪರಿಸ್ಥಿತಿಯಂತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಳೆನರಸೀಪುರದಲ್ಲಿ 'ಮತ್ತೆ ಮುಖ್ಯಮಂತ್ರಿ ಆಗುತ್ತೇನೆ' ಎನ್ನುವ ಹೇಳಿಕೆಯ ನಂತರ, ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಮುಖಂಡರುಗಳೇ ಸರಕಾರದ ಆಯುಸ್ಸಿನ ಬಗ್ಗೆ ಮಾತನಾಡುತ್ತಿರುವುದರಿಂದ, ರಾಜ್ಯದ ಮುಂದಿನ ರಾಜಕೀಯ ಬೆಳವಣಿಗೆಗಳು ಯಾವ ಕಡೆಗೆ ಬೇಕಾದರೂ ಉರುಳುಬಹುದು ಎನ್ನುವ ಮಾತು ಓಡಾಡುತ್ತಿದೆ.
ಸಿದ್ದರಾಮಯ್ಯ ಮತ್ತು ಅವರ ಆಪ್ತರು, ಕುಟುಂಬದವರು ಸೆಪ್ಟಂಬರ್ ಮೊದಲ ವಾರದಲ್ಲಿ ಹತ್ತು ದಿನಗಳ ಯುರೋಪ್ ಪ್ರವಾಸಕ್ಕೆ ತೆರಳಲಿದ್ದಾರೆ. ಆ ಸಮಯದಲ್ಲಿ ಭಾರೀ ರಾಜಕೀಯ ಸ್ಥಿತ್ಯಂತರಕ್ಕೆ ರಾಜ್ಯ ಸಾಕ್ಷಿಯಾಗಲಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಅದಕ್ಕೆ ಸರಿಯಾಗಿ, ಕಾಲಚಕ್ರ ಉರುಳುತ್ತದೆ, ಮೇಲಿದ್ದವರು ಕೆಳಗೆ ಬರಲೇ ಬೇಕು ಎನ್ನುವ ಸಿದ್ದರಾಮಯ್ಯನವರ ಹೇಳಿಕೆ ಇನ್ನಷ್ಟು ಸಂಚಲನವನ್ನು ಮೂಡಿಸಿದೆ.
ಜೆಡಿಎಸ್-ಕಾಂಗ್ರೆಸ್ಸಿನ ಕೆಳಹಂತದ ಕಾರ್ಯಕರ್ತರಿಗೆ ಮತ್ತು ಕಾಂಗ್ರೆಸ್ಸಿನ ಹಲವು ಶಾಸಕರಿಗೆ ಈ ಮೈತ್ರಿ ಸರಕಾರ ರಚನೆಯಾದ ಬಗ್ಗೆ ಅಸಮಾಧಾನವಿದೆ. ಒಂದಷ್ಟು ಶಾಸಕರಿಗೆ ಸಚಿವ ಸಂಪುಟ ವಿಸ್ತರಣೆ ಇನ್ನೂ ಆಗದಿರುವ ಬಗ್ಗೆ ಬೇಸರವೂ ಇದೆ. ಸೆಪ್ಟಂಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ಆ ವೇಳೆ ಸಿದ್ದರಾಮಯ್ಯನವರ ಅನುಪಸ್ಥಿತಿ ಪಕ್ಷಕ್ಕೆ ತೀವ್ರವಾಗಿ ಕಾಡುವ ಸಾಧ್ಯತೆಯಿಲ್ಲದಿಲ್ಲ.
ಸೆಪ್ಟಂಬರ್ ಎರಡರಂದು ಸಿದ್ದರಾಮಯ್ಯ ತಮ್ಮ ಪತ್ನಿ, ಪುತ್ರ, ಸೊಸೆ, ಸಚಿವರಾದ ದೇಶಪಾಂಡೆ, ಜಾರ್ಜ್ ಜೊತೆ ಯುರೋಪ್ ಗೆ ತೆರಳಲಿದ್ದಾರೆ. ಅವರು ಸ್ವದೇಶಕ್ಕೆ ವಾಪಸ್ ಆಗುವುದು ಸೆ.13ಕ್ಕೆ. ಸಿದ್ದರಾಮಯ್ಯ ಪ್ರವಾಸದಲ್ಲಿದ್ದಾಗ, ಯುರೋಪ್ ನಲ್ಲೇ ಅವರನ್ನು ಕೆಲವು ಕಾಂಗ್ರೆಸ್ ಶಾಸಕರು ಭೇಟಿಯಾಗುವ ಸಾಧ್ಯತೆಯಿದೆ ಎನ್ನುವ ಮಾತು ಹರಿದಾಡುತ್ತಿದೆ. ಸೆಪ್ಟಂಬರ್ ಮೂರಕ್ಕೆ ನನ್ನ ಸರಕಾರ ಪತನಗೊಳ್ಳಲಿದೆ ಎನ್ನುವ ಸುದ್ದಿಯ ಬಗ್ಗೆ ಕುಮಾರಸ್ವಾಮಿಯೂ ಪ್ರತಿಕ್ರಿಯೆ ನೀಡಿದ್ದಾರೆ.

ಕಡೆಯ ಶ್ರಾವಣದಂದು ಮುಖ್ಯಮಂತ್ರಿಯಾಗಿ ಬಿಎಸ್ವೈ ಪ್ರಮಾಣ ವಚನ
ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ. ಕಡೆಯ ಶ್ರಾವಣ ಸೋಮವಾರದಂದು (ಸೆ 3) ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯೂ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಖ್ಯಾತ ಜ್ಯೋತಿಷಿಯೊಬ್ಬರೇ ಈ ಮಾತನ್ನು ಹೇಳಿರುವುದು ಎಂದು ಯತ್ನಾಳ್ ಹೇಳಿದ್ದಾರೆ.

9 ಕಾಂಗ್ರೆಸ್ ಶಾಸಕರು, ಯಡಿಯೂರಪ್ಪನವರ ಜೊತೆ ಸಂಪರ್ಕದಲ್ಲಿ
ಕೆಲವೊಂದು ಮೂಲಗಳ ಪ್ರಕಾರ, ಒಂಬತ್ತು ಕಾಂಗ್ರೆಸ್ ಶಾಸಕರು, ಯಡಿಯೂರಪ್ಪನವರ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಹೈಕಮಾಂಡ್ ಸರಕಾರ ಉರುಳಿಸಲು ಅನುಮತಿ ನೀಡುತ್ತಿಲ್ಲ ಎನ್ನುವ ಮಾಹಿತಿಯಿದೆ. ಇಂತಹ ಸುದ್ದಿಗಳಿಗೆಲ್ಲಾ ಇಂಬು ಕೊಡುವಂತೆ, ಪದೇ ಪದೇ ಸಮ್ಮಿಶ್ರ ಸರಕಾರ ಐದು ವರ್ಷ ಅಧಿಕಾರದಲ್ಲಿರುತ್ತೆ ಎಂದು ಪರಮೇಶ್ವರ್, ಡಿಕೆ ಶಿವಕುಮಾರ್ ಯಾರು ಕೇಳದಿದ್ದರೂ ಹೇಳುತ್ತಿದ್ದಾರೆ.

ಸೆಪ್ಟಂಬರ್ ಮೂರಕ್ಕೆ ಹೊಸ ಸರಕಾರ ಅಧಿಕಾರಕ್ಕೆ
ಸೆಪ್ಟಂಬರ್ ಮೂರಕ್ಕೆ ಹೊಸ ಸರಕಾರ ಅಧಿಕಾರಕ್ಕೆ ಬರುತ್ತೆ ಎನ್ನುವ ಸುದ್ದಿಯನ್ನು ನಾನೂ ಮಾಧ್ಯಮದಲ್ಲಿ ನೋಡಿದ್ದೇನೆ. ಆ ಬಗ್ಗೆ ನನಗೆ ಚಿಂತೆ ಇಲ್ಲ. ಹಿಂದೆಯೂ ಬಹಳಷ್ಟು ಬಾರಿ ಹೇಳಿದ್ದೇನೆ, ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವನು ನಾನು, ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ ಆದರೆ ಇರುವಷ್ಟು ದಿನ ಕೈಲಾದ ಜನಸೇವೆ ಮಾಡುತ್ತೇನೆ. ಆದರೆ, ಸೆಪ್ಟಂಬರ್ ಮೂರರಂದು ಯಾಕೆ, ಅದರ ನಂತರವೂ ನಮ್ಮ ಸರಕಾರ ಸುಭದ್ರವಾಗಿರಲಿದೆ - ಎಚ್ ಡಿ ಕುಮಾರಸ್ವಾಮಿ.

ಸರಕಾರದ ವಿರುದ್ದ ಏನೇನು ಸಂಚು ಹೂಡುತ್ತಿದ್ದಾರೆ ಎನ್ನುವ ವಿಚಾರ ನನಗೂ ಅರಿತಿದೆ
ದೆಹಲಿಗೆ ಹೋಗಿ, ಸರಕಾರದ ವಿರುದ್ದ ಏನೇನು ಸಂಚು ಹೂಡುತ್ತಿದ್ದಾರೆ ಎನ್ನುವ ವಿಚಾರ ನನಗೂ ಅರಿತಿದೆ, ಸಮಯ ಬಂದಾಗ ಅದನ್ನೆಲ್ಲಾ ಮಾಧ್ಯಮದ ಮುಂದೆ ತೆರೆದಿಡುತ್ತೇನೆ. ನನ್ನ ಪದವಿಯನ್ನು ಉಳಿಸಿಕೊಳ್ಳಲು, ನಾನು ಯಾವುದೇ ಲಾಬಿ, ತಂತ್ರಗಾರಿಕೆಯನ್ನು ಮಾಡುತ್ತಿಲ್ಲ. ನನ್ನನ್ನು ಸಿಎಂ ಪಟ್ಟದಿಂದ ಕೆಳಗಿಳಿಸಬೇಕು ಎನ್ನುವ ಎಲ್ಲಾ ಮನಸ್ಸುಗಳು ಇದನ್ನು ಅರಿತುಕೊಳ್ಳಲಿ. ಜಾತಿಯಾಧಾರಿತೆ ರಾಜಕೀಯ ಮಾಡಿದವನು ನಾನಲ್ಲ, ಕೆಲವೊಂದು ಅಧಿಕಾರಿಗಳೂ ಸರಕಾರ ಬಿದ್ದು ಹೋಗುತ್ತದೆ ಎನ್ನುವ ಭ್ರಮೆಯಲ್ಲಿದ್ದಾರೆಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಸರಕಾರ ಐದು ವರ್ಷ ಪೂರೈಸಲಿದೆ, ಡಿ ಕೆ ಶಿವಕುಮಾರ್
ನಾನು ಯಾರ ಕಾಲೆಳೆಯುವ ಕೆಲಸವನ್ನು ಮಾಡುವುದಿಲ್ಲ, ಸಿದ್ದರಾಮಯ್ಯನವರಿಗೂ ನಾನು ಬೆಂಬಲ ನೀಡಿದ್ದೆ, ಈಗ ಕುಮಾರಸ್ವಾಮಿಗೆ. ಈ ಸರಕಾರ ಐದು ವರ್ಷ ಪೂರೈಸಲಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡುತ್ತಿದ್ದ ಲೋಕೋಪಯೋಗಿ ಸಚಿವ ರೇವಣ್ಣ, ನಮ್ಮದು ದೋಣಿಯಲ್ಲಿ ಸಾಗುತ್ತಿರುವ ಸರಕಾರ, ಅದನ್ನು ಮುಳುಗಿಸಬೇಕು ಎನ್ನುವವರು ಇದ್ದಾರೆ ಎನ್ನುವುದನ್ನು ತಿಳಿದಿದ್ದೇವೆ. ದೈವೇಚ್ಚೆ ಎಷ್ಟು ದಿನ ಇರುತ್ತೋ, ಅಷ್ಟು ದಿನ ಸರಕಾರವಿರುತ್ತೆ. ಇದ್ದಷ್ಟು ದಿನ ಉತ್ತಮ ಆಡಳಿತ ನೀಡುವುದಷ್ಟೇ ನಮ್ಮ ಗುರಿ ಎಂದು ರೇವಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.












Click it and Unblock the Notifications