ರಾಜ್ಯ ರಾಜಕೀಯ ಮೇಲಾಟಕ್ಕೆ ವಿರಾಮ ಎಂದು?
Recommended Video
ಮೈಸೂರು, ಸೆಪ್ಟೆಂಬರ್.19: ಮೈತ್ರಿ ಸರ್ಕಾರದಲ್ಲಿ ಎದ್ದಿತ್ತು ಎನ್ನಲಾದ ಮತ್ತು ಕಳೆದ ಕೆಲ ದಿನಗಳಿಂದ ಭಾರೀ ಕುತೂಹಲ, ಗೊಂದಲ ಸೃಷ್ಠಿಸಿದ ರಾಜಕೀಯ ವಿದ್ಯಮಾನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಧಾನದಿಂದ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭರವಸೆ ಮೇರೆಗೆ ತಣ್ಣಗೆ ಆದಂತೆ ಕಂಡು ಬಂದಿದೆ.
ಆದರೂ ಒಳಗೊಳಗೆ ನಡೆಯುತ್ತಿರುವ ರಾಜಕೀಯ ಮೇಲಾಟಗಳು ನಿಲ್ಲುವ ಲಕ್ಷಣಗಳು ಮಾತ್ರ ಕಂಡು ಬರುತ್ತಿಲ್ಲ. ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಆಯ್ಕೆ ವಿಚಾರದಲ್ಲಿ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಆರಂಭವಾದ ರಾಜಕೀಯ ಪ್ರತಿಷ್ಠೆಯ ಕಿತ್ತಾಟ ಇಲ್ಲಿ ತನಕ ಬಂದು ನಿಂತಿದೆ.
ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್ ಸಿಟ್ಟು
ಎಲ್ಲವೂ ಇಲ್ಲಿಗೆ ಮುಗಿಯಿತು ಎನ್ನುವಂತಿಲ್ಲ. ಸ್ವಪಕ್ಷ ಮತ್ತು ವಿರೋಧಪಕ್ಷದಲ್ಲಿ ಇರುವ ಅತೃಪ್ತರು ಮುಂದಿನ ದಿನಗಳಲ್ಲಿ ಯಾವುದೇ ದಾಳಗಳನ್ನು ಉರುಳಿಸಿದರೂ ಅಚ್ಚರಿಪಡಬೇಕಾಗಿಲ್ಲ. ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದೇನು ನಡೆಯುತ್ತಿಲ್ಲ.
ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬಿತ್ಯಾದಿ ಮಾತುಗಳು ಕೇಳಿ ಬಂದಿತ್ತಲ್ಲದೆ, ಇದು ಅವರ ಬೆಂಬಲಿಗರಿಗೂ ಇರಿಸುಮುರಿಸನ್ನುಂಟು ಮಾಡಿತ್ತು. ಈ ನಡುವೆ ಸಾಲಮನ್ನಾ, ಸೇರಿದಂತೆ ಹಲವು ವಿಚಾರಗಳಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೀರೋ ಆಗಿ ಬಿಂಬಿತರಾಗತೊಡಗಿದ್ದರು.
ನ.9ರ ಬಳಿಕ ಮೈತ್ರಿ ಸರ್ಕಾರ ಪತನ : ಮೈಸೂರಿನ ಗುರೂಜಿ ಭವಿಷ್ಯ!
ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಖಡಕ್ಕಾಗಿಯೇ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂಬುದನ್ನು ಹೇಳುತ್ತಲೇ ಬಂದಿದ್ದರು. ಸಿದ್ದರಾಮಯ್ಯರಿಂದ ಮಾಡಲಾಗದ್ದು ಕುಮಾರಸ್ವಾಮಿ ಮಾಡಿದ್ದಾರೆ ಎಂಬ ಮಾತುಗಳು ಹರಿದಾಡತೊಡಗಿತ್ತು.
ಇದು ಸಹಜವಾಗಿಯೇ ಸಿದ್ದರಾಮಯ್ಯ ಬೆಂಬಲಿಗರನ್ನು ಕೆರಳಿಸಿದ್ದಂತು ಸತ್ಯ. ನಾಗಲೋಟದಲ್ಲಿ ಓಡುತ್ತಿರುವ ಸರ್ಕಾರದ ಲಗಾಮು ನಮ್ಮ ಕೈಯ್ಯಲ್ಲಿದ್ದು ಅದನ್ನು ತೋರಿಸುವ ಅನಿವಾರ್ಯತೆ ಹೆಚ್ಚಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಂದ ಇಂತಹದ್ದೊಂದು ರಾಜಕೀಯ ಮೇಲಾಟ ನಡೆಯಿತೇ? ಎಂಬ ಸಂಶಯವೂ ಇಲ್ಲದಿಲ್ಲ.
ಸಿದ್ದರಾಮಯ್ಯ ಅವರೇ ಹೀರೋ
ಇಲ್ಲಿ ಏನೇ ಆದರೂ ಕೊನೆಗೆ ಅಂದರೆ ಇವತ್ತಿನ ರಾಜಕೀಯದ ಮಟ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಹೀರೋ ಆಗಿ ಬಿಂಬಿತರಾಗಿದ್ದಾರೆ ಮತ್ತು ಅವರ ಮೂಲಕವೇ ಅತೃಪ್ತರು ತಣ್ಣಗಾಗಿದ್ದಾರೆ ಎಂಬ ಸಂದೇಶ ಎಲ್ಲೆಡೆ ರವಾನೆಯಾಗಿದೆ.
ರಾಜ್ಯದಲ್ಲಿ ಮೂರು ಪಕ್ಷಗಳಿಗೂ ಮತದಾರ ಬಹುಮತ ನೀಡಿಲ್ಲ. ಅವತ್ತು ಜೆಡಿಎಸ್ ಮುಂದೆ ಆಯ್ಕೆಗಳಿದ್ದವು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಮುಂದೆ ಅದು ಇರಲಿಲ್ಲ.
ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಗೆ ಭೇಷರತ್ ಬೆಂಬಲ ನೀಡಿದ ಕಾಂಗ್ರೆಸ್ ಇವತ್ತು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದ್ದು, ಹಣದ ಆಮಿಷವೊಡ್ಡಿ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕರೇಕೆ ಭಯಪಡುತ್ತಿದ್ದಾರೆ?
ಪಕ್ಷನಿಷ್ಠ ಮತ್ತು ಮೈತ್ರಿ ಸರ್ಕಾರವನ್ನು ಒಪ್ಪಿಕೊಂಡು ನಡೆಯಲು ಶಾಸಕರಲ್ಲರೂ ಬದ್ಧರಾಗಿದ್ದಾರೆ ಎಂದ ಮೇಲೆ ಕಾಂಗ್ರೆಸ್ ನಾಯಕರೇಕೆ ಭಯಪಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ.
ಮೈತ್ರಿ ಸರ್ಕಾರ ಐದು ವರ್ಷ ನಡೆಯುತ್ತಿದೆ ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ನ ನಾಯಕರು ಅದರಲ್ಲೂ ಕೆಲವು ಸಚಿವರು ಹೇಳುತ್ತಿದ್ದಾರೆ. ಹೀಗೆ ಹೇಳುತ್ತಿರುವವರ ಪೈಕಿ ಹೆಚ್ಚಿನವರು ಅಧಿಕಾರ ಅನುಭವಿಸುತ್ತಿದ್ದಾರೆ.
ಅವರಿಗೆ ಅಧಿಕಾರ ಸಿಕ್ಕಿದೆ. ಅದನ್ನು ಉಳಿಸಿಕೊಳ್ಳಬೇಕಾಗಿದೆ. ಹಾಗಾಗಿ ಅವರು ಸರ್ಕಾರ ಸದೃಢವಾಗಿರಬೇಕೆಂದು ಬಯಸುತ್ತಿದ್ದಾರೆ.
'ಸೆ. 30ರೊಳಗೆ ಸಂಪುಟ ವಿಸ್ತರಿಸಿ, ಇಲ್ಲವೇ ನಮ್ಮ ದಾರಿ ನೋಡಿಕೊಳ್ಳುತ್ತೇವೆ'
ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವಾದರೂ ಬೇಕಿದೆ
ಅಧಿಕಾರಕ್ಕಾಗಿ ಕಾದು ಕೂತಿರುವ ಕೆಲವು ಆಕಾಂಕ್ಷಿ ಶಾಸಕರಿಗೆ ಸಚಿವ ಸ್ಥಾನ, ಕೊನೆಪಕ್ಷ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವಾದರೂ ಬೇಕೇ ಬೇಕಾಗಿದೆ. ಅದು ತಮಗೆ ಸಿಗದೆ ಬೇರೆಯವರಿಗೆ ಸಿಕ್ಕರೆ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಮನಸ್ಥಿತಿಗೆ ಅವರು ಬಂದಿದ್ದಾರೆ.
ಅವರನ್ನು ಸಮಾಧಾನಗೊಳಿಸಿ ಪಕ್ಷದಲ್ಲಿ ಉಳಿಸಿಕೊಳ್ಳುವ ಅಗತ್ಯತೆ ಎದುರಾಗಿದೆ. ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ಸಮಿಶ್ರ ಸರ್ಕಾರದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಒಂದು ವೇಳೆ ಸಂಪುಟ ವಿಸ್ತರಣೆ ಮಾಡಿದ್ದೇ ಆದರೆ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡುವುದರಲ್ಲಿ ಎರಡು ಮಾತಿಲ್ಲ.
ಕಾಂಗ್ರೆಸ್, ಬಿಜೆಪಿಗೆ ಅನಿವಾರ್ಯ
ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಹೀಗಿರುವಾಗ ಸಂಪುಟ ವಿಸ್ತರಣೆ ಮಾಡಿದರೂ ಮತ್ತು ಮಾಡದಿದ್ದರೂ ಸಿಎಂ ಕುಮಾರಸ್ವಾಮಿಗೆ ಸಂಕಷ್ಟ ತಪ್ಪಿದಲ್ಲ. ಇದೀಗ ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳು ಲೋಕಸಭಾ ಚುನಾವಣೆ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತೋ ಗೊತ್ತಿಲ್ಲ.
ಲೋಕಸಭಾ ಚುನಾವಣೆ ಜೆಡಿಎಸ್ ಗೆ ಅನಿವಾರ್ಯವಾಗಿಲ್ಲದೆ ಇರಬಹುದು. ಆದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಅನಿವಾರ್ಯವಾಗಿದೆ. ಕರ್ನಾಟಕದಿಂದ ಒಂದಷ್ಟು ಸ್ಥಾನವನ್ನು ಗೆಲ್ಲಲೇ ಬೇಕಾದ ಅಗತ್ಯತೆ ಈ ಎರಡು ಪಕ್ಷಗಳಿಗಿದೆ.
ಮೈತ್ರಿ ಸರ್ಕಾರವನ್ನು ಉರುಳಿಸಿ ತಾವು ಅಧಿಕಾರ ಸ್ಥಾಪಿಸಿದರೆ ಒಂದಷ್ಟು ಹೆಚ್ಚಿನ ಸ್ಥಾನವನ್ನು ಗೆದ್ದುಕೊಡಲು ಅನುಕೂಲವಾಗಬಹುದು ಎಂಬ ಆಲೋಚನೆ ಬಿಜೆಪಿ ನಾಯಕರಲ್ಲಿದ್ದರೆ, ಲೋಕಸಭಾ ಚುನಾವಣೆ ತನಕ ಸರ್ಕಾರವನ್ನು ಉಳಿಸಿಕೊಳ್ಳುವ ಇರಾದೆ ಕಾಂಗ್ರೆಸ್ ನಾಯಕರಿಗಿದೆ.
ಇಂಡಿಯಾ ಟುಡೇ ಸಮೀಕ್ಷೆ : ಕುಮಾರಸ್ವಾಮಿ ಸರಕಾರಕ್ಕೆ ಥಂಬ್ಸ್ ಡೌನ್!
ಇನ್ಯಾವ ಸಂಕಷ್ಟ ಎದುರಿಸಬೇಕೋ?
ಸದ್ಯದ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಗೆ ಚುನಾವಣೆಗೆ ಸಂಪನ್ಮೂಲ ಒದಗಿಸುವಲ್ಲಿ ಕರ್ನಾಟಕದ ಪಾತ್ರವೂ ಇದೆ. ಇದೆಲ್ಲವನ್ನು ಗಮನಿಸಿರುವ ಕಾಂಗ್ರೆಸ್ ನಾಯಕರಿಗೆ ಕರ್ನಾಟಕದ ಕಾಂಗ್ರೆಸ್ನಲ್ಲಿ ಎದ್ದಿರುವ ಅಸಮಾಧಾನ ಗಾಯಕ್ಕೆ ಉಪ್ಪು ಸವರಿದ ಅನುಭವವಾಗಿದೆ.
ಇದೀಗ ಸಿದ್ದರಾಮಯ್ಯ ಅವರೇನೋ "ಎಲ್ಲ ಸರಿಹೋಗಿದೆ. ಯಾವುದೇ ಗೊಂದಲವಿಲ್ಲ. ಐದು ವರ್ಷವನ್ನು ಯಶಸ್ವಿಯಾಗಿ ಮೈತ್ರಿ ಸರ್ಕಾರ ಪೂರೈಸುತ್ತದೆ. ಬಿಜೆಪಿಯವರು ಅಧಿಕಾರದಾಸೆಗೆ ಬಿಕ್ಕಟ್ಟನ್ನು ಹುಟ್ಟು ಹಾಕಿದ್ದಾರೆ" ಎನ್ನುವ ಮೂಲಕ ಏನೂ ಆಗಿಲ್ಲ ಎಂಬ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ.
ಇದು ಎಲ್ಲೋ ಒಂದು ಕಡೆ ಸರ್ಕಾರ ಬಿದ್ದು ಹೋಗುತ್ತೆ ನಾವು ಸರ್ಕಾರ ರಚಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಭಾರೀ ಹೊಡೆತ ನೀಡಿದೆ. ಆದರೂ ಬಿಜೆಪಿ ನಾಯಕರು ಇಷ್ಟಕ್ಕೆ ಸುಮ್ಮನಾಗುತ್ತಾರೆ ಎನ್ನಲಾಗುತ್ತಿಲ್ಲ. ಅವರು ಅವಕಾಶಕ್ಕೆ ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗುತ್ತಿದೆ. ಒಂದಲ್ಲ ಒಂದು ಗೊಂದಲಗಳು ಸರ್ಕಾರದ ಸುತ್ತಲೂ ಸುತ್ತುತ್ತಿದ್ದು, ಅದರ ಪರಿಣಾಮಗಳು ಜನರ ಮೇಲಾಗುತ್ತಿದೆ. ರಾಜ್ಯದ ಜನ ಮುಂದಿನ ದಿನಗಳಲ್ಲಿ ಇನ್ಯಾವ ಸಂಕಷ್ಟವನ್ನು ಎದುರಿಸಬೇಕೋ?