ಮಹದಾಯಿ ಅಂತಿಮ ತೀರ್ಪು : ಏನಿದು ಮೂರು ರಾಜ್ಯಗಳ ನಡುವಿನ ವಿವಾದ?

ಬೆಂಗಳೂರು, ಆಗಸ್ಟ್ 14 : ಮಹದಾಯಿ ನ್ಯಾಯಾಧಿಕರಣದ ಅಂತಿಮ ತೀರ್ಪು ಮಂಗಳವಾರ ಪ್ರಕಟವಾಗಿದೆ. ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಜಲ ವಿವಾದ.

ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಾಧಿಕರಣ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಕರ್ನಾಟಕಕ್ಕೆ 13.42, ಗೋವಾ ರಾಜ್ಯಕ್ಕೆ 24 ಮತ್ತು ಮಹಾರಾಷ್ಟ್ರಕ್ಕೆ 1.30 ಟಿಎಂಸಿ ನೀರನ್ನು ನ್ಯಾಯಾಧೀಕರಣ ಹಂಚಿಕೆ ಮಾಡಿದೆ.

ಕರ್ನಾಟಕ 5.5 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಮಹದಾಯಿಯಿಂದ ಮಲಪ್ರಭಾ ನದಿಗೆ ನೀರನ್ನು ಹರಿಸಲು ನ್ಯಾಯಾಧಿಕರಣ ಒಪ್ಪಿಗೆ ನೀಡಿದೆ. ಆದರೆ, ಕರ್ನಾಟಕಕ್ಕೆ ಇನ್ನೂ 7 ಟಿಎಂಸಿ ನೀರು ಸಿಗಬೇಕಿತ್ತು ಎಂಬ ಬೇಡಿಕೆಯೂ ಇದೆ.

ನ್ಯಾಯಾಧಿಕರಣದ ಮುಂದೆ ಕರ್ನಾಟಕ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು 7.5 ಟಿಎಂಸಿ ನೀರನ್ನು ಬಳಸಿಕೊಳ್ಳಲು ಮಧ್ಯಂತರ ಅನುಮತಿ ನಿಡಬೇಕು ಎಂದು ವಿಚಾರಣೆ ಸಂದರ್ಭದಲ್ಲಿ ಕೇಳಿತ್ತು. ಆದರೆ, ಅದನ್ನು ತಿರಸ್ಕರಿಸಲಾಗಿತ್ತು. ಏನಿದು ವಿವಾದ? ಇಲ್ಲಿದೆ ಮಾಹಿತಿ...

ಮಹದಾಯಿ, ಮಾಂಡೋವಿ

ಮಹದಾಯಿ, ಮಾಂಡೋವಿ

ಮಹದಾಯಿ ನದಿಯನ್ನು ಗೋವಾದಲ್ಲಿ ಮಾಂಡೋವಿ ಎಂದು ಕರೆಯಲಾಗುತ್ತದೆ. ಗೋವಾದ ರಾಜಧಾನಿ ಪಣಜಿ ಮಾಂಡೋವಿ ನದಿ ತೀರದಲ್ಲಿಯೇ ಇದೆ. ಮಾಂಡೋವಿ ದೇಶದ ಚಿಕ್ಕನದಿಗಳಲ್ಲಿ ಒಂದಾಗಿದೆ.

ಮಹದಾಯಿ ಅಥವ ಮಾಂಡೋವಿ ನದಿ ಮಳೆಯಾಶ್ರಿತವಾಗಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಘಢ್‌ ನಲ್ಲಿ ನದಿ ಹುಟ್ಟುತ್ತದೆ. ಮೊದಲು 35 ಕಿ.ಮೀ.ನದಿ ಕರ್ನಾಟಕದಲ್ಲಿ ಹರಿಯುತ್ತದೆ. ಉಳಿದ 52 ಕಿ.ಮೀ. ಗೋವಾದಲ್ಲಿ ಹರಿಯುತ್ತದೆ, ನಂತರ ಅರಬ್ಬಿ ಸಮುದ್ರ ಸೇರುತ್ತದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳು ನದಿಯನ್ನು ಅವಲಂಬಿಸಿವೆ.

1970ರಲ್ಲಿ ಮೊದಲು ಯೋಜನೆ

1970ರಲ್ಲಿ ಮೊದಲು ಯೋಜನೆ

ನೀರಾವರಿ ತಜ್ಞ ದಿ.ಎಸ್‌.ಜಿ.ಬಾಳೆಕುಂದ್ರಿ ಅವರು 1970ರಲ್ಲಿ ಮಹದಾಯಿ ನದಿ ನೀರನ್ನು ತಿರುಗಿಸುವ ಯೋಜನೆ ಸಿದ್ಧಪಡಿಸಿದರು. ನದಿ ನೀರನ್ನು ತಿರುಗಿಸಿ ಧಾರವಾಡ ಜಿಲ್ಲೆಯ ನವಿಲು ತೀರ್ಥದಲ್ಲಿ ಸಂಗ್ರಹಿಸುವ ಯೋಜನೆ ಇದಾಗಿತ್ತು. 1970ರಲ್ಲಿ ನಿರ್ಮಾಣವಾದ ನವಿಲುತೀರ್ಥ ಅಣೆಕಟ್ಟು ಎರಡು-ಮೂರು ಬಾರಿ ಬಿಟ್ಟರೆ ಇದುವರೆಗೂ ಪೂರ್ಣ ಮಟ್ಟವನ್ನು ತಲುಪಿಲ್ಲ.

ಕರ್ನಾಟಕ 7.56 ಟಿಎಂಸಿ ನೀರನ್ನು ಮಹದಾಯಿ ನದಿಯಿಂದ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮತಿ ಕೇಳಿತು. ಕಳಸಾ-ಬಂಡೂರಿ ನಾಲೆಗಳ ಮೂಲಕ ನೀರನ್ನು ತಂದು 180 ಹಳ್ಳಿಗಳಿಗೆ, ಹುಬ್ಬಳ್ಳಿ-ಧಾರವಾಡಕ್ಕೆ ಪೂರೈಕೆ ಮಾಡುವುದು ಯೋಜನೆ.

ಕಾಮಗಾರಿ ಆರಂಭ

ಕಾಮಗಾರಿ ಆರಂಭ

ಎಸ್‌.ಎಂ.ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಕಾಮಗಾರಿ ಆರಂಭವಾಗಿತ್ತು. ಗೋವಾದಲ್ಲಿದ್ದ ಮನೋಹರ್ ಪಾರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿತು.

ಗೋವಾ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಯಿತು. ಯೋಜನೆಯನ್ನು ರದ್ದು ಮಾಡಬೇಕು ಎಂದು ಕರ್ನಾಟಕಕ್ಕೆ ಸೂಚಿಸುವಂತೆ ಮನವಿ ಮಾಡಿತ್ತು. ಯೋಜನೆ ಜಾರಿಯಾದರೆ ಪರಿಸರಕ್ಕೆ ಹಾನಿಯಾಗಲಿದೆ ಎಂದು ಅರ್ಜಿಯಲ್ಲಿ ಹೇಳಿತು.

ನ್ಯಾಯಾಧಿಕರಣ ರಚನೆ

ನ್ಯಾಯಾಧಿಕರಣ ರಚನೆ

ಮಹದಾಯಿ ವಿವಾದದ ಬಗ್ಗೆ ಚರ್ಚೆಗಳು ಆರಂಭವಾದಾಗ ಯುಪಿಎ-2 ಸರ್ಕಾರ ಮಹದಾಯಿ ನ್ಯಾಯಾಧಿಕರಣವನ್ನು 2010ರಲ್ಲಿ ರಚನೆ ಮಾಡಿತು. ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಾಧಿಕರಣ 105 ದಿನಗಳ ಕಾಲ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ.

ಗೋವಾ ನ್ಯಾಯಾಧಿಕರಣದ ಮುಂದೆ ವಾದ ಮಂಡನೆ ಮಾಡುವಾಗ ಯೋಜನೆ ಜಾರಿಯಾದರೆ 700 ಹೆಕ್ಟೇರ್ ಅರಣ್ಯ ಮುಳುಗಡೆಯಾಗಲಿದೆ. 60 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಹೇಳಿತ್ತು.

ಅಮಿತ್ ಶಾ ನಿವಾಸದಲ್ಲಿ ಸಭೆ

ಅಮಿತ್ ಶಾ ನಿವಾಸದಲ್ಲಿ ಸಭೆ

ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಮ್ಮ ನಿವಾಸದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ಬಗೆರಿಸುವಂತೆ ಸೂಚಿಸಿದರು. ಆದರೆ, ಸಭೆ ಫಲ ಕೊಡಲಿಲ್ಲ.

ಮಹದಾಯಿ ನ್ಯಾಯಾಧಿಕರಣದ ಅವಧಿ ಆಗಸ್ಟ್ 20ರಂದು ಅಂತ್ಯಗೊಳ್ಳಲಿದೆ. ಅದಕ್ಕೂ ಮೊದಲು ಆ.14ರಂದು ನ್ಯಾಯಾಧಿಕರಣ ಅಂತಿಮ ತೀರ್ಪನ್ನು ನೀಡಿದೆ.

ಕರ್ನಾಟಕದಲ್ಲಿ ಕುಡಿಯುವ ನೀರಿಗಾಗಿ ನಡೆಯುತ್ತಿದ್ದ ಹೋರಾಟಕ್ಕೆ ಅಂತಿಮ ತೀರ್ಪಿನಿಂದ ಸ್ವಲ್ಪ ನೆಮ್ಮದಿ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+