ಕುಮಾರಸ್ವಾಮಿಗೆ 'ಕಾಮರಾಜ ಮಾರ್ಗ' ಈಗ ಉಳಿದಿರುವ ಏಕೈಕ ಆಯ್ಕೆ
Recommended Video
ಬೆಂಗಳೂರು, ಜುಲೈ 07: ರಾಜಕೀಯ ಬಿಕ್ಕಟ್ಟು ಎದುರಾದಾಗ ಸರ್ಕಾರ ಉಳಿಸಿಕೊಳ್ಳಲು 'ಸಾಮ, ದಾನ, ಬೇಧ, ದಂಡ' ಹೀಗೆ ವಿವಿಧ ಮಾರ್ಗಗಳನ್ನು ಅನುಸರಿಸುವುದು ಮಾಮೂಲಿ.
ಕರ್ನಾಟಕದಲ್ಲಿ ಇಂದು ತಲೆದೋರಿರುವುದು ರಾಜೀನಾಮೆ ಪ್ರಹಸನವೆ ಹೊರತು ಇನ್ನೂ ದೊಡ್ಡ ಬಿಕ್ಕಟ್ಟಿನ ಸ್ಥಿತಿ ಎನ್ನಲು ಬರುವುದಿಲ್ಲ. ಅಷ್ಟು ಶಾಸಕರ ರಾಜೀನಾಮೆ ಅಂಗೀಕರಿಸದ ಹೊರತು ಸರ್ಕಾರ ಉರುಳುವುದಿಲ್ಲ. ಒಟ್ಟಾರೆ, ರಾಜೀನಾಮೆ ನಾಟಕದ ಕ್ಲೈಮ್ಯಾಕ್ಸಿಗೆ ಮುಂದಿನ ವಿಧಾನಸಭೆ ಅಧಿವೇಶನ ವೇದಿಕೆ ಒದಗಿಸಲಿದೆ.
ಬೆಂಗಳೂರಿಗೆ ಬಂದ ಬಳಿಕ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಹಸಕ್ಕೆ ಕುಮಾರಸ್ವಾಮಿ ಕೈ ಹಾಕಲಿದ್ದು, ಅಗತ್ಯ ಸಂಖ್ಯೆಯನ್ನು ನೋಡಿಕೊಂಡು, ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಯತ್ನಕ್ಕೆ ಕೈ ಹಾಕಬಹುದು.
ಇಲ್ಲದಿದ್ದರೆ, ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಲು ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ. ರಾಜೀನಾಮೆ ಸಲ್ಲಿಸಬಹುದು. ಸಚಿವ ಸಂಪುಟ ಸಭೆ ನಡೆಸಿ ವಿಧಾನಸಭೆ ವಿಸರ್ಜನೆ ತೀರ್ಮಾನ ಕೈಗೊಂಡು ಅದನ್ನು ರಾಜ್ಯಪಾಲರಿಗೆ ತಲುಪಿಸಬಹುದು.

'ಕಾಮರಾಜ' ಮಾರ್ಗವೇ ಸೂಕ್ತ
ಸಚಿವ ಸ್ಥಾನದ ಆಕಾಂಕ್ಷಿಗಳನ್ನು ತೃಪ್ತಿಪಡಿಸುವುದು ತಾತ್ಕಾಲಿಕ ಕ್ರಮ ಮಾತ್ರ ಎಂದು ಕುಮಾರಸ್ವಾಮಿಗೆ ಅರಿವಿದೆ. ಹೀಗಾಗಿ, ಪರ್ಯಾಯ ಮಾರ್ಗವೊಂದೇ ದಾರಿ. ಕಷ್ಟಕಾಲ ಎದುರಿಸುತ್ತಿರುವ ಕಾಂಗ್ರೆಸ್- ಜೆಡಿಎಸ್ ಸರ್ಕಾರಕ್ಕೆ ಈಗ 'ಕಾಮರಾಜ' ಮಾರ್ಗವೇ ಸೂಕ್ತ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹಾಗಾದರೆ ಏನಿದು ಕಾಮರಾಜ ಸೂತ್ರ?
ದೇಶಕಂಡ ಉತ್ತಮ ರಾಜಕೀಯ ಮುತ್ಸದ್ಧಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಿಷ್ಠಾವಂತ ಕೆ ಕಾಮರಾಜ್ ಅವರು ಕಷ್ಟಕಾಲದಲ್ಲಿದ್ದ ಕಾಂಗ್ರೆಸ್ಸಿಗೆ ಹಾಕಿಕೊಟ್ಟ ಮಾರ್ಗವೇ ಕಾಮರಾಜಸೂತ್ರ ಮಾರ್ಗ.

ಈ ಸೂಕ್ತ ಮಾರ್ಗ ಎಂದು ದೇವೇಗೌಡರು ಸೂಚಿಸಬಹುದು
ಇದು ರವಿ ಬೆಳೆಗೆರೆ ಅವರ ಪುಸ್ತಕದ ಕತೆಯಲ್ಲ. ದೇಶ ಕಂಡ ಉತ್ತಮ ರಾಜಕೀಯ ಮುತ್ಸದ್ಧಿ ಕೆ ಕಾಮರಾಜ್ ಅವರು ಅನುಸರಿಸಿದ ಮಾರ್ಗವೇ 'Kamaraj Plan' ಎಂದು ಹೆಸರುವಾಸಿಯಾಯಿತು. ಇದೇ ಯೋಜನೆಯನ್ನು ಈಗ ಕುಮಾರಸ್ವಾಮಿ ಅವರು ಅನುಸರಿಸಲು ದೇವೇಗೌಡರು ಸೂಚಿಸಲು ಮುಂದಾಗಿದ್ದಾರೆ. 1963ರಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ರಾಜೀನಾಮೆ ನೀಡುವಂತೆ ಸೂಚಿಸಿ, ಪಕ್ಷದ ಬಲವರ್ಧನೆ, ಸಂಘಟನೆಗೆ ಬಳಸಿಕೊಳ್ಳಲಾಯಿತು. ಆದರೆ, ಇದು ಅಧಿಕಾರ ದಾಹ, ಪಕ್ಷ ನಿಷ್ಠೆಗೆ ಸಂಬಂಧಿಸಿದ್ದು, ಸತ್ವಯುತ ರಾಜಕೀಯ, ಪ್ರಜಾಪ್ರಭುತ್ವ ಉಳಿಸಲು ಸೂಕ್ತ ಮಾರ್ಗ. ಈಗಿನ ರಾಜಕಾರಣಿಗಳು ಈ ಮಾರ್ಗ ಅನುಸರಿಸಬಲ್ಲರೇ ಎಂಬುದೇ ದೊಡ್ಡ ಪ್ರಶ್ನೆ.

ಎಐಸಿಸಿ ಅಧ್ಯಕ್ಷರಾಗಿದ್ದ ಕಾಮರಾಜ್
ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹ್ರೂ ಕೂಡಾ ಈ ಯೋಜನೆಗೆ ತಲೆ ಬಾಗಿದ್ದರು. 6 ಕೇಂದ್ರ ಸಚಿವರು ಹಾಗೂ 6 ರಾಜ್ಯಗಳ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಪಕ್ಷಕ್ಕಾಗಿ ದುಡಿಯಲು ಮುಂದಾದರು.
ಲಾಲ್ ಬಹದ್ದೂರ್ ಶಾಸ್ತ್ರಿ, ಜಗಜೀವನ್ ರಾಮ್, ಮೊರಾರ್ಜಿ ದೇಸಾಯಿ, ಬಿಜು ಪಟ್ನಾಯಕ್ ಹಾಗೂ ಎಸ್ ಕೆ ಪಾಟೀಲ್ ಅವರು ರಾಜೀನಾಮೆ ನೀಡಿದ್ದರು. ನಂತರ ಎಐಸಿಸಿ ಅಧ್ಯಕ್ಷರಾದ ಕಾಮರಾಜ್ ಅವರು ನೆಹರೂ ನಿಧನ ನಂತರ ಉಂಟಾದ ರಾಜಕೀಯ ಅಸ್ಥಿರತೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು

2012ರಲ್ಲಿ ಕರ್ನಾಟಕದಲ್ಲೂ ಈ ಬಗ್ಗೆ ಚಿಂತನೆ
ನೆಹರೂ ನಿಧನ ನಂತರ ಎಐಸಿಸಿ ಅಧ್ಯಕ್ಷರಾಗಿದ್ದ ಕಾಮರಾಜ್ ಅವರಿಗೆ ಪ್ರಧಾನಿಯಾಗುವ ಅವಕಾಶ ಒದಗಿ ಬಂದಿತ್ತು. ಅದರೆ ಪ್ರಧಾನಿ ಹುದ್ದೆ ಬೇಡ ಎಂದ ಕಾಮರಾಜ್ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಆಡಳಿತ ನಡೆಸಲು ಬೇಕಾದ ರಾಜಕೀಯ ಸ್ಥಿರತೆ ತಂದರು. ಈ ಮೂಲಕ ಸರಳ, ವಿರಳ, ವಿಶಿಷ್ಟ ರಾಜಕಾರಣಿಗಳ ಸಾಲಿನಲ್ಲಿ ಗುರುತಿಸಿಕೊಂಡರು.
ಕರ್ನಾಟಕದಲ್ಲಿ ಈ ಮುಂಚೆ 2012ರಲ್ಲಿ ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಾಮರಾಜ ಮಾರ್ಗ ಅನುಸರಿಸುವ ಬಗ್ಗೆ ಸಿಟಿ ರವಿ ಹಾಗೂ ಕೆಎಸ್ ಈಶ್ವರಪ್ಪ ಅವರು ಚಿಂತನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು












Click it and Unblock the Notifications