ಕರ್ನಾಟಕ ಚುನಾವಣೆ : ಜಾತಿ ಲೆಕ್ಕಾಚಾರವೇನು?
ಬೆಂಗಳೂರು, ಫೆಬ್ರವರಿ 27 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವನ್ನು ಕಡೆಗಣಿಸುವಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಲೆಕ್ಕಾಚಾರ ಮಹತ್ವದ ಪಾತ್ರ ವಹಿಸಲಿದೆ.
ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ವಿಚಾರಗಳು ಚುನಾವಣೆಯ ಪ್ರಮುಖ ಅಂಶಗಳಾಗಿವೆ. ಅದರ ಜೊತೆಗೆ ಜಾತಿ ಲೆಕ್ಕಾಚಾರವೂ ಸೇರಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಬಹುನಿರೀಕ್ಷಿತ ಜಾತಿ ಗಣತಿಗೆ ಸಿದ್ದರಾಮಯ್ಯ ಎಳ್ಳುನೀರು?
ಕರ್ನಾಟಕದಲ್ಲಿ ಈಗಲೇ ಚುನಾವಣೆ ನಡೆದರೆ ಜಾತಿಯ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸಲಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಹಕ್ಕು ಚಲಾಯಿಸುವಾಗ, ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮುಂತಾದ ವಿಷಯಗಳ ಜೊತೆ ಅಭ್ಯರ್ಥಿಯ ಜಾತಿಯನ್ನು ನೋಡಿ ಮತ ನೀಡಲಿದ್ದಾರೆ.
ರಾಜಕೀಯ ವಿಶ್ಲೇಷಕ ಮತ್ತು ಜೈನ್ ವಿವಿಯ ಉಪ ಕುಲಪತಿ ಡಾ.ಸಂದೀಪ್ ಶಾಸ್ತ್ರಿ ಅವರು ಕುರಿತು ಮಾತನಾಡಿದ್ದಾರೆ. 'ಅಭಿವೃದ್ದಿಯ ಮಾತು, ಆಡಳಿತ ಪಕ್ಷದ ಯೋಜನೆಗಳು ಮುಂತಾದವುಗಳನ್ನು ಮೀರಿಸುವ ಶಕ್ತಿ ಜಾತಿ ಲೆಕ್ಕಾಚಾರಕ್ಕಿದೆ' ಎಂದು ಹೇಳಿದ್ದಾರೆ.
ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?
ಕರ್ನಾಟಕದಲ್ಲಿ ಸುಮಾರು 1300 ವಿವಿಧ ಸಮುದಾಯಗಳಿವೆ. ಆದರೆ, ಲಿಂಗಾಯತ ಮತ್ತು ಒಕ್ಕಲಿಗೆ ಸಮುದಾಯಗಳಿಗೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಸ್ವತಂತ್ರ ಬಂದ ಬಳಿಕ ಇದೇ ಸಮುದಾಯದ ಹೆಚ್ಚಿನ ಪ್ರತಿನಿಧಿಗಳು ಮುಖ್ಯಮಂತ್ರಿಯಾಗಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಮುಖ್ಯಮಂತ್ರಿ ಪಟ್ಟಕ್ಕೇರಿದರು. 2015ರಲ್ಲಿ ಜಾತಿಗಣತಿ ಆರಂಭಿಸುವ ಮೂಲಕ ಹೊಸ ಚರ್ಚೆಯನ್ನು ಹುಟ್ಟು ಹಾಕಿದರು. ಜಾತಿಗಣತಿ ವರದಿ ಇನ್ನೂ ಬಿಡುಗಡೆಗೊಂಡಿಲ್ಲ.
ಎಲ್ಲಾ ಜಾತಿಗಳಿಗೂ ಎಲ್ಲಾ ಪಕ್ಷದಲ್ಲೂ ಹಲವಾರು ರಾಜಕೀಯ ನೇತಾರರು ಇದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್ ಹೈದರಾಬಾದ್-ಕರ್ನಾಟಕ ಭಾಗದ 371 (ಜೆ) ಅನುಷ್ಠಾನ, ಜನಪರ ಯೋಜನೆಗಳಿಂದ ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.
ಲಿಂಗಾಯತ ಸಮುದಾಯ ಬಿಜೆಪಿ ಜೊತೆ ಇದೆ. ಇದೇ ಸಮುದಾಯಕ್ಕೆ ಸೇರಿದ ಬಿ.ಎಸ್.ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿ. ಒಕ್ಕಲಿಗೆ ಸಮುದಾಯದವರು ಜೆಡಿಎಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ.
'ಈಗ ಜನರು ಜಾತಿಯ ಬಗ್ಗೆ ಹೆಚ್ಚು ಆಲೋಚನೆ ಮಾಡುವುದಿಲ್ಲ. ತಮ್ಮ ಕ್ಷೇತ್ರ, ಗ್ರಾಮದಲ್ಲಿ ಹೇಗೆ ಅಭಿವೃದ್ಧಿಯಾಗಿದೆ ಎಂದು ನೋಡುತ್ತಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.