ಸಿಎಂ ಗಾದಿಗಾಗಿ ನಿಲ್ಲದ ಹೋರಾಟ: ರಾಜ್ಯ ಕಾಂಗ್ರೆಸ್ನಲ್ಲಿ ಗೊಂದಲ ಬಗೆಹರಿಯುತ್ತಿಲ್ಲ ಏಕೆ?
ಬೆಂಗಳೂರು, ಜನವರಿ 02: ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪಕ್ಷದೊಳಗೆ ನಡೆಯುತ್ತಿರುವ ಕೆಲವೊಂದು ಬೆಳವಣಿಗೆಯಿಂದ ಗೊತ್ತಾಗುತ್ತಿದೆ. ಜೊತೆಗೆ ಸಚಿವರ ವಿರುದ್ಧ ಶಾಸಕರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿರುವುದು, ಮೂವರು ಡಿಸಿಎಂ ಬೇಕೆಂಬ ಒತ್ತಾಯ, ಜಾತಿಗಣತಿ ಜಾರಿ ವಿಚಾರದಲ್ಲಿ ಪಕ್ಷದ ನಾಯಕರಲ್ಲಿರುವ ಗೊಂದಲ ಹೀಗೆ ಹತ್ತು ಹಲವು ವಿಚಾರಗಳು ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದ ರಾಜ್ಯ ಕಾಂಗ್ರೆಸ್ ಆ ಮೂಲಕ ಇಡೀ ದೇಶದ ಜನರು ತಿರುಗಿ ನೋಡುವಂತೆ ಮಾಡಿತ್ತಲ್ಲದೆ, ಸೋತು ಸುಣ್ಣವಾಗಿದ್ದ ಕೇಂದ್ರದ ಕೈ ನಾಯಕರಿಗೆ ಚೇತರಿಕೆಯ ಟಾನಿಕ್ ನೀಡಿತ್ತು. ದಕ್ಷಿಣ ಭಾರತದಲ್ಲಿ ಅದರಲ್ಲೂ ಬಿಜೆಪಿ ಆಡಳಿತವನ್ನು ಕಿತ್ತೊಗೆದು ಅಧಿಕಾರ ಸ್ಥಾಪಿಸುವಲ್ಲಿ ದುಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಕೇಂದ್ರದ ನಾಯಕರು ಸೇರಿದಂತೆ ದೇಶದಲ್ಲಿರುವ ಎಲ್ಲ ಕಾಂಗ್ರೆಸ್ ನಾಯಕರು ಅಭಿನಂದಿಸಿದ್ದರು.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುತ್ತಿದ್ದಂತೆಯೇ ಪಕ್ಷದೊಳಗೆ ಮುಖ್ಯಮಂತ್ರಿ ಗದ್ದುಗೆಗಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಪೈಪೋಟಿ ಶುರುವಾಗಿತ್ತು. ಇಬ್ಬರು ನಾಯಕರು ಹಗ್ಗಜಗ್ಗಾಟ ಶುರು ಮಾಡಿದ್ದರು. ಕಾಂಗ್ರೆಸ್ನ ಹೈಕಮಾಂಡ್ ಇಬ್ಬರು ನಾಯಕರನ್ನು ಒಪ್ಪಿಸಿ ಸಿಎಂ ಸ್ಥಾನವನ್ನು ಹಂಚುವ ವೇಳೆಗೆ ಸುಸ್ತಾಗಿದ್ದರು. ಕೊನೆಗೂ ಅದ್ಯಾವ ಸೂತ್ರದ ಮೂಲಕ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೋ ಗೊತ್ತಿಲ್ಲ. ಆ ವಿಚಾರದಲ್ಲಿನ ಗೌಪ್ಯತೆ ಇನ್ನೂ ಹಾಗೆಯೇ ಉಳಿದಿದೆ.
ಸಿಎಂ ಗಾದಿಗಾಗಿ ನಿಲ್ಲದ ಹೋರಾಟ
ಇವತ್ತಿಗೂ ಸಿಎಂ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಕೊಡಬೇಕು ಎಂಬ ಒತ್ತಾಯವನ್ನು ಡಿಕೆಶಿ ಅವರ ಬೆಂಬಲಿಗರು ಮಾಡುತ್ತಾ ಬರುತ್ತಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರ ನಡುವೆ ವಾಗ್ಬಾಣಗಳು ನಡೆಯುತ್ತಲೇ ಇದ್ದು ಅದಕ್ಕೆ ಪೂರ್ಣ ವಿರಾಮ ದೊರೆತಂತೆ ಕಾಣುತ್ತಿಲ್ಲ. ಈ ನಡುವೆ ಸಚಿವ ಸ್ಥಾನ ತಮಗೆ ನೀಡಿಲ್ಲ ಎಂಬ ಅಸಮಾಧಾನ ಹಿರಿಯ ಶಾಸಕರಲ್ಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕೆಲವರು ಸಚಿವರಾಗುತ್ತಲೇ ಇದ್ದಾರೆ. ಜೊತೆಗೆ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೂ ಸಚಿವ ಸ್ಥಾನ ನೀಡಲಾಗಿದೆ. ಪಕ್ಷಕ್ಕಾಗಿ ದುಡಿದವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂಬುದು ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೊಂದೆಡೆ ಅಸಮಾಧಾನಿತ ಹಿರಿಯ ಶಾಸಕರಿಗೆ ಕೆಲವೊಂದು ಹುದ್ದೆಗಳನ್ನು ನೀಡಿ ಅವರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆಯಾದರೂ ಹಿಂದುಳಿದ ದಲಿತ, ಲಿಂಗಾಯಿತ ಸಮುದಾಯವನ್ನು ಪ್ರತಿನಿಧಿಸುವ ಸಲುವಾಗಿ ಮೂರು ಡಿಸಿಎಂಗಳನ್ನು ನೇಮಕ ಮಾಡಬೇಕೆಂಬ ಒತ್ತಾಯ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತಲ್ಲದೆ ಅದು ಈಗಲೂ ಜೀವಂತವಾಗಿಯೇ ಇದೆ.
ನಿಗಮ ಮಂಡಳಿಗೂ ನಡೆಯದ ನೇಮಕ
ಸರ್ಕಾರ ರಚನೆಯಾದಲ್ಲಿಂದಲೂ ಸಚಿವ ಸ್ಥಾನ ಸಿಗದ ಬಹುತೇಕ ಶಾಸಕರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಕೂತಿದ್ದಾರೆ. ಬಹಳಷ್ಟು ಮಂದಿ ಈ ಸ್ಥಾನಕ್ಕಾಗಿ ಲಾಬಿ ಮಾಡುತ್ತಲೇ ಬರುತ್ತಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣ ಆಯ್ಕೆ ಕಠಿಣವಾಗುತ್ತಿದೆ. ಇಲ್ಲಿ ಆಯ್ಕೆ ಮಾಡುವುದೇ ಸವಾಲ್ ಆಗಿದೆ. ಶಾಸಕರಲ್ಲದೆ, ಬಹುತೇಕ ನಾಯಕರು ಪಕ್ಷದ ಬೆಳವಣಿಗೆಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಾ ಬಂದಿದ್ದಾರೆ. ಅವರು ಎಷ್ಟೇ ಶ್ರಮಪಟ್ಟರೂ ಕೇವಲ ಪಕ್ಷದ ಮುಖಂಡರಾಗಿ ಉಳಿದು ಹೋಗಿದ್ದಾರೆ. ಅಂತಹವರನ್ನು ಗುರುತಿಸಿ ಅವರಿಗೆ ನಿಗಮಮಂಡಳಿಗಳಲ್ಲಿ ಸ್ಥಾ ನ ನೀಡಬೇಕೆಂಬುದು ಡಿ.ಕೆ.ಶಿವಕುಮಾರ್ ಅವರ ಆಲೋಚನೆ ಆಗಿದೆ.

ಇದನ್ನು ಕಾರ್ಯರೂಪಕ್ಕೆ ತರುವುದು ಸುಲಭವಾಗಿ ಉಳಿದಿಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾ ನದ ಮೇಲೆ ಕಣ್ಣಿಟ್ಟಿರುವ ಶಾಸಕರನ್ನು ಬದಿಗೆ ಸರಿಸಿ ಮುಖಂಡರಿಗೆ ನೀಡಿದರೆ ಪಕ್ಷದೊಳಗೆ ಅಸಮಾಧಾನ ಭುಗಿಲೇಳಬಹುದು. ಇದು ಲೋಕ ಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ತೂಗಿ ಅಳೆದು ನಿಗಮ ಮಂಡಳಿಗಳ ನೇಮಕ ಪಟ್ಟಿಯನ್ನು ಮಾಡಬೇಕಾಗಿದ್ದು, ಕಳೆದ ಆರು ತಿಂಗಳಿನಿಂದಲೂ ಈ ಸಂಬಂಧ ಕೇಂದ್ರ ನಾಯಕರು ಮತ್ತು ರಾಜ್ಯ ನಾಯಕರ ನಡುವೆ ಚರ್ಚೆಗಳು ನಡೆಯುತ್ತಿದ್ದು, ಇನ್ನೂ ಕೂಡ ಒಮ್ಮತಕ್ಕೆ ಬಂದಿಲ್ಲ.
'ಕೈ' ಶಾಸಕ -ಸಚಿವರ ನಡುವೆ ಕಿತ್ತಾಟ
ಇದೆಲ್ಲದರ ನಡುವೆ ಶಿವಮೊಗ್ಗದಲ್ಲಿ ಸಚಿವ ಮಧುಬಂಗಾರಪ್ಪ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳು ಬೀದಿಗೆ ಬಂದಿವೆ. ಅದರ ನಡುವೆ ಸಚಿವ ಸ್ಥಾನವನ್ನು ನೀಡಬೇಕೆಂಬ ಬೇಡಿಕೆಯನ್ನು ಶಾಸಕ ಗೋಪಾಲಕೃಷ್ಣ ಅವರು ಸಿಎಂ ಮುಂದಿಟ್ಟಿದ್ದಾರೆ. ಇದೆಲ್ಲವೂ ಸರಿಹೋಗುವ ಲಕ್ಷಣಗಳಂತು ಕಾಣಿಸುತ್ತಿಲ್ಲ. ಪಕ್ಷದೊಳಗೆ ಒಂದಲ್ಲ ಒಂದು ರೀತಿಯ ಗೊಂದಲಗಳು ಹುಟ್ಟಿಕೊಳ್ಳುತ್ತಲೇ ಇದೆ. ಎಲ್ಲವನ್ನೂ ಸರಿಪಡಿಸಿಕೊಂಡು ಲೋಕಸಭಾ ಚುನಾವಣೆಗೆ ರಾಜ್ಯ ನಾಯಕರು ತಯಾರಾಗುವುದು ಯಾವಾಗ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಲ್ಲವೂ ಸರಿಹೋಗಿದೆ ಎಂದು ಹೇಳುತ್ತಿದ್ದರೂ ಅಲ್ಲಲ್ಲಿ ಅಸಮಾಧಾನದ ಹೊಗೆ ಕಾಣಿಸುತ್ತಿದೆ. ಇದರ ನಡುವೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 20 ಸ್ಥಾನಗಳಲ್ಲಿ ಗೆಲ್ಲುವಂತೆ ಟಾರ್ಗೆಟ್ ನೀಡಲಾಗಿದೆ. ಬಹಳಷ್ಟು ಕ್ಷೇತ್ರಗಳಲ್ಲಿ ಸೂಕ್ತ, ಸಮರ್ಥ ಅಭ್ಯರ್ಥಿಗಳೇ ಇಲ್ಲವಾಗಿರುವುದು ನಾಯಕರಿಗೆ ತಲೆನೋವು ತಂದಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಬಹುಮತದೊಂದಿಗೆ ಅಧಿಕಾರ ಹಿಡಿದರೂ ಕಾಂಗ್ರೆಸ್ನಲ್ಲಿ ಗೊಂದಲ ಮಾತ್ರ ದೂರವಾದಂತೆ ಕಾಣಿಸುತ್ತಿಲ್ಲ.












Click it and Unblock the Notifications