ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?
ಬರ ಪರಿಸ್ಥಿತಿ ಎಂಬುದನ್ನು ಕೇಳಿ ರೂಢಿಯಾದವರಿಗೆ ಹಾಗೆ ಹೇಳಲು ಕಾರಣವಾಗುವ ಅಂಶಗಳು ಯಾವುವು ಎಂಬುದು ಗೊತ್ತಿರಲಿ ಎಂಬ ಕಾರಣಕ್ಕೆ ಈ ವರದಿ ಪ್ರಕಟವಾಗುತ್ತಿದೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿಯ ಚಿತ್ರಣ ಸ್ಥೂಲ ಮಟ್ಟದಲ್ಲಿ ಕಟ್ಟಿಕೊಡುತ್ತೇವೆ
ಬೆಂಗಳೂರು, ಮಾರ್ಚ್ 14: ಕಳೆದ ವರ್ಷ ರಾಜ್ಯದ ಪಾಲಿಗೆ ತೀರಾ ದುರದೃಷ್ಟದ ವರ್ಷ. ಅದರ ಪರಿಣಾಮವನ್ನು ನಾವು 2017ರಲ್ಲಿ ಅನುಭವಿಸುತಿದ್ದೀವಿ ಅಂತಲೇ ಮಾತಿಗೆ ಶುರು ಮಾಡಿದರು ತುಮಕೂರು ಜಿಲ್ಲೆ ಪಾವಗಡ ತಾಲೂಕು ಲಿಂಗದಹಳ್ಳಿಯ ತಿಮ್ಮರಾಜು. ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಬೋರ್ ವೆಲ್ ಕೊರೆಸಿರುವ ಅವರು, ಅದಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ.
ಇದು ಒಬ್ಬ ತಿಮ್ಮರಾಜು ಅವರ ಸ್ಥಿತಿಯಲ್ಲ. ಮಲೆನಾಡಿನಲ್ಲೇ ಈ ಸಲ ಮಳೆಯ ಕೊರತೆಯಾಗಿದೆ. ಆಗುಂಬೆ ಬಳಿಯ ಗುಡ್ಡೇಕೇರಿಯ ಅಡಿಕೆ ಕೃಷಿಕರಾದ ಶ್ರೀಧರ್ ಅವರೂ ಅದೇ ಮಾತನ್ನು ಹೇಳುತ್ತಾರೆ. ಈ ತಿಂಗಳು ನಮಗೆ ಮಳೆ ಆಗಬೇಕು ಒಂದು ವೇಳೆ ಆಗಲಿಲ್ಲ ಅಂದರೆ ನಮಗೆ ಸಮಸ್ಯೆ ಆಗಬಹುದು. ನಮಗೆ ಈ ಬೇಸಿಗೆಯಲ್ಲೂ ರಾತ್ರಿ ವೇಳೆ ಚಳಿಯಿದೆ. ಹಗಲು ವಿಪರೀತ ಬಿಸಿಲು. ಇದು ಮಳೆ ಕೊರತೆಯ ಮುನ್ಸೂಚನೆ ಎನ್ನುತ್ತಾರೆ.[ಬರದಲ್ಲೂ ನೆರೆರಾಜ್ಯಕ್ಕೆ ಅಕ್ರಮ ಮೇವು ಸಾಗಾಟ]
ಅಂದಹಾಗೆ, ರಾಜ್ಯದಾದ್ಯಂತ ಬರಗಾಲವಿದೆ. ಬರ ಎಂಬ ಪದ ಕೇಳಿಕೇಳಿ ರೂಢಿ ಆದವರಿಗೆ, ಇದನ್ನು ಹೇಗೆ ನಿರ್ಧರಿಸುತ್ತಾರೆ ಎಂಬ ವಿಚಾರ ಗೊತ್ತಿರಬೇಕು. ಬರ ಪರಿಸ್ಥಿತಿ ಎಂದು ಸರಕಾರ ಘೋಷಣೆ ಮಾಡುವುದು ಆಯಾ ಜಿಲ್ಲೆಯಿಂದ ರವಾನೆಯಾಗುವ ಕೆಲವು ಮಾಹಿತಿಗಳ ಆಧಾರದ ಮೇಲೆ. ಅಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇರುವ ತಾಲೂಕಿನ ಅಂಕಿ-ಅಂಶಗಳನ್ನು ತಹಸೀಲ್ದಾರ್ ಗಳು ಜಿಲ್ಲಾಧಿಕಾರಿಗೆ, ಆ ನಂತರ ಅವರು ಸರಕಾರಕ್ಕೆ ಕಳಿಸುತ್ತಾರೆ.
ಮಳೆ ಪ್ರಮಾಣ ಶೇ 25ಕ್ಕಿಂತ ಕಡಿಮೆಯಾದರೆ ಬರ
ಆಯಾ ತಾಲೂಕು ವ್ಯಾಪ್ತಿಯಲ್ಲಿ ಆದ ಮುಂಗಾರು ಹಾಗೂ ಹಿಂಗಾರು ಮಳೆಯ ಪ್ರಮಾಣವನ್ನು ಸಂಗ್ರಹಿಸುತ್ತಾರೆ. ಅದು ವಾಸ್ತವದ ಸಂಖ್ಯೆ. ಅದನ್ನು ವಾಡಿಕೆ ಮಳೆಯ ಜೊತೆಗೆ ಹೋಲಿಸುತ್ತಾರೆ. ಹವಾಮಾನ ಇಲಾಖೆಯ ಬಳಿ ಆಯಾ ತಾಲೂಕಿನ ಸರಾಸರಿ ಮಳೆ ಬೀಳುವ ಪ್ರಮಾಣದ ಮಾಹಿತಿ ಇರುತ್ತದೆ. ಒಟ್ಟಾರೆ ಮಳೆ ಪ್ರಮಾಣ ಶೇ 25ಕ್ಕಿಂತ ಕಡಿಮೆಯಾದರೆ ಬರ ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ.
ಬಿತ್ತನೆ- ಬೆಳೆ ನಷ್ಟಕ್ಕೂ ಮಾನದಂಡ
ಉದಾಹರಣೆಗೆ ಒಂದು ತಾಲೂಕಿನಲ್ಲಿ ಸರಾಸರಿ ಮಳೆ ಪ್ರಮಾಣ 100 ಮಿಲಿ ಮೀಟರ್ ಎಂದಿದ್ದರೆ, ಆ ವರ್ಷ 25 ಮಿಲಿಮೀಟರ್ ಗಿಂತ ಕಡಿಮೆ ಮಳೆಯಾಗಿದ್ದರೆ ಬರ ಎಂದು ಪರಿಗಣಿಸಲಾಗುತ್ತದೆ. ಬಿತ್ತನೆ ಪ್ರಮಾಣ ಹಾಗೂ ಬೆಳೆ ನಷ್ಟಕ್ಕೂ ಇದೇ ರೀತಿ ಮಾನದಂಡ ಅನುಸರಿಸಲಾಗುತ್ತದೆ. ಬಿತ್ತನೆ ಮಾಡಿದ್ದ ಪ್ರಮಾಣದಲ್ಲಿ ಶೇ 75ಕ್ಕಿಂತ ಹೆಚ್ಚಿನ ನಷ್ಟವಾದರೆ ಸರಕಾರ ಪರಿಹಾರ ಘೋಷಣೆ ಮಾಡುತ್ತದೆ.
ನೀರು ಹಾಗೂ ಮೇವಿನ ಲಭ್ಯತೆ ಅಂಕಿ-ಅಂಶ ಸಂಗ್ರಹ
ಇನ್ನು ಮೇವು ಹಾಗೂ ನೀರಿನ ವಿಚಾರಕ್ಕೆ ಬಂದರೆ ಆಯಾ ಗ್ರಾಮ ಪಂಚಾಯಿತಿಗಳಿಂದ ತಹಸೀಲ್ದಾರ್ ಆದವರು ನೀರು ಹಾಗೂ ಮೇವಿನ ಲಭ್ಯತೆ ಪ್ರಮಾಣ ಅಂಕಿ-ಅಂಶವನ್ನು ಸಂಗ್ರಹಿಸುತ್ತಾರೆ. ಕೆರೆ-ಕಟ್ಟೆಗಳು ಒಣಗಿ, ಕುಡಿಯುವ ನೀರಿನ ಮೂಲಗಳು ಬತ್ತಿಹೋದಾಗಲೂ ಸರಕಾರ ಏನಾದರೂ ವ್ಯವಸ್ಥೆ ಮಾಡಬೇಕಾಗುತ್ತದೆ. ಅಲ್ಲಲ್ಲಿ ಗೋಶಾಲೆಗಳನ್ನು ತೆರೆಯಬೇಕಾಗುತ್ತದೆ. ನೀರು ಒದಗಿಸಲಾಗುತ್ತದೆ.
ಕೆರೆಗಳು ತುಂಬುವಂಥ ಮಳೆಯೇ ಆಗಿಲ್ಲ
"ಹಳ್ಳಿಗಳಲ್ಲಿ ಹುಡುಗರು ಈಜು ಕಲಿಯುತ್ತಿದ್ದದ್ದೇ ಕೆರೆಗಳಲ್ಲಿ. ಆದರೆ ಕಳೆದ ಹದಿನೈದು ವರ್ಷಗಳಿಂದ ಈ ತಲೆಮಾರಿನ ಬಹುತೇಕರು ಈಜು ಕಲಿಯುವುದಕ್ಕೆ ಸಾಧ್ಯವೇ ಆಗಿಲ್ಲ. ಏಕೆಂದರೆ ಕೆರೆಗಳು ತುಂಬುವಂಥ ಮಳೆಯೇ ಆಗಿಲ್ಲ" ಎನ್ನುತ್ತಾರೆ ತುಮಕೂರು ಜಿಲ್ಲೆ, ತೋವಿನಕೆರೆಯ ಕೃಷಿಕರಾದ ಎಚ್ ಜೆ ಪದ್ಮರಾಜು.
ಬರ ಘೋಷಣೆ ಮಾನದಂಡ ಬದಲಾಗಲಿ
ಕಳೆದ ವರ್ಷ ಮಳೆ ಪ್ರಮಾಣ ತುಂಬ ಕಡಿಮೆ ಆಗಿದೆ. ಜತೆಗೆ ಸರಕಾರ ಬರಪೀಡಿತ ಎಂದು ಘೋಷಿಸುವ ವಿಧಾನದಲ್ಲೂ ಒಂದಿಷ್ಟು ಬದಲಾವಣೆ ಮಾಡಬೇಕು. ಎಷ್ಟೋ ಸಲ ತಾಲೂಕು ವ್ಯಾಪ್ತಿಯ ಒಂದೊಂದು ಹೋಬಳಿಯಲ್ಲೊ ಒಂದೊಂದು ರೀತಿ ಮಳೆಯಾಗುತ್ತದೆ. ಒಟ್ಟಾರೆ ತಾಲೂಕಿನ ಲೆಕ್ಕದಲ್ಲಿ ಸರಾಸರಿ ಎಷ್ಟು ಮಳೆಯಾಗಬೇಕೋ ಆಗಿರುತ್ತದೆ. ಆದರೆ ಬರ ಪರಿಸ್ಥಿತಿ ಇರುತ್ತದೆ ಎಂದು ಅವರು ಹೇಳಿದರು.