Breaking: ಬಸವರಾಜ ಹೊರಟ್ಟಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ಜೆಡಿಎಸ್
ಬೆಂಗಳೂರು, ಮೇ 23: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿರುದ್ಧ ಗೆಲುವು ಸಾಧಿಸಲು ಜೆಡಿಎಸ್ ತಂತ್ರ ರೂಪಿಸಿದೆ. ಶ್ರೀಶೈಲ ನಿಂಗಪ್ಪ ಗಡದಿನ್ನಿ ಎಂಬುವರನ್ನು ಹೊರಟ್ಟಿ ವಿರುದ್ಧ ಜೆಡಿಎಸ್ ಕಣಕ್ಕೆ ಇಳಿಸಲು ರಣತಂತ್ರ ರೂಪಿಸಿದೆ.
ಬಸವರಾಜ ಹೊರಟ್ಟಿ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಪಕ್ಷದಿಂದ ಪ್ರತಿನಿಧಿಸುತ್ತಿದ್ದರು. ವಿಧಾನ ಪರಿಷತ್ ಸಭಾಪತಿ ಹುದ್ದೆಯನ್ನು ಸಹ ಅಲಂಕರಿಸಿದ್ದರು. ಜೆಡಿಎಸ್ ನ ನಿಷ್ಠಾವಂತ ನಾಯಕನಾಗಿ ಗುರುತಿಸಿಕೊಂಡಿದ್ದ ಬಸವರಾಜ ಹೊರಟ್ಟಿ ಇತ್ತೀಚೆಗೆ ಇದ್ದಕ್ಕಿದ್ದಂತೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಹೊರಟ್ಟಿ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತದೆಯೋ ಅಥವಾ ತಟಸ್ಥ ನೀತಿ ಅನುಸರಿಸುತ್ತದೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿತ್ತು. ಈಗ ಅಂತಿಮವಾಗಿ ತನ್ನ ಅಭ್ಯರ್ಥಿಯನ್ನು ಜೆಡಿಎಸ್ ಘೋಷಿಸಿದೆ.
ಹೊರಟ್ಟಿ ವಿರುದ್ಧ ಜೆಡಿಎಸ್ ಶ್ರೀಶೈಲ ನಿಂಗಪ್ಪ ಗಡದಿನ್ನಿ ಅವರಿಗೆ ಟಿಕೆಟ್ ಘೋಷಿಸಿದೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ನಿಂಗಪ್ಪ ಗಡದಿನ್ನಿ ಅವರಿಗೆ ಟಿಕೆಟ್ ನೀಡಿರುವುದನ್ನು ಖಚಿತ ಪಡಿಸಿದ್ದಾರೆ. ಪಕ್ಷಾಂತರಗೊಂಡು ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಹೊರಟ್ಟಿ ವಿರುದ್ಧ ಶ್ರೀಶೈಲ ನಿಂಗಪ್ಪ ಅಭ್ಯರ್ಥಿಯಾಗಿದ್ದಾರೆ.