Minister DK Shivakumar: ಬೆಂಗಳೂರು ಬದಲಾವಣೆಗೆ ಮಾಸ್ಟರ್ ಪ್ಲಾನ್ ಶೀಘ್ರ ರೂಪಿಸುತ್ತೇವೆ: ಡಿಕೆ ಶಿವಕುಮಾರ್
ಬೆಂಗಳೂರು, ಮೇ 29: ನಾನು ಗ್ರಾಮೀಣ ಪ್ರದೇಶದಿಂದ ಪ್ರತಿನಿಧಿಸಿದ್ದರು, ಬೆಂಗಳೂರು ನಗರದ ಜತೆಗೆ ಹೆಚ್ಚಿನ ಒಡನಾಟವಿದೆ. ಬೆಂಗಳೂರು ಬದಲಾವಣೆಗೆ ಮಾಸ್ಟರ್ ಪ್ಲಾನ್ ಶೀಘ್ರ ರೂಪಿಸುತ್ತೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸ್ನೇಹಿ ಕಾರ್ಪೋರೇಶನ್ ನಿರ್ಮಾಣ ನಮ್ಮ ಸಂಕಲ್ಪ, ಬೆಂಗಳೂರು ಅಭಿವೃದ್ಧಿ ಆಗಬೇಕು. ಅದಕ್ಕೆ ಶ್ರಮಿಸಬೇಕು. ಮುಂದಿನ ನಾಲ್ಕು ತಿಂಗಳು ಮಳೆಗಾಲದಲ್ಲಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಒಂದೇ ದಿನದಲ್ಲಿ ಎಲ್ಲ ಮಾಡ್ತೀನಿ ಅನ್ನೋ ಭ್ರಮೆ ನನಗಿಲ್ಲ. ಇದಕ್ಕೆ ಸಮಯ ಬೇಕು. ನಾನು ಗ್ರಾಮೀಣ ಪ್ರದೇಶದಿಂದ ಪ್ರತಿನಿಧಿಸಿದ್ದರು, ಬೆಂಗಳೂರು ನಗರದ ಜತೆಗೆ ಹೆಚ್ಚಿನ ಒಡನಾಟವಿದೆ. ಬೆಂಗಳೂರು ಕಟ್ಟಿದ ಕೆಂಪೇಗೌಡರು, ನಂತರ ಕೆಂಗಲ್ ಹನುಮಂತಯ್ಯನವರು ಸೇರಿದಂತೆ ಅನೇಕ ನಾಯಕರು ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇವರು ಕೊಟ್ಟಿರುವ ಬೆಂಗಳೂರನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದರು.
ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. 40-50 ಲಕ್ಷ ಮಂದಿ ಹೊರಗಿನಿಂದ ಬಂದು ಸಂಚಾರ ಮಾಡುತ್ತಿದ್ದಾರೆ. ಇವರೆಲ್ಲರಿಗೂ ನಾವು ಉತ್ತಮ ಸವಲತ್ತು ಒದಗಿಸಬೇಕಾಗಿದೆ. ಕಳೆದ ಎರಡು ದಶಕಗಳಿಂದ ವಿಶ್ವವೇ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಬೆಂಗಳೂರು ಅಭಿವೃದ್ಧಿ ಕುರಿತು ಎಲ್ಲಾ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಬಗ್ಗೆ ಕಾಳಜಿ ಹೊಂದಿರುವ ಇತರೆ ಕ್ಷೇತ್ರದ ಪ್ರಮುಖರ ಜತೆ ಚರ್ಚೆ ಮಾಡುತ್ತೇನೆ. ಅವರ ಸಲಹೆ ಪಡೆಯುತ್ತೇನೆ. ಕೆಲವು ಕಾಮಗಾರಿಗಳಲ್ಲಿ ನಕಲಿ ಬಿಲ್, ಕೆಲವು ಕಾಮಗಾರಿಗಳಲ್ಲಿ ಕೆಲಸ ಮಾಡದೆ ಬಿಲ್ ಪಡೆಯಲಾಗಿದೆ. ಮತ್ತೆ ಕೆಲವು ಕಡೆಗಳಲ್ಲಿ ಎರಡು ಬಿಲ್ ಪಡೆಯಲಾಗಿದೆ. ಎಲ್ಲೆಲ್ಲಿ ಇಂತಹ ಅಕ್ರಮ ಆಗಿದೆ ಎಂದು ನನಗೆ ಮಾಹಿತಿ ಇದೆ. ಆದರೂ ನೀವೇ ತನಿಖೆ ಮಾಡಿ ವರದಿ ನೀಡಿ ಎಂದು ಹೇಳಿದ್ದೇನೆ.

ಸರ್ಕಾರದ ಮೇಲೆ ಬಿಬಿಎಂಪಿ ಹೆಚ್ಚು ಅವಲಂಬನೆ ಆಗದೆ ತಮ್ಮ ಸಂಪನ್ಮೂಲ ತಾವೇ ಸಂಗ್ರಹಿಸಬೇಕು. ಸಂಪನ್ಮೂಲ ಸೋರಿಕೆ ತಡೆದು ಅಭಿವೃದ್ಧಿ ಮಾಡಬೇಕು. ಈ ಹಿಂದೆ ನರ್ಮ್ ಯೋಜನೆ ಮೂಲಕ ಕೇಂದ್ರದಿಂದ ಹಣಕಾಸಿನ ನೆರವು ನೀಡಲಾಗುತ್ತಿತ್ತು. ಆದರೆ ಈಗ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಪಾಲಿಕೆ ಜನಸ್ನೆಹಿಯಾಗಿ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಶೀಘ್ರ ಪಾಲಿಕೆ ಚುನಾವಣೆ ಮಾಡುತ್ತೇವೆ. ಅದಕ್ಕೆ ಸಿದ್ಧವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ತೆರಿಗೆ ಹೆಚ್ಚಳ ಕುರಿತು ಮಾಧ್ಯಮಗಳ ಪ್ರತಿನಿಧಿ ಪ್ರಶ್ನೆಗೆ ಉತ್ತರಿಸಿದ ಅವರು, "ಚುನಾವಣೆಗೂ ಮುನ್ನ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ನಾನು ಖುದ್ದಾಗಿ ಪರಿಶೀಲನೆ ಮಾಡುತ್ತೇನೆ. ಏಕಾಏಕಿ ತೀರ್ಮಾನ ಮಾಡುವುದಿಲ್ಲ. ಬೆಂಗಳೂರು ಅಭಿವೃದ್ಧಿ ಆಗಬೇಕು" ಎಂದು ತಿಳಿಸಿದರು.
ಬಿಬಿಎಂಪಿಯಲ್ಲಿ 40% ಕಮಿಷನ್ ಕುರಿತು ಕೇಳಿದ ಪ್ರಶ್ನೆಗೆ, "ನಾನು ಗುತ್ತಿಗೆದಾರರ ಜತೆ ಚರ್ಚೆ ಮಾಡುತ್ತೇನೆ. ಎಲ್ಲಾ ವರ್ಗದ ಜನರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ" ಎಂದು ತಿಳಿಸಿದರು.
ಪ್ರತಿ ಕೆಲಸ ಮಾಡುವ ಮುನ್ನ ಹಾಗೂ ಕಾಮಗಾರಿ ನಂತರ ಡ್ರೋನ್ ವಿಡಿಯೋ ಆಗಬೇಕು. ಕೇವಲ ಫೋಟೋ ಸಾಲುವುದಿಲ್ಲ. ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಬೇಕು" ಎಂದು ತಿಳಿಸಿದರು.
ಬಿಬಿಎಂಪಿ ವಾರ್ಡ್ ಗಳ ಮರುವಿಂಗಡನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವೆ. ವಾರ್ಡ್ ಮರುವಿಂಗಡನೆ ಪರಿಶೀಲನೆ ಮಾಡುತ್ತೇವೆ" ಎಂದು ತಿಳಿಸಿದರು.












Click it and Unblock the Notifications