ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ?: ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದೇನು?
ಚಿಕ್ಕಮಗಳೂರು,ಜುಲೈ 15: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆಯಲ್ಲಿ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿದೆ ಎನ್ನುವ ವದಂತಿ ಹೆಚ್ಚಾಗಿದ್ದು, ರಾಜ್ಯದಲ್ಲಿ ಮೂರು ಪಕ್ಷಗಳು ಭರ್ಜರಿ ತಯಾರಿಯನ್ನ ನಡೆಸುತ್ತಿವೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜಕೀಯ ಭಿನ್ನಮತಗಳನ್ನ ದೂರವಿಟ್ಟು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡಬೇಕು. ಅನೇಕ ಪಕ್ಷಗಳು ಬೆಂಬಲಿಸುತ್ತಿದ್ದು, ಜೆಡಿಎಸ್ನಿಂದಲೂ ನಾವು ಅಪೇಕ್ಷೆ ಮಾಡುತ್ತೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಆಡಳಿತ ಎಲ್ಲಾರೂ ಮೆಚ್ಚುವಂತದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು. ಇಂದು ಭಾರತಕ್ಕೆ ಎದ್ದುನಿಂತ್ತು ಗೌರವ ನೀಡುತ್ತಿದ್ದಾರೆ ಎಂದರೇ ಅದಕ್ಕೆ ಪ್ರಮುಖ ಕಾರಣ ಪ್ರಧಾನಿ ಮೋದಿ ಅವರೇ. ಹೀಗಾಗಿ ರಾಜಕೀಯ ಭಿನ್ನಮತಗಳನ್ನ ದೂರ ಬಿಟ್ಟು ಬೆಂಬಲ ಕೊಡಬೇಕು. ಇಂತಹ ಅಪೇಕ್ಷೆ ಅನೇಕ ರಾಜಕೀಯ ಪಾರ್ಟಿಯಲ್ಲೂ ಇದೆ. ಈ ಅಪೇಕ್ಷೆಯನ್ನ ಜೆಡಿಎಸ್ನಿಂದಲೂ ನಿರೀಕ್ಷೆ ಮಾಡುತ್ತೇವೆ ಎಂದು ಮೈತ್ರಿ ಕುರಿತು ಸ್ಪಷ್ಟಪಡಿಸಿದರು.
ಇನ್ನೂ ರಾಜ್ಯ ಸರ್ಕಾರದ ಕುರಿತು ತೀವ್ರ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಾದ್ಯಂತ ಕೊಲೆಯಾಗ್ತಿದೆ. ಕಾಂಗ್ರೆಸ್ ನೇತೃತ್ವ, ಕೃಪಾಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಯಾಗುತ್ತಿದೆ. ದಿಗಂಬರ ಸ್ವಾಮಿ ಕೊಲೆ, ಬೆಂಗಳೂರಲ್ಲಿ ಹಾಡಹಗಲೇ ಟೆಕ್ಕಿ ಸತ್ತಿದ್ದಾರೆ. ಉಳ್ಳಾಲದಲ್ಲಿ ನಮ್ಮ ಕಾರ್ಯಕರ್ತನ ಶವ ನೀರಲ್ಲಿ ಸಿಗುತ್ತೆ, ಹನುಮಜಯಂತಿ ಯಶಸ್ವಿಯಾಗಿದ್ದಕ್ಕೆ ವೇಣುಗೋಪಾಲ್ ಕೊಲೆಯಾಗಿದೆ. ಎರಡೇ ತಿಂಗಳಿಗೆ ಸರ್ಕಾರ ನೈತಿಕತೆ ಕಳೆದುಕೊಂಡಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಇತ್ತ ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ರು, ಇವರ ಗ್ಯಾರಂಟಿ ಎಲ್ಲೋದ್ವು, ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿ ಎಂದಿದ್ರಿ. ನಿಮ್ಮ ಮೊದಲ ಕ್ಯಾಬಿನೇಟ್ ಯಾವಾಗ, ಮೊದಲು ಅದನ್ನ ಹೇಳಿ ಎಂದು ಪ್ರಶ್ನಿಸಿದರು.
ವೇಣು ಗೋಪಾಲ್ ಕೇಸ್ ನಲ್ಲಿ ಮೊದಲ ಆರೋಪಿಯನ್ನ ರಕ್ಷಣೆ ಮಾಡಿದ್ದಾರೆ. A4 ಅಪರಾಧಿಯನ್ನ A1 ಮಾಡ್ತಾರೆ, A1 ಅಪರಾಧಿಯನ್ನ ರಕ್ಷಣೆ ಮಾಡ್ತಾರೆ. ಎರಡು ತಿಂಗಳಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಮುನಿಗಳನ್ನ ಹತ್ಯೆ ಮಾಡಿ, ತುಂಡು ತುಂಡು ಮಾಡಿ ಕೊಲೆ ಮಾಡಿದ್ದಾರೆ. ಕೂನಾನು ಸುವ್ಯವಸ್ಥೆಯನ್ನ ಗಟ್ಟಿಗೊಳಿಸುವುದು ಈ ಸರ್ಕಾರಕ್ಕೆ ಗೊತ್ತಿಲ್ಲ. ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. 136 ಸೀಟ್ ಗೆದ್ದಿದ್ದೇವೆಂದು ದರ್ಪದಿಂದಿದ್ದಾರೆ, ಮುಂದೆ ಜನ ಪಾಠ ಕಲಿಸುತ್ತಾರೆ ಎಂದು ಕುಟುಕಿದರು.












Click it and Unblock the Notifications