ನಾಡಪ್ರಭು ಕೆಂಪೇಗೌಡರ ಜಯಂತಿಗೆ ಸರ್ಕಾರಿ ರಜೆ? ಡಿಕೆಶಿ ಮುಂದೆ ಹೊಸ ಬೇಡಿಕೆ!
ಬೆಂಗಳೂರು: ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಅದ್ಧೂರಿ ಜಯಂತಿಯ ಆಚರಣೆಗೆ ಸಜ್ಜಾಗಿದೆ. ಇದೇ ಜೂನ್ 27ರಂದು ಜಯಂತಿ ಪ್ರಯುಕ್ತ ಕೆಂಪೇಗೌಡರ ಹೆಸರಿನಲ್ಲಿ ವಿಶಿಷ್ಟ ಕಾರ್ಯಕ್ರಮಗಳು ಜರುಗಲಿವೆ. ಇಷ್ಟು ಮಾತ್ರವಲ್ಲದೇ ಅಂದು ಸರ್ಕಾರಿ ರಜಾದಿನ ಘೋಷಿಸುವುದು ಸೇರಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಮುಖ ಸಲಹೆಗಳನ್ನು ಸ್ವೀಕರಿಸಿದ್ದಾರೆ.
ಕೆಂಪೇಗೌಡರ ಜಯಂತಿ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ದೇವನಹಳ್ಳಿ ಸಮೀಪ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಥೀಮ್ ಪಾರ್ಕ್ ಸ್ಥಾಪನೆ ಪೂರ್ಣಗೊಂಡಿದೆ. ನಗರದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಬಡಾವಣೆ ನಿರ್ಮಾಣವು ಮುಗಿದಿದೆ. ಇವೆರಡರ ಲೋಕಾರ್ಪಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಳಾಗಿದೆ. ಹೊಸದಾಗಿ ಸಿದ್ಧಗೊಂಡ ಲೇಔಟ್ನಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಕೆಂಪೇಗೌಡರ ಅದ್ಧೂರಿ ದಿನಾಚರಣೆಗಳು ನಡೆಯಲಿವೆ ಡಿಕೆ ಶಿವಕುಮಾರ್ ಹೇಳಿದರು.

ಈ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ, ಕೆಲವರು ಕೆಂಪೇಗೌಡ ಜಯಂತಿ ದಿನ ಸರ್ಕಾರಿ ರಜೆ ಘೋಷಿಸಬೇಕೆಂಬ ಸಲಹೆ ನೀಡಿದ್ದಾರೆ. ಸಲಹೆ ಸ್ವೀಕರಿಸಿದ ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಒಂದು ವೇಳೆ ಜಯಂತಿಯಂದು ಸರ್ಕಾರ ರಜೆ ನೀಡಬೇಕಾದರೆ ಅದನ್ನು ಕೇವಲ ಬೆಂಗಳೂರಿಗೆ ಸೀಮಿತವಾಗಿ ನೀಡಲಾಗುತ್ತಾ? ಅಥವಾ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಜಾರಿ ಮಾಡಲಾಗುತ್ತಾ? ಎಂಬುದು ತಿಳಿಯಬೇಕಿದೆ.
ಕೆಂಪೇಗೌಡರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳು
ಇದರೊಂದಿಗೆ ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಉದ್ಯಾನವನ, ಅಂತಾರಾಷ್ಟ್ರೀಯ ಸಮುದಾಯ ಭವನ, ಕೆಂಪೇಗೌಡರ ವಸ್ತುಸಂಗ್ರಹಾಲಯ, ವಿವಿಧೆಡೆ ಭವನಗಳ ನಿರ್ಮಾಣ, ಕೆಂಪೇಗೌಡರ ಸ್ಮರಣಾರ್ಥ ಬೆಂಗಳೂರಿನಲ್ಲಿ ಕೆರೆಗಳ ಶುದ್ಧೀಕರಣ ಹಾಗೂ ಪುನರುಜ್ಜೀವನ ಸೇರಿದಂತೆ ಕೆಲವು ಸಲಹೆಗಳನ್ನು ಮುಖ್ಯಮಂತ್ರಿಳಿಗೆ ನೀಡಲಾಗಿದೆ.
ಇನ್ನೂ ಹತ್ತು ಎಕ್ರೆಗೂ ಹೆಚ್ಚು ಜಾಗದಲ್ಲಿ ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಪಡಿಸುವುದು. ಶಾಲಾ ಪಠ್ಯದಲ್ಲಿ ಕೆಂಪೇಗೌಡರ ಹೆಸರು ಸೇರಿಸುವುದು ಪ್ರಮುಖ ಸಲಹೆಗಳಾಗಿವೆ. ಸಲಹೆ ಸ್ವೀಕರಿಸಿದ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕೆಂಪೇಗೌಡರ ಥೀಮ್ ಪಾರ್ಕ್ ಅಭಿವೃದ್ಧಿ ಮುಗಿದಿದ್ದು, ಉದ್ಘಾಟನೆಗೆ ಸಚಿವ ಕೃಷ್ಣ ಭೈರೇಗೌಡರ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರಿನ ಸಾಂಸ್ಕೃತಿಕ ಐಕಾನ್ ಕೆಂಪೇಗೌಡರೆಂದು ಘೋಷಣೆ ಮಾಡುವುದು, ಹೊಸ ಬಡಾವಣೆಯಲ್ಲಿ ಅದ್ಧೂರಿ ಜಯಂತ್ಯೋತ್ಸವ ನಡೆಸುವುದಾಗಿ ಅವರು ಹೇಳಿದರು.
ಬಿಡಿಎ ವತಿಯಿಂದ 15 ಲಕ್ಷ ಗಿಡ ನೆಡುವ ಕಾರ್ಯಕ್ರಮ
ಕೆಂಪೇಗೌಡರ ಜಯಂತಿ ಪ್ರಯುಕ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಅಧ್ಯಕ್ಷರಾದ ಹ್ಯಾರೀಸ್ ಅವರ ನೇತೃತ್ವದಲ್ಲಿ ನಗರದಲ್ಲಿ 15 ಲಕ್ಷ ಗಿಡಗಳನ್ನು ನೆಡಲಾಗುವುದು. ಈ ಬಡಾವಣೆಯಲ್ಲಿ ನೂತನ ರಸ್ತೆಯನ್ನು ಉದ್ಘಾಟಿಸಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಅದ್ಧೂರಿ ಕಾರ್ಯಕ್ರಮ ಹೇಗಿರುತ್ತೆ ಗೊತ್ತಾ?
ಕಾರ್ಯಕ್ರಮದ ರೂಪುರೇಷೆ ಬಗ್ಗೆ ಎಲ್ಲಾ ಸಂಘಟನೆಗಳ ಜತೆ ಚರ್ಚೆ ಮಾಡಲಾಗಿದೆ. ಪ್ರತಿ ಬಾರಿಯಂತೆ ನಗರದ ನಾಲ್ಕು ಕೆಂಪೇಗೌಡ ಗೋಪುರಗಳಿಂದ ಪ್ರತ್ಯೇಕ ತಂಡಗಳು ಆಗಮಿಸಲಿವೆ. ನಾಲ್ಕು ಗೋಪುರಗಳ ಪೈಕಿ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ ಜಾರ್ಜ್ ಹಾಗೂ ಬೈರತಿ ಸುರೇಶ್ ಅವರು ಜವಾಬ್ದಾರಿ ವಹಿಸಲಿದ್ದಾರೆ. ಇನ್ನು ಮಾಗಡಿ ತಂಡವನ್ನು ಸ್ಥಳೀಯ ಶಾಸಕರಾದ ಬಾಲಕೃಷ್ಣ, ಹುಲಿಯೂರು ದುರ್ಗ ಕಡೆಯಿಂದ ರಂಗನಾಥ್ ಅವರು ಮುನ್ನಡೆಸಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಾರ್ಯಕ್ರಮವನ್ನು ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರಿಂದ ನಡೆಸಲಾಗುವುದು. ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ತಯಾರಿ ಮಾಡಲಾಗುವುದು ಎಂದು ತಿಳಿಸಿದರು.
369 ವಾರ್ಡ್ಗಳಿಗೆ ತಲಾ 1 ಲಕ್ಷ ರೂ ಅನುದಾನ
"ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ನಿರ್ಮಿಸಲು ತೀರ್ಮಾನಿಸಲಾಗಿತ್ತು. ಅದರ ಸಿದ್ಧತೆ ನಡೆಸಲಾಗುತ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಜಯಂತಿ ಆಚರಿಸಲಾಗುವುದು. ಇದಕ್ಕಾಗಿ 1 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬೇರೊಂದು ದಿನ ಬೆಂಗಳೂರಿನ 369 ವಾರ್ಡ್ ಗಳಲ್ಲಿ ಈ ಕಾರ್ಯಕ್ರಮ ನಡೆಸಲು ಜಿಬಿಎ ವತಿಯಿಂದ ತಲಾ 1 ಲಕ್ಷ ಅನುದಾನ ನೀಡಲಾಗುವುದು. ಈ ಕಾರ್ಯಕ್ರಮದ ದಿನಾಂಕವನ್ನು ಬೆಂಗಳೂರು ನಗರದ ಸಚಿವರು ತೀರ್ಮಾನ ಮಾಡಲಿದ್ದಾರೆ ಎಂದರು.













Click it and Unblock the Notifications