ಕುಮಾರಸ್ವಾಮಿಗೆ ಪ್ರಮಾಣ ವಚನಕ್ಕೆ ಶುಭಕೋರಿದ ಶಿವಸೇನೆ
ಮುಂಬೈ, ಮೇ 23: ಮಹಾರಾಷ್ಟ್ರ ಬಿಜೆಪಿ ಸರಕಾರದಲ್ಲಿ ಮಿತ್ರ ಪಕ್ಷವಾಗಿರುವ ಶಿವಸೇನೆ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಶುಭಕೋರಿದೆ.
ಇಂದಿನ ಪ್ರಮಾಣ ವಚನ "ಕಾರ್ಯಕ್ರಮಕ್ಕೆ ಶಿವಸೇನೆಗೂ ಆಹ್ವಾನ ಬಂದಿದೆ. ಉದ್ಧವ್ ಠಾಕ್ರೆಯವರನ್ನು ಎಚ್.ಡಿ. ದೇವೇಗೌಡರು ಆಹ್ವಾನಿಸಿದ್ದಾರೆ. ನಮ್ಮಲ್ಲಿ ಯಾರಾದರೂ ಕಾರ್ಯಕ್ರಮಕ್ಕೆ ಬಂದೇ ಬರುತ್ತಾರೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ನಾವೆಲ್ಲಾ ಫಲ್ಗರ್ ಲೋಕಸಭಾ ಉಪ ಚುನಾವಣೆಯ ಕೆಲಸದಲ್ಲಿ ನಿರತರಾಗಿದ್ದೇವೆ. ಹೀಗಾಗಿ ನಾವು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಆದರೆ ನಮ್ಮ ಶುಭ ಹಾರೈಕೆ ಯಾವತ್ತೂ ಅವರ ಜೊತೆಗಿರುತ್ತದೆ," ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದರು.
ಇಂದು ಸಂಜೆ 4.30ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಎಚ್.ಡಿ. ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಬಿಜೆಪಿಯೇತರ ಪ್ರಬಲ ಪ್ರಾದೇಶಿಕ ಪಕ್ಷಗಳ ನಾಯಕರು ಮತ್ತು ಕಾಂಗ್ರೆಸ್ ನಾಯಕರು ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಿನ್ನೆಯೇ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಶುಭ ಕೋರಿದ್ದು ಇಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.
ಇನ್ನು ತೂತುಕುಡಿ ಗೋಲಿಬಾರ್ ಹಿನ್ನೆಲೆಯಲ್ಲಿ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಕೂಡ ಇಂದಿನ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಇದೀಗ ಶಿವಸೇನೆಯೂ ಪದಗ್ರಹಣದಿಂದ ದೂರ ಉಳಿದಿದೆ.












Click it and Unblock the Notifications