ಕುಮಾರಸ್ವಾಮಿ - ಸಿದ್ದರಾಮಯ್ಯ ಬೆಂಕಿ ಬಿರುಗಾಳಿ: ಸಿದ್ದುಗೆ ಎಚ್ಡಿಕೆ ಹಾಕಿದ ಓಪನ್ ಚಾಲೆಂಜ್
ಬೆಂಗಳೂರು, ಸೆ 24: " ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿ ಸಿಎಂ ಆಗಿ ಮಜಾ ಮಾಡಿದ್ದು ನನಗೆ ಗೊತ್ತಿಲ್ವಾ" ಇದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಮಾಡಿದ ಆರೋಪ.
" ಕುಮಾರಸ್ವಾಮಿಗೆ ಸ್ವಂತ ಬಲದಿಂದ ಸಿಎಂ ಆಗಲು ಸಾಧ್ಯವೇ? ಯೂಸ್ ಮಾಡಿ ಬಿಸಾಕೋ ಬುದ್ದಿ ಕುಮಾರಸ್ವಾಮಿ ಬೇಗ ಕಲಿತುಕೊಂಡರು" ಅನ್ನೋ ಸಿದ್ದರಾಮಯ್ಯ ಟ್ವೀಟ್ ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡುತ್ತಿದ್ದರು.
ಸಿದ್ದರಾಮಯ್ಯರಿಂದ ನಾನೇನು ಬೆಳೆದಿಲ್ಲ
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, " ನಾನು ಸಿಎಂ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ಬಾರಿ ಬಿಜೆಪಿ ಮತ್ತೊಂದು ಬಾರಿ ಕಾಂಗ್ರೆಸ್ ಹೈಕಮಾಂಡ್ ನಿಂದ ಸಿಎಂ ಆಗಿದ್ದೆ" ಎಂದು ಹೇಳಿದರು.
" ನಾನು ನನ್ನ ಸ್ವಂತ ಬಲದಿಂದ ಸಿಎಂ ಆಗಿದ್ದೆ ಅಂತ ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಬೆಂಬಲದಿಂದ ನಾನು ಸಿಎಂ ಅಂತೂ ಆಗಿಲ್ಲ.ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಸಿಎಂ ಮಾಡಿತ್ತು. ನಾನು ಸಿದ್ದರಾಮಯ್ಯನವರಿಗೆ ಚಾಲೆಂಜ್ ಒಂದನ್ನು ಮಾಡುತ್ತೇನೆ" ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಸವಾಲನ್ನು ಎಸೆದಿದ್ದಾರೆ.
ಸಿದ್ದರಾಮಯ್ಯ ಬೇಸ್ತು ಬೀಳುವಂತೆ ಮಾಡಿದ ಕುಮಾರಸ್ವಾಮಿ ಆರೋಪ
ಸಿದ್ದರಾಮಯ್ಯಗೆ ಕುಮಾರಸ್ವಾಮಿ ಹಾಕಿದ ಗುರುತರ ಸವಾಲು
" ಕಾಂಗ್ರೆಸ್ ಪಕ್ಷ ಬಿಟ್ಟು ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಲಿ ನೋಡೋಣ" ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿರುವ ಕುಮಾರಸ್ವಾಮಿ, " ಕಾಂಗ್ರೆಸ್ ಶಕ್ತಿಧಾರೆ ಎರೆಸಿಕೊಂಡು ಸಿದ್ದರಾಮಯ್ಯ ಸಿಎಂ ಆದರು. ಮೂಲ ಕಾಂಗ್ರೆಸ್ಸಿಗರನ್ನು ತುಳಿದು ಸಿದ್ದರಾಮಯ್ಯ ಸಿಎಂ ಆಗಿದ್ದು ಎನ್ನುವುದು ನನಗೆ ಗೊತ್ತಿಲ್ಲವೇ" ಎಂದು ಎಚ್ಡಿಕೆ ಪ್ರಶ್ನಿಸಿದ್ದಾರೆ.
ಬಿ ವೈ ವಿಜಯೇಂದ್ರ ಅವರೊಬ್ಬ ಮಹಾನ್ ನಾಯಕರಲ್ಲವೇ
" ಸಿದ್ದರಾಮಯ್ಯ ನೆರಳಲ್ಲಿ ನಾನು ರಾಜಕೀಯ ಮಾಡಿಲ್ಲ. ನನ್ನ ಮನೆ ದುಡ್ಡು ಹಾಕಿ ರಾಜಕೀಯ ಮಾಡಿದ್ದೇನೆ. ನನ್ನ ಸಿನಿಮಾ ಹಣ ತಂದು ರಾಜಕಾರಣಕ್ಕೆ ಹಾಕಿದ್ದೇನೆ. ಕಾಂಗ್ರೆಸ್ಸಿನವರು ನನ್ನನ್ನು ಬಳಸಿಕೊಂಡು ಬಿಸಾಕಿದರು". ಇನ್ನು ಬಿ ವೈ ವಿಜಯೇಂದ್ರ ಅವರ ಟ್ವೀಟ್ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರೊಬ್ಬ ಮಹಾನ್ ನಾಯಕರಲ್ಲವೇ" - ಕುಮಾರಸ್ವಾಮಿ.
ರೈತರಿಗೋಸ್ಕರ ನಾನು ಸಿಎಂ ಆಗಿದ್ದೆ. ನನಗೋಸ್ಕರ ನಾನು ಸಿಎಂ ಆಗಿ ಇರಲಿ
" ನನ್ನ ಮನೆ ಬಾಗಿಲಿಗೆ ಬಂದಿದ್ದು ಕಾಂಗ್ರೆಸ್ಸಿನವರು. ನಾನೇನು ಅವರ ಮನೆ ಬಾಗಿಲಿಗೆ ಹೋಗಿಲ್ಲ.ಸಾಲಮನ್ನಾ ಮಾತು ಉಳಿಸಿಕೊಳ್ಳಲು ನಾನು ಸರಕಾರ ಮಾಡಿದೆ. ರೈತರಿಗೋಸ್ಕರ ನಾನು ಸಿಎಂ ಆಗಿದ್ದೆ. ನನಗೋಸ್ಕರ ನಾನು ಸಿಎಂ ಆಗಿ ಇರಲಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.
ಸಿನಿಮಾ ದುಡ್ಡು ತಂದು ಅವತ್ತು ಸಿದ್ದರಾಮಯ್ಯಗಾಗಿ ಹಾಕಿದೆ
" ಸಿದ್ದರಾಮಯ್ಯ ಅವರಿಂದ ನನಗೇನು ಲಾಭ ಆಗಿಲ್ಲ. ಅವರು ಜೆಡಿಎಸ್ ಅಧ್ಯಕ್ಷರಾಗಿದ್ದಾಗ ನನ್ನ ಮನೆ ದುಡ್ಡು ಸಿದ್ದರಾಮಯ್ಯಗೆ ಹಾಕಿದೆ. ಅವರ ಪರ ಬ್ಯಾನರ್ ಹಾಕಿದವನು ನಾನು. ನನ್ನ ಸಿನಿಮಾ ದುಡ್ಡು ತಂದು ಅವತ್ತು ಸಿದ್ದರಾಮಯ್ಯಗಾಗಿ ಹಾಕಿದೆ. ಅದು ದೇವೇಗೌಡರ ದುಡ್ಡು ಅಲ್ಲ" ಕುಮಾರಸ್ವಾಮಿ.
ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತೇವೆ
" ಗುರುವಾರ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತೇವೆ. ಪಾರ್ಲಿಮೆಂಟರಿ ಬೋರ್ಡ್ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಅಭ್ಯರ್ಥಿ ಅಂತಿಮ ಮಾಡುತ್ತೇವೆ. ಈಗಾಗಲೇ ಯಶವಂತಪುರ, ಮಹಾಲಕ್ಷ್ಮಿ, ಚಿಕ್ಕಬಳ್ಳಾಪುರ ಮುಖಂಡರ ಸಭೆ ಮಾಡಿದ್ದೇವೆ " ಎಂದು ಕುಮಾರಸ್ವಾಮಿ ಹೇಳಿದರು.