Voter Data Theft: ಕಾಂಗ್ರೆಸ್ನವರದ್ದೇ ಕೈವಾಡ ಎಂದ ಸಚಿವ!
ಬೆಂಗಳೂರು, ನ. 21: ಮತದಾರರ ಮಾಹಿತಿ ಕಳ್ಳತನ ಹಗರಣದಲ್ಲಿ ಕಾಂಗ್ರೆಸ್ನವರದೇ ಕೈವಾಡ ಇರುತ್ತದೆ, ಎಂಬುದು ನನಗೆ ಗೊತ್ತು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಆರೋಪಿಸಿದ್ದಾರೆ.
"ಮಾಗಡಿ ಖಾಸಗಿ ಏಜನ್ಸಿ ಮುಖಾಂತರ ಮತರದಾರರ ಮಾಹಿತಿ ಕಲೆಹಾಕಿರುವ ವಿಚಾರದಲ್ಲಿ ಈಗಾಗಲೇ ಎಲ್ಲದಕ್ಕೂ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೇನೆ. ಪೋಲಿಸರು ತನಿಖೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ತನಿಖೆ ಮಾಡ್ತಿಲ್ಲ. ಅದರೆ, ಪ್ರತಿದಿನ ಇವರೇ ಇನ್ವಿಷ್ಟೇಗಷನ್ ಮಾಡೋ ರೀತಿ ಬಿಲ್ಡಪ್ ಕೊಡ್ತಾ ಇದ್ದಾರಲ್ಲ, ಎಲ್ಲಿಂದ ಇವರಿಗೆ ಮಾಹಿತಿ ಸಿಕ್ಕಿದೆ?" ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಿದ್ದಾರೆ.
Voter Data Theft: ಚಿಲುಮೆ ಮುಖ್ಯಸ್ಥ ರವಿಕುಮಾರ್ ಬಂಧನ
"ಬಹಳ ಸ್ಪಷ್ಟವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಸೇರಿದಂತೆ ಈಗಾಗಲೇ ನಮ್ಮ ಪಕ್ಷದ ಎಲ್ಲರೂ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ನವರು ದಿವಾಳಿಯಾಗಿದ್ದಾರೆ. ಅವರಿಗೆ ಏನು ಹೇಳೋಕೆ ಇಲ್ಲ. ಬಾಯಿಗೆ ಬಂದ ಹಾಗೆ, ತಲೆಗೆ ಬಂದಹಾಗೆ ಮಾತಾಡೋದು ಬಿಡಬೇಕು. ಅವರ ಕಾಲದಲ್ಲಿ ಏನೆಲ್ಲಾ ಕರ್ಮಕಾಂಡಗಳನ್ನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ" ಎಂದರು.
ಹಗರಣದಲ್ಲಿ ಕಾಂಗ್ರೆಸ್ ಕೈವಾಡವಿದೆ: ಆರೋಪ
"ಪ್ರಕರಣದಲ್ಲಿ ಪೋಲಿಸರು ಮುಕ್ತವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಯಾರು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಹಗರಣದಲ್ಲಿ ಕಾಂಗ್ರೆಸ್ ನವರದ್ದೇ ಕೈವಾಡ ಇರುತ್ತದೆ, ನನಗೆ ಗೊತ್ತು" ಎಂದು ಆರೋಪಿಸಿದ್ದಾರೆ.
ಇತ್ತ, ಮತದಾರರ ಪಟ್ಟಿ ಹಗರಣದಲ್ಲಿ ಚಿಲುಮೆ ಟ್ರಸ್ಟ್ನ ಸಂಸ್ಥಾಪಕ ನಿರ್ದೇಶಕ ಕೆ. ರವಿಕುಮಾರ್ರನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯ ವಿಶೇಷ ತಂಡ ಭಾನುವಾರ ಬಂಧಿಸಿದೆ. ಇವರ ಜೊತೆಗೆ ಪ್ರಕರಣದಲ್ಲಿ ಇನ್ನೂ ಐವರನ್ನು ಬಂಧಿಸಲಾಗಿದೆ.
ಮತದಾರರ ಗುರುತಿನ ಚೀಟಿ ಕದ್ದವರು ಡಿಕೆ ಶಿವಕುಮಾರ್
"ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಕಾನೂನು ಉಲ್ಲಂಘನೆ ಮಾಡಿದರೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಾಗುತ್ತದೆ. ಅವರು ಜೈಲಿಗೆ ಹೋಗಿ ಬಂದಿರುದಕ್ಕೆಲ್ಲಾ ನಾವು ಹೊಣೆ ಯಾಗಬೇಕೆ?. ಮುಂದೆ ಕೂಡ ಡಿ. ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ. ತಪ್ಪು ಮಾಡಿದವರೆಲ್ಲಾ ಈ ರೀತಿ ಜೈಲಿಗೆ ಹೋಗುತ್ತಿರುತ್ತಾರೆ. ಇದು ಭವಿಷ್ಯ ಅಲ್ಲ, ಅವರು ಜೈಲಿಗೆ ಹೋಗಿ ಬಂದಿದ್ದಾರೆ ಅಲ್ವ, ಮತ್ತೆ ಹೋಗುತ್ತಾರೆ" ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ.
"ಕಾನೂನು ಬಾಹಿರ ಚಟುವಟಿಕೆ ಮಾಡಿ ಅಕ್ರಮವಾಗಿ ಸಂಪಾದನೆ ಮಾಡಿದವರು ಜೈಲಿಗೆ ಹೋಗುತ್ತಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು ಡಿ. ಕೆ. ಶಿವಕುಮಾರ್ ಅಕ್ರಮ ಮಾಡಿ ಮತದಾರರ ಗುರುತಿನ ಚೀಟಿ ಕದ್ದವರು. ಪಾತಕ ಲೋಕದ ಕೊತ್ವಾಲ್ ನಂತವರ ಹಿನ್ನಲೆ ನಾನು ಇಟ್ಟುಕೊಂಡಿಲ್ಲ. ಇವರ ಹಿನ್ನಲೆ ನೋಡಿದರೆ ಕಾಡು, ಬೆಟ್ಟ, ನಾಡು ನುಂಗಿ ಸಿಕ್ಕಿದನ್ನು ಕಬಳಿಸಿಕೊಂಡಿದ್ದಾರೆ. ಡಿಕೆಶಿ ಜೇಬು ಕಳ್ಳರಿದ್ದ ಹಾಗೆ ಇಂತಹವರು ಮೌಲ್ಯಗಳ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ?" ಎಂದು ಕಿಡಿಕಾರಿದ್ದಾರೆ.
ಸ್ವಾರ್ಥಕ್ಕಾಗಿ ನಾನು ರಾಜಕಾರಣಕ್ಕೆ ಬಂದಿಲ್ಲ: ಅಶ್ವಥ್ ನಾರಾಯಣ
"ಮತದಾರರ ಮಾಹಿತಿ ಕಳ್ಳತನ ವಿಚಾರಕ್ಕೆ ಚುನಾವಣೆ ಆಯೋಗ ಕ್ರಮಕೈಗೊಳ್ಳುತ್ತದೆ. ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗುತ್ತದೆ. ನಮ್ಮ ಸರ್ಕಾರದಲ್ಲಿ ತನಿಖೆ ಮಾಡಿದ ರೀತಿ ಇವರು ತನಿಖೆ ಮಾಡುತ್ತಾರೆಯೇ. ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿರುವ ಅಕ್ರಮಗಳನ್ನು ನೋಡಿದರೆ ಇವರಲ್ಲಾ ಜೈಲಿನಲ್ಲಿ ಇರಬೇಕಿತ್ತು. ಡಿಕೆಶಿ ಹಾಗೂ ಸಿದ್ದರಾಮಯ್ಯ ಎಲ್ಲರೂ ಪರ್ಮನೆಂಟ್ ಆಗಿ ಜೈಲಿನಲ್ಲಿ ಇರಬೇಕಿತ್ತು. ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡು ಬಂದವರು ಕಾಂಗ್ರೆಸ್ ಪಕ್ಷದವರು" ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು, "ನಾನು ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ. ಇಂತಹ ಭ್ರಷ್ಟಾಚಾರಿಗಳಿಗೆ ನಾನು ಸಿಂಹಸ್ವಪ್ನ ಆಗಿದ್ದೇನೆ" ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.
ಕಾನೂನಿನಲ್ಲಿ ಅವಕಾಶವಿರುವ ರೀತಿ ನಡೆಯುತ್ತೇವೆ
ದಲಿತರಿಗೆ ಮೀಸಲಿಟ್ಟ ಹಣ ದುರುಪಯೋಗವಾಗಿದೆ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, "ಇವರು ದಲಿತರ ಬಗ್ಗೆ ಮಾತಾನಾಡುತ್ತಾರೆಯೇ?. ಇವರಿಗೆ ದಲಿತರ ಬಗ್ಗೆ ಏನು ಕಾಳಜಿ ಇದೆ ಇವರಿಗೆ ಕೇವಲ ಕುಟುಂಬದ ಬಗ್ಗೆ ಮಾತ್ರ ಕಾಳಜಿ ಇರುವಂತಹುದು. ಕೇವಲ ಭ್ರಷ್ಟಾಚಾರ ಮಾಡುವುದು ಮಾತ್ರ ಸಿದ್ದರಾಮಯ್ಯ ಅವರಿಗೆ ಕಾಣುತ್ತದೆ. ಇಲ್ಲಿ ಏನೂ ಮುಚ್ಚಿಡಲಿಕ್ಕೆ ಸಾಧ್ಯವಿಲ್ಲ. ಕಾನೂನಿನಲ್ಲಿ ಏನು ಅವಕಾಶ ಇದೆ ಅದೇ ರೀತಿ ನಡೆಯುತ್ತೇವೆ. ಕಾನೂನು ಉಲ್ಲಂಘನೆ ಮಾಡುವುದು ಯಾರು ಅಂದರೆ ಅದು ಕಾಂಗ್ರೆಸ್ ಪಕ್ಷವರು" ಎಂದರು.