ದೇವಪ್ರಶ್ನೆಯ ಮೂಲಕ ಸ್ವಾಮಿಯ ಒಪ್ಪಿಗೆ: ಧರ್ಮಸ್ಥಳ ದೇವಾಲಯದ ಪ್ರಕಟಣೆ
ಮಂಗಳೂರು, ಏಪ್ರಿಲ್ 11: ಸೌರಮಾನ ಯುಗಾದಿಯ ವೇಳೆ, ಧರ್ಮಸ್ಥಳದಲ್ಲಿ ನಡೆಯುವ ವಿಷು ಮಾಸದ ಜಾತ್ರೆಯನ್ನು ರದ್ದು ಪಡಿಸಲಾಗಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
ಈ ಸಂಬಂಧ ಹೊರಡಿಸಿರುವ ಪ್ರಕಟಣೆಯಲ್ಲಿ ಹೀಗಿದೆ, "ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕವಾಗಿ ನಡೆಯುವ ವಿಷು ಮಾಸದ ಜಾತ್ರೆಯನ್ನು ದೇವಪ್ರಶ್ನೆಯ ಮೂಲಕ ಪರಿಶೀಲಿಸಲಾಗಿ, ಸಾಂಪ್ರದಾಯಿಕವಾಗಿ ನಡೆಯುವ ಶ್ರೀಧರ್ಮ ದೇವತೆಗಳ, ಶ್ರೀ ಅಣ್ಣಪ್ಪಸ್ವಾಮಿಯ ನೇಮ-ಕೋಲಗಳು, ಮುಂದೆ ಐದು ದಿನಗಳ ಕಾಲ ನಡೆಯಬೇಕಾಗಿದ್ದ ಶ್ರೀ.ಮಂಜುನಾಥಸ್ವಾಮಿಯ ರಥೋತ್ಸವ, ವಿವಿಧ ಕಟ್ಟೆಗಳಿಗೆ ವಿಹಾರ ಇತ್ಯಾದಿಗಳ ಜೊತೆಗೆ, ನೇತ್ರಾವತಿ ನದಿಗೆ ಅವಭೃತ ವಿಹಾರ ಮಾಡುವುದನ್ನು ರದ್ದುಪಡಿಸಲಾಗಿದೆ".
"ಈ ಸಂದರ್ಭದಲ್ಲಿ ಸದ್ಯಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಕ್ಷೇತ್ರಕ್ಕೆ ಬರುತ್ತಿಲ್ಲ. ಮುಂದೆ ಕೂಡಾ ಪ್ರವೇಶ, ದರ್ಶನವನ್ನು ಮುಂದಿನ ಸೂಚನೆಯ ತನಕ ರದ್ದುಪಡಿಸಲಾಗಿದೆ".

"ಈ ಎಲ್ಲವೂ ದೇವಪ್ರಶ್ನೆಯ ಮೂಲಕ ಶ್ರೀಸ್ವಾಮಿಯ ಒಪ್ಪಿಗೆ ಪಡೆದು ಪರಿವರ್ತನೆಗೊಂಡಿರುವುದರಿಂದ ಭಕ್ತರು ಯಾವುದೇ ಸಂಕೋಚ ಪಡಬೇಕಾಗಿಲ್ಲ".
ಈ ಸಂದರ್ಭದಲ್ಲಿ ಕೊರೊನಾ ಸೋಂಕು ರೋಗ ಮುಕ್ತಿಗಾಗಿ ಪ್ರಾರ್ಥನೆ ಮಾಡುತ್ತಾ ದೈವ ದೇವರುಗಳು ಈ ರೀತಿಯ ಪರಿವರ್ತನೆಗೆ, ಬದಲಾವಣೆಗಳಿಗೆ ಮತ್ತು ಸಾಂಕೇತಿಕ ಸೇವೆಗಳಿಗೆ ಒಪ್ಪಿ ಅನುಗ್ರಹಿಸಿರುವುದನ್ನು ಪರಿಗಣಿಸಿ ಶ್ರೀಕ್ಷೇತ್ರದ ಭಕ್ತರು, ಅಭಿಮಾನಿಗಳು ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು".
"ಮುಂದಿನ ದಿನಗಳ ಸುಭೀಕ್ಷೆಗಾಗಿ ಸರಕಾರದ ಈ ಆದೇಶಗಳನ್ನು ಪರಿಪಾಲಿಸುತ್ತಾ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ". ಇದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೊರಡಿಸಿರುವ ಪ್ರಕಟಣೆ.












Click it and Unblock the Notifications