ಮಂಡ್ಯದ ಗ್ರಾಪಂ ಸದಸ್ಯರಿಗೆ ಗ್ರಾಮಸ್ಥರು ದಿಗ್ಭಂಧನ ಹಾಕಿದ್ಯಾಕೆ?
ಮಂಡ್ಯ,ಮಾರ್ಚ್,02: ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ವಂಚನೆ ಮಾಡುತ್ತಿದ್ದ ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಮಳವಳ್ಳಿಯ ಚಿಕ್ಕಮುಲುಗೂಡು ಗ್ರಾಮಸ್ಥರು ಗ್ರಾಪಂಗೆ ಬೀಗ ಜಡಿದು, ಟೈರ್ ಗಳಿಗೆ ಬೆಂಕಿ ಹಚ್ಚಿ ಅಧಿಕಾರಿ, ಸಿಬ್ಬಂದಿಗೆ ದಿಗ್ಬಂಧನ ಹಾಕಿದ್ದಾರೆ.
ಮಳವಳ್ಳಿ ಗ್ರಾಮಪಂಚಾಯಿತಿಯು ಶೌಚಾಲಯ ನಿರ್ಮಿಸಿಕೊಂಡಿದ್ದ ಮಂದಿಗೆ 5 ಲಕ್ಷ ರೂ.ಗೂ ಹೆಚ್ಚು ಹಣವನ್ನು ಪಾವತಿಸಬೇಕಾಗಿದೆ. ಸರ್ಕಾರದಿಂದ ಬಿಡುಗಡೆಯಾಗಿದ್ದ ಹಣವನ್ನು ಅಧಿಕಾರಿಗಳು ಹಾಗೂ ಹಿಂದಿನ ಗ್ರಾಪಂ ಅಧ್ಯಕ್ಷರು ತಮ್ಮ ಸಂಬಂಧಿಕರ ಹೆಸರಿನ ಖಾತೆಗೆ ಜಮಾ ಮಾಡಿಕೊಂಡು ಜನರನ್ನು ವಂಚಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.[ಮಂಡ್ಯ ಜಿಲ್ಲೆಯಲ್ಲಿ 1 ಲಕ್ಷ ಶೌಚಾಲಯ ನಿರ್ಮಾಣ]
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ಪಿಡಿಒ, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಹಲವರ ವಿರುದ್ಧ ಈಗಾಗಲೇ ಕೇಸು ದಾಖಲಾಗಿದೆ. ಆದರೂ ಯಾರನ್ನೂ ಬಂಧಿಸಿಲ್ಲ ಹಾಗೂ ಫಲಾನುಭವಿಗಳಿಗೆ ಹಣ ವಿತರಿಸುವ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.[ಮಂಡ್ಯ ಕಾಲೇಜು ವಿದ್ಯಾರ್ಥಿನಿಯ ಪ್ರಾಣಕ್ಕೆ ಕುತ್ತು ತಂದ ಹೊಟ್ಟೆನೋವು]
ಈ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೂಡಿ ಹಾಕಿ, ಕಚೇರಿಗೆ ಬೀಗ ಜಡಿದರು. ಮಳವಳ್ಳಿ, ಹಿಟ್ಟನಹಳ್ಳಿ, ಮಂಡ್ಯ ಮಾರ್ಗದ ಮುಖ್ಯ ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿ ರಸ್ತೆ ಬಂದ್ ಮಾಡಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕಿರುಗಾವಲು ಪೊಲೀಸರು ಜನರನ್ನು ಸಮಾಧಾನಗೊಳಿಸಿ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.