ಕಾಂಗ್ರೆಸ್ ಮುಖಂಡರನ್ನು ಬಚಾವ್ ಮಾಡಲು ನಾನ್ಯಾಕೆ 150 ಕೋಟಿ ಆಫರ್ ಮಾಡಲಿ: ಬಿ ವೈ ವಿಜಯೇಂದ್ರ

ಬೆಂಗಳೂರು, ಡಿಸೆಂಬರ್‌ 15: ಬಿಜೆಪಿ ಸರಕಾರ ಇದ್ದಾಗ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ವರ್ ಮಾಣಿಪ್ಪಾಡಿ ಅವರ ವಕ್ಫ್ ಕುರಿತ ವರದಿಯಲ್ಲಿ ಕಾಂಗ್ರೆಸ್ ಮುಖಂಡರ ಅವ್ಯವಹಾರದ ವಿವರ ಇತ್ತು. ಕಾಂಗ್ರೆಸ್ ಮುಖಂಡರನ್ನು ಬಚಾವ್ ಮಾಡಲು ನಾನು 150 ಕೋಟಿ ಯಾಕೆ ಆಫರ್ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಮುಖ್ಯಮಂತ್ರಿಗಳ ಮಗನಾಗಿ ನಾನ್ಯಾಕೆ ಅನ್ವರ್ ಮಾಣಿಪ್ಪಾಡಿ ಅವರ ಮನೆಗೆ ಹೋಗಲಿ? ಇದನ್ನು ಮುಂದಿಟ್ಟು ಸದನದ ಸಮಯ ವ್ಯರ್ಥ ಮಾಡುವುದಾದರೆ ಅದು ಮೂರ್ಖತನದ ಪರಮಾವಧಿ ಎಂದು ಬಿ ವೈ ವಿಜಯೇಂದ್ರ ಅವರು ಹೇಳಿದರು.

Vijayendra Questioned Why I Should Offer 150 Crores To Save Congress Leaders

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷದ ಸಮೀಪ ಬಂದಿದೆ. ಎರಡು ವರ್ಷ ತಲೆ ಕೆಡಿಸಿಕೊಂಡಿಲ್ಲ. ಈಗ ಕೋವಿಡ್ ಕುರಿತಂತೆ ಮಧ್ಯಂತರ ವರದಿ ತೆಗೆದುಕೊಂಡು ಅದರ ಆಧಾರದಲ್ಲಿ ಎಫ್‍ಐಆರ್ ದಾಖಲಿಸಿ, ಅದನ್ನು ಅಧಿವೇಶನದಲ್ಲಿ ಚರ್ಚಿಸಲು ಸರಕಾರ ಬಯಸುತ್ತಿದೆ ಎಂದರೆ, ಸದನವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ನಾಳೆ ಅಧಿವೇಶನದಲ್ಲಿ ಮುನಿರತ್ನ, ಯಡಿಯೂರಪ್ಪ ಅವರ ವಿಚಾರವಾಗಿ, ಕೋವಿಡ್ ಕುರಿತಂತೆ ಚರ್ಚಿಸಬೇಕೆಂದು ಚಿಂತಿಸುತ್ತಿರುವ ಬಗ್ಗೆ ಪತ್ರಿಕಾವರದಿ ಬಂದಿದೆ. ಕೋವಿಡ್ ಸಂಬಂಧ ಮೈಕೆಲ್ ಡಿಕುನ್ಹ ಅವರ ಮಧ್ಯಂತರ ವರದಿ ತರಿಸಲು ಏನು ಆತುರವಿತ್ತು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರವು ಬೆಳಗಾವಿ ಚಳಿಗಾಲದ ಅಧಿವೇಶನದ ಸಮಯವನ್ನು ಸಂಪೂರ್ಣವಾಗಿ ವ್ಯರ್ಥ ಮಾಡುತ್ತಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರಕಾರ ತಯಾರಿಲ್ಲ ಎಂದು ಟೀಕಿಸಿದರು.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ. ಬಾಣಂತಿಯರು, ಶಿಶುಗಳ ಸಾವಿನ ಕುರಿತು ಚರ್ಚಿಸಲು ತಯಾರಿಲ್ಲ. ಮುಡಾ ಹಗರಣ ಸಂಬಂಧ ಸಿಬಿಐ ತನಿಖೆ ಆಗಬೇಕೆಂಬ ಚರ್ಚೆ ನಡೆದಿದೆ. ಇನ್ನೊಂದೆಡೆ ಇ.ಡಿ. ತನಿಖೆ ನಡೆಯುತ್ತಿದೆ. ಹಾಗಾಗಿ ಮುಖ್ಯಮಂತ್ರಿಗಳು ವಿಚಲಿತರಾದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರಕಾರಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಸಮಸ್ಯೆಗಳಿಂದ ಓಡಿಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಪಂಚಮಸಾಲಿ ಸಮುದಾಯದ ಮೇಲೆ, ಹಿಂದೂಗಳ ಮೇಲೆ ಲಾಠಿಪ್ರಹಾರ ಆಗಿದೆ ಎಂದು ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.

ಈ ವಿಚಾರವಾಗಿ ಮುಖ್ಯಮಂತ್ರಿಗಳು, ಗೃಹ ಸಚಿವರು ಸದನದಲ್ಲಿ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಅಧಿಕಾರದ ಮದ ಇವರ ನೆತ್ತಿಗೇರಿದಂತೆ ಕಾಣುತ್ತಿದೆ ಎಂದು ಟೀಕಿಸಿದರು. ರಾಜ್ಯ ಸರಕಾರವು ಅಧಿಕಾರ ಶಾಶ್ವತ ಎಂಬ ಭ್ರಮೆಯಲ್ಲಿದ್ದಂತೆ ಇದೆ. ಹಾಗಾಗಿ ಈ ರೀತಿ ಆನೆ ನಡೆದಿದ್ದೇ ದಾರಿ ಎಂಬಂತೆ ಮುಖ್ಯಮಂತ್ರಿಗಳು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಇದು ಖಂಡಿತ ಸರಿಯಲ್ಲ ಎಂದು ತಿಳಿಸಿದರು.

ನಾಳೆ ಉತ್ತರ ಕರ್ನಾಟಕದ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಿದೆ. ಇವರ ರಾಜಕೀಯಪ್ರೇರಿತ ತನಿಖೆ, ದಬ್ಬಾಳಿಕೆಗಳಿಗೆ ಹೆದರಿ ಓಡಿಹೋಗುವ ಪ್ರಶ್ನೆ ಇಲ್ಲ; ಏನೇ ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತೇವೆ ಎಂದು ಸವಾಲು ಹಾಕಿದರು. ರಾಜ್ಯ ಸರಕಾರವು ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.

ದಾವಣಗೆರೆಯಲ್ಲಿ ವಿಜಯೇಂದ್ರ ಅವರ ಶಕ್ತಿ ಪ್ರದರ್ಶನ ಸಮಾರಂಭಕ್ಕೆ ಪೂರ್ವ ತಯಾರಿ ಎಂದು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಆದುದನ್ನು ಗಮನಿಸಿದ್ದೇನೆ. ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ; ನಾವೆಲ್ಲರೂ ಬಿಜೆಪಿಯ ಕಟ್ಟಾಳುಗಳು. ನಮ್ಮ ನಡವಳಿಕೆಯಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಈ ರೀತಿ ಮತ್ತಷ್ಟು ಸಭೆ ಮಾಡುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು ಎಂದು ಮನವಿ ಮಾಡಿದರು. ಸಮಾವೇಶ ಅಥವಾ ಯಾವುದೇ ಕಾರ್ಯಕ್ರಮ ನಮ್ಮ ಕಣ್ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇಂಥ ಕಪೋಲಕಲ್ಪಿತ ವಿಚಾರಗಳಿಗೆ ಯಾರೂ ಕೂಡ ಕಿವಿಗೊಡದಿರಿ ಎಂದು ವಿನಂತಿಸಿದರು. ಯಾವುದೇ ಸಭೆ ಮಾಡದಿರಿ ಎಂದು ಮಾಧ್ಯಮಗಳ ಮೂಲಕ ಮಾಜಿ ಶಾಸಕರು, ಪಕ್ಷದ ಮುಖಂಡರಿಗೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+