ಶಾಸಕ ಸ್ಥಾನಕ್ಕೆ ಬಳ್ಳಾರಿಯ ಆನಂದ್ ಸಿಂಗ್ ರಾಜೀನಾಮೆ!
ಬಳ್ಳಾರಿ, ಜನವರಿ 28 : ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಚುನಾವಣೆ ಘೋಷಣೆಯಾಗುವ ಮುನ್ನವೇ ಬಿಜೆಪಿಗೆ ಬಳ್ಳಾರಿ ಜಿಲ್ಲೆಯಲ್ಲಿ ಹಿನ್ನಡೆ ಉಂಟಾಗಿದೆ.
ಶನಿವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರವಾಸಿ ಮಂದಿರಲ್ಲಿ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಆನಂದ್ ಸಿಂಗ್ ಭೇಟಿಯಾಗಿದ್ದರು. ಎರಡು ಸಾಲಿನ ರಾಜೀನಾಮೆ ಪತ್ರವನ್ನು ಕೋಳಿವಾಡ ಅವರಿಗೆ ಸಲ್ಲಿಸಿದರು.
ರಾಜೀನಾಮೆ ಸ್ವೀಕರಿಸಿದ ಬಳಿಕ ಮಾತನಾಡಿದ ಕೆ.ಬಿ.ಕೋಳಿವಾಡ ಅವರು, 'ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ. ಆನಂದ್ ಸಿಂಗ್ ಅವರು ಫೆ.10ರಂದು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
'ಪಕ್ಷದ ಆಂತರಿಕ ಗೊಂದಲದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೇನೆ. ಗೊಂದಲದ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರ ಗಮನಕ್ಕೂ ತಂದಿದ್ದೆ. ಆದರೆ, ಯಾರೂ ಸಹ ನನ್ನನ್ನು ಕರೆದು ಮಾತನಾಡಲಿಲ್ಲ. ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದು ಆನಂದ್ ಸಿಂಗ್ ಹೇಳಿದರು.

ಉಳಿಸಿಕೊಳ್ಳಬೇಕು ಎಂಬುದು ಇಲ್ಲ
'ಪಕ್ಷದಲ್ಲಿನ ಆಂತರಿಕ ಗೊಂದಲದ ಬಗ್ಗೆ ಮಾಹಿತಿ ನೀಡಿದದೂ ರಾಜ್ಯ ನಾಯಕರು ನನ್ನನ್ನು ಕರೆದು ಮಾತನಾಡಲಿಲ್ಲ. ನನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದಿದ್ದರೆ ಮಾತನಾಡುತ್ತಿದ್ದರು' ಎಂದು ಆನಂದ್ ಸಿಂಗ್ ಹೇಳಿದರು.

ಮುಂದಿನ ನಿರ್ಧಾರವನ್ನು ಪ್ರಕಟಿಸುವೆ
'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದಿನ ಕೆಲವೇ ದಿನಗಳಲ್ಲಿ ಮುಂದಿನ ನಿರ್ಧಾರವನ್ನು ಪ್ರಕಟಿಸುತ್ತೇನೆ' ಎಂದು ಆನಂದ್ ಸಿಂಗ್ ಹೇಳಿದರು. ಫೆ.10ರಂದು ಆನಂದ್ ಸಿಂಗ್ ಕಾಂಗ್ರೆಸ್ ಸೇರುವ ಸಾಧ್ಯತೆ ದೆ.

ಪಕ್ಷ ತೊರೆಯಲುಕಾರಣವೇನು?
ಗಣಿ ಉದ್ಯಮಿಯಾಗಿರುವ ಪತ್ತಿಕೊಂಡ ಕಿಶೋರ್ 2018ರ ಚುನಾವಣೆಗೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ವಿಜಯನಗರದಲ್ಲಿ ಕರಪತ್ರವನ್ನು ಹಂಚುತ್ತಿದ್ದಾರೆ ಎಂದು ಆನಂದ್ ಸಿಂಗ್ ಆರೋಪಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ದೂರಿದ್ದರು.

ಪರಿವರ್ತನಾ ಯಾತ್ರೆಗೂ ಗೈರು ಹಾಜರಾಗಿದ್ದರು
ಜನವರಿ 6ರಂದು ವಿಜಯನಗರದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆದಿತ್ತು. ಆನಂದ್ ಸಿಂಗ್ ಅವರು ಸಮಾವೇಶದಿಂದ ದೂರವುಳಿದಿದ್ದರು. ಆಗಲೇ ಅವರು ಬಿಜೆಪಿ ತೊರೆಯುವ ಬಗ್ಗೆ ಸುದ್ದಿ ಹಬ್ಬಿತ್ತು.

ಕ್ಷೇತ್ರದ ಫಲಿತಾಂಶ
2013ರ ಚುನಾವಣೆಯಲ್ಲಿ ಆನಂದ್ ಸಿಂಗ್ 69,995 ಮತಗಳನ್ನು ಪಡೆದು ಬಳ್ಳಾರಿಯ ವಿಜಯನಗರ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ನ ಎಚ್.ಅಬ್ದುಲ್ ವಾಹಬ್ 39,358 ಮತ, ಜೆಡಿಎಸ್ನ ಕೆ.ಬಸವರಾಜ ಅವರು 611 ಮತಗಳನ್ನು ಪಡೆದಿದ್ದರು.












Click it and Unblock the Notifications