ಮಹದಾಯಿ ಮುಂಚೂಣಿ ಹೋರಾಟಗಾರ ವೀರೇಶ ಸೊಬರದ ಮಠ ಸಂದರ್ಶನ
ಬೆಂಗಳೂರು, ಆಗಸ್ಟ್ 15: ಸತತ ಹೋರಾಟದ ನಂತರ ನಿನ್ನೆಯಷ್ಟೆ ಮಹದಾಯಿ ವಿವಾದದ ತೀರ್ಪು ಪ್ರಕಟವಾಗಿದೆ. ನ್ಯಾಯಾಧಿಕರಣದ ತೀರ್ಪು ಹೋರಾಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.
50 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಮಹದಾಯಿ ಹೋರಾಟಕ್ಕೆ ಉತ್ತರ ಕರ್ನಾಟವೇ ಕೇಂದ್ರ. ಮಹದಾಯಿ ಹೋರಾಟಕ್ಕೆ ಇಡೀಯ ರಾಜ್ಯ ಬೆಂಬಲ ನೀಡಿತ್ತಾದರೂ ಇದರ ಕೇಂದ್ರ ಸ್ಥಾನದಲ್ಲಿದ್ದು ಉತ್ತರ ಕರ್ನಾಟಕದ ರೈತರು, ಮುಖಂಡರೇ. ಅದರಲ್ಲಿಯೂ ಮಹದಾಯಿ ಹೋರಾಟದಲ್ಲಿ ಮುನ್ನೆಲೆಯಲ್ಲಿ ಕೇಳಿ ಬರತ್ತಿದ್ದ ಹೆಸರು ರೈತ ಹೋರಾಟಗಾರ ವೀರೇಶ ಸೊಬರದ ಮಠ ಅವರದ್ದು.
ಮಹದಾಯಿ ಅಂತಿಮ ತೀರ್ಪು: ಗೋವಾ ರಾಜ್ಯದ ವಾದ ಏನಾಗಿತ್ತು?
ಮಹದಾಯಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿರುವ ವೀರೇಶ ಸೊಬರದ ಮಠ ಅವರು 'ಒನ್ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದ್ದಾರೆ. ಮಹದಾಯಿ ತೀರ್ಪು, ಹೋರಾಟದ ಮುಂದಿನ ರೂಪು ರೇಷೆ, ತೀರ್ಪಿನಿಂದ ಉತ್ತರ ಕರ್ನಾಟಕ ಭಾಗದಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತೀರ್ಪು ಮಹದಾಯಿ ಹೋರಾಟಗಾರರಿಗೆ ಖುಷಿ ತಂದಿದೆಯೇ?
ಖಂಡಿತ ಹೌದು, ನಾವು ಕೇಳಿದಷ್ಟು ನೀರು ಸಿಕ್ಕಲ್ಲವಾದರೂ, ಮಹದಾಯಿ ನಮ್ಮದಲ್ಲವೇ ಅಲ್ಲ ಎಂದು ವಾದಿಸುತ್ತಿದ್ದ ಮೂಡರಿಗೆ (ಗೋವಾ) ನ್ಯಾಯಾಧಿಕರಣ ಬುದ್ಧಿ ಕಲಿಸಿದೆ. ನಮ್ಮ ರಾಜ್ಯದಲ್ಲಿ ಬಿದ್ದ ಮಳೆಯನ್ನು, ಹರಿದ ನದಿಯ ನೀರನ್ನು ಬಳಸಿಕೊಳ್ಳುವುದು ನಮ್ಮ ಹಕ್ಕು, ನಮ್ಮ ಹಕ್ಕನ್ನು ನ್ಯಾಯಾಧಿಕರಣ ನಮಗೆ ಕೊಡಿಸಿದೆ ಇದರಿಂದಾಗಿ ಈ ತೀರ್ಪು ಮಹದಾಯಿ ಹೋರಾಟಗಾರರಿಗೆ ಖುಷಿ ತಂದಿದೆ.
ಮಹದಾಯಿ: ಕರ್ನಾಟಕ ಕೇಳಿದ್ದೆಷ್ಟು? ನ್ಯಾಯಾಧಿಕರಣ ಕೊಟ್ಟಿದ್ದೆಷ್ಟು?
ಸರ್ಕಾರ ಮೇಲ್ಮನವಿ ಹೋಗಬೇಕಾ ಅಥವಾ ಇಲ್ಲಿಗೆ ಕಾನೂನು ಹೋರಾಟ ಅಂತ್ಯಗೊಳಿಸಬೇಕಾ?
ಖಂಡಿತವಾಗಿಯೂ ಸುಪ್ರಿಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕು, ನ್ಯಾಯಾಧಿರಣ ತೀರ್ಪಿನಿಂದಾಗಿ ಮಹದಾಯಿ ನೀರನ್ನು ಕರ್ನಾಟಕ ಬಳಸಿಕೊಳ್ಳಬಹುದು ಎಂಬುದು ಪಕ್ಕಾ ಆಗಿದೆ. ಹಾಗಾಗಿ ಸುಪ್ರಿಂ ಕೋರ್ಟ್ನಲ್ಲಿ ರಾಜ್ಯಕ್ಕೆ ಹಿನ್ನಡೆ ಆಗುವ ಆತಂಕವೇ ಇಲ್ಲ. ಹೆಚ್ಚಿನ ನೀರಿಗಾಗಿ ಸರ್ಕಾರ ಸುಪ್ರಿಂಗೆ ಮೇಲ್ಮನವಿ ಹೋಗಬೇಕು. ವಾಟರ್ ಪಾಲಿಸಿ ಪ್ರಕಾರವೂ ನಮ್ಮ ನೀರನ್ನೆ ನಾವು ಬಳಸಿಕೊಳ್ಳುತ್ತಿದ್ದೇವೆ ಹಾಗಾಗಿ ಯಾವುದೇ ಆತಂಕ ಇಲ್ಲದೆ ಸುಪ್ರಿಂಗೆ ಮೇಲ್ಮನವಿ ಹೋಗಬೇಕು.
ಮಹದಾಯಿ ತೀರ್ಪು : ಕರ್ನಾಟಕಕ್ಕೆ ನಿಜಕ್ಕೂ ಸಿಗಬೇಕಾದದ್ದು ಸಿಕ್ಕಿದೆಯಾ?
ಕರ್ನಾಟಕದ ವಾದ ತೃಪ್ತಿ ತಂದಿದೆಯಾ?
ಮಹದಾಯಿ ಪರ ರಾಜ್ಯದ ವಕೀಲರಾದ ಮೋಹನ್ ಕಾತರಕಿ ಮತ್ತು ಅವರ ತಂಡ ಉತ್ತಮವಾಗಿ ವಾದ ಮಂಡನೆ ಮಾಡಿದೆ. ನಾವೂ ಸಹ ಹತ್ತಿರದಿಂದ ಅವರ ವಾದಗಳನ್ನು ಗಮನಿಸಿದ್ದೇವೆ, ಗೋವಾ, ಮಹಾರಾಷ್ಟ್ರಗಳಿಗಿಂತಲೂ ಉತ್ತಮ ರೀತಿಯಲ್ಲಿ ಮೋಹನ್ ಕಾತರಕಿ ಮತ್ತು ಅವರ ತಂಡ ವಾದ ಮಂಡನೆ ಮಾಡಿ ರಾಜ್ಯಕ್ಕೆ ಗೆಲುವು ತಂದುಕೊಟ್ಟಿದೆ. ಎಲ್ಲಾ ಹೋರಾಟಗಾರರ ಪರವಾಗಿ ಅವರಿಗೆ ಅಭಿನಂದನೆಗಳು.
ಮಹದಾಯಿ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಗೋವಾ, ತಕರಾರು ಅಂತ್ಯ
ಮಹದಾಯಿ ತೀರ್ಪನ್ನು ರಾಜಕೀಯ ಪಕ್ಷಗಳು ತಮ್ಮ ಸಾಧನೆಯಂತೆ ಬಳಸಿಕೊಳ್ಳುತ್ತಿವೆಯಲ್ಲಾ?
ಮಹದಾಯಿ ವಿಚಾರದಲ್ಲಿ ರಾಜಕೀಯ ಪಕ್ಷಗಳು ಏನು ಮಾಡಿದವು ಎಂಬುದು ರಾಜ್ಯದ ಜನರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಇದು ರೈತರ ಹೋರಾಟವೇ ಆಗಿತ್ತು ಹಾಗಾಗಿ ಈ ಗೆಲುವು ಸಹ ರೈತರ ಗೆಲುವೇ ಆಗಿದೆ. ರಾಜಕೀಯ ಪಕ್ಷಗಳಿಗೆ ಮಹದಾಯಿ ವಿಚಾರದಲ್ಲಿ ನಿಜವಾಗಿಯೂ ಇಚ್ಛಾಶಕ್ತಿ ಇದ್ದಿದ್ದರೆ ರಾಜಿ ಮೂಲಕ ಬಗೆಹರಿಸುವ ಕಾರ್ಯ ಆಗುತ್ತಿತ್ತು. ಆದರೆ ಮೂರು ಪ್ರಮುಖ ಪಕ್ಷಕ್ಕೆ ಆ ವಿಚಾರವೇ ಇರಲಿಲ್ಲ. ಜನರನ್ನು ಪರಸ್ಪರ ಹೊಡೆದಾಡಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವು ಚಿಂತಿಸದವಷ್ಟೆ.
ಮಹದಾಯಿ ಅಂತಿಮ ತೀರ್ಪು : ಏನಿದು ಮೂರು ರಾಜ್ಯಗಳ ನಡುವಿನ ವಿವಾದ?
ಉ.ಕರ್ನಾಟಕದ ಬೆಳೆ ಪದ್ಧತಿ ಸರಿ ಇಲ್ಲ ಎಂಬುದು ಗೋವಾದ ವಾದ, ಇದಕ್ಕೇನಂತೀರಿ?
ವಿದೇಶಿ ಮಹಿಳೆಯರನ್ನು ಅರೆ ಬೆತ್ತಲೆ ಸುತ್ತಿಸುವ, ಮದ್ಯ ತಯಾರಿಸುವ ಗೋವಾಕ್ಕೆ ರೈತರ ಬಗ್ಗೆ, ಕೃಷಿ ಏನಾದರೂ ಜ್ಞಾನ ಇದೆಯಾ?. ನಮ್ಮ ರೈತರು ನೀರಿಲ್ಲದೆಯೂ ಬೆಳೆ ಬೆಳೆದಿದ್ದಾರೆ. ನೀರು ಸಿಕ್ಕರೆ ಇಡೀಯ ದೇಶಕ್ಕೆ ಅನ್ನ ಹಾಕಬಲ್ಲರು ಉತ್ತರ ಕರ್ನಾಟಕದ ರೈತರು. ಗೋವಾ ವಿನಾಕಾರಣ ನಮ್ಮ ಮೇಲೆ ನಮ್ಮ ಕೃಷಿ ಪದ್ಧತಿಯ ಬಗ್ಗೆ ಕೊಂಕು ಹುಡುಕಲು ಯತ್ನಿಸಿತ್ತಷ್ಟೆ.
ಬೆಣ್ಣಿಹಳ್ಳದಲ್ಲೂ ಸಾಕಷ್ಟು ನೀರಿದೆಯಲ್ಲ, ಅದರ ಬಗ್ಗೆ ಮಾತಿಲ್ಲ ಏಕೆ?
ಈ ಬಗ್ಗೆ ನಾವು ಈ ಮುಂಚೆಯೇ ಯೋಚಿಸಿದ್ದೆವು. ಆದರೆ ಈ ಮುಂಚಿನ ಹಂತದಲ್ಲಿ ಅದನ್ನು ಕೈಗೆ ಎತ್ತಿಕೊಂಡಿದ್ದರೆ ಮಹದಾಯಿ ವಿಚಾರ ದುರ್ಬಲವಾಗಿಬಿಡುತ್ತಿತ್ತು, ಹಾಗಾಗಿ ಅದನ್ನು ಒತ್ತಟ್ಟಿಗೆ ಇಟ್ಟಿದ್ದೆವು. ಬೆಣ್ಣಿಹಳ್ಳದ ಬಗ್ಗೆ ಈ ಮುಂಚೆಯೇ ನಾನೇ ಸಿಎಂ ಅವರ ಬಳಿ ಮಾತನಾಡಿದ್ದೆ. ಬೆಣ್ಣಿಹಳ್ಳದಲ್ಲಿ 18 ಟಿಎಂಸಿ ನಿರಿದೆ. ಅದಕ್ಕೆ ಅಲ್ಲಲ್ಲಿ ಚೆಕ್ಡ್ಯಾಂ ನಿರ್ಮಿಸಿದರೆ ನೀರನ್ನು ಬಳಸಿಕೊಳ್ಳಬಹುದು. ಪರಮಶಿವಯ್ಯ ಅವರ ವರದಿಯಲ್ಲೂ ಈ ಬಗ್ಗೆ ವಿಸ್ತೃತ ವರದಿ ಇದೆ. ಈ ಕುರಿತು ನಿಯೋಗವೊಂದನ್ನು ರಚಿಸಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ.
ಮಲಪ್ರಭಾ ಅಣೆಕಟ್ಟಿಗೆ ನೀರು ಹರಿಸುವ ಬಗ್ಗೆ ವಿರೋಧ ಎದುರಾಗಿತ್ತಲ್ಲ?
ಸ್ವಹಿತಾಸಕ್ತಿ ಉಳ್ಳ ಕೆಲವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ರಿಯಲ್ ಎಸ್ಟೇಟ್ನವರು, ಬಿಲ್ಡರ್ಗಳು, ರಾಜಕೀಯದವರು ಮಲಪ್ರಭಾ ಅಣೆಕಟ್ಟೆಗೆ ನೀರು ಹರಿಯುವ ಹಾದಿಯಲ್ಲಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದ ಕೆಲವು ಅದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಗೋವಾಕ್ಕೆ, ಮಹದಾಯಿ ನದಿಪಾತ್ರದಿಂದ ನೀರು ಹೊರಕ್ಕೆ ಹೋಗುವುದು ಇಷ್ಟವಿರಲಿಲ್ಲ, ನೀರು ಹೊರಕ್ಕೆ ತಿರುವಿದರೆ ತಮಗೆ ನೀರು ಕಡಿಮೆ ಆಗುತ್ತದೆ ಎಂಬ ಕಾರಣದಿಂದ ಅವರು ವಿರೋಧ ವ್ಯಕ್ತಪಡಿಸಿದ್ದರು.
ಹೋರಾಟಗಾರರ ಆಸೆಯಂತೆ ಮಹದಾಯಿ ನೀರು ದೊರೆತಿದೆ, ಇದರಿಂದ ಆ ಭಾಗದಲ್ಲಿ ಆಗಲಿರುವ ಬದಲಾವಣೆಗಳೇನು?
ಮೊದಲಿಗೆ ನಮ್ಮ ಜನ ತಮ್ಮ ಪಾಲಿಗೆ ಸಿಕ್ಕ ನೀರನ್ನು ಇತಿ-ಮಿತಿಯಾಗಿ ಬಳಸಬೇಕಿದೆ. ನಮ್ಮ ಪಾಲಿಗೆ ಬಂದ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಯತ್ನ ಮಾಡಬೇಕಿದೆ. ಅಂತರ್ಜಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕೆರೆ, ಕಟ್ಟೆಗಳನ್ನು ತುಂಬಿಸಿಕೊಳ್ಳುವ ಯತ್ನವೂ ಆಗಬೇಕಿದೆ. ಹೆಚ್ಚುವರಿ ನೀರು ದೊರೆತಿರುವುದರಿಂದ ಈ ಭಾಗದ ರೈತ ಜೀವನ ಶೈಲಿ ಉತ್ತಮವಾಗಲಿದೆ. ಭಾಗದ ಅಭಿವೃದ್ಧಿಗೂ ಇದು ಪೂರಕವಾಗಲಿದೆ.