ಕನ್ನಡದಲ್ಲಿ ಪ್ರಶ್ನೆ: ತುಳು, ಇಂಗ್ಲಿಷ್ ನಲ್ಲಿ ಮೊಯ್ಲಿ ಉತ್ತರ
ಮಂಗಳೂರು, ಮಾ 5: ತಂದೆ ಶ್ರೀರಾಮಾಯಣ ಅನ್ವೇಷಣಂ ಎನ್ನುವ ಮಹಾಕಾವ್ಯವನ್ನು ಬರೆದವರು, ಜೊತೆಗೆ ಹಲವಾರು ಕಾದಂಬರಿ, ನಾಟಕಗಳನ್ನು ಕನ್ನಡಕ್ಕೆ ನೀಡಿದವರು. ಆದರೆ ಅವರ ಪುತ್ರ ಸುದ್ದಿಗೋಷ್ಠಿಯಲ್ಲಿ ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ಇಂಗ್ಲಿಷ್ ಮತ್ತು ತುಳುವಿನಲ್ಲಿ ಉತ್ತರ ನೀಡಿದರು.
ಇದು ನಡೆದದ್ದು ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿಯವರ ಪುತ್ರ ಹರ್ಷ ಮೊಯ್ಲಿ ಮಂಗಳೂರಿನಲ್ಲಿ ಮಂಗಳವಾರ (ಮಾ 4) ನಡೆಸಿದ ಸುದ್ದಿಗೋಷ್ಠಿಯಲ್ಲಿ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕರೆದಿದ್ದ ಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಬಹುತೇಕ ಇಂಗ್ಲಿಷ್ ನಲ್ಲಿ ಉತ್ತರಿಸಿದ ಹರ್ಷ, ಅಲ್ಲಲ್ಲಿ ತುಳು ಪದವನ್ನು ಬಳಸಿದರು. ಆದರೆ ಅಪ್ಪಿತಪ್ಪಿ ಕನ್ನಡದಲ್ಲಿ ಉತ್ತರಿಸಲೇ ಇಲ್ಲ. (ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ)
ಕನ್ನಡದಲ್ಲಿ ಕೇಳಿದ ಪ್ರಶ್ನೆಗಳಿಗೆ ಇಂಗ್ಲಿಷ್ ನಲ್ಲಿ ಉತ್ತರಿಸಿದ ಹರ್ಷ, ಎತ್ತಿನಹೊಳೆ ಯೋಜನೆಗೆ ನನ್ನಿಂದಲೇ ಮಹತ್ವ ಬಂತು ಎಂದು ಹೇಳಿದ್ದಾರೆ. ನಾನು ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಗೊತ್ತಾಗುತ್ತಿದ್ದಂತೇ, ಈ ಯೋಜನೆಗೆ ರಾಜಕೀಯ ಬಣ್ಣ ಬಳೆಯಲಾಯಿತು ಎಂದು ಹರ್ಷ ಮೊಯ್ಲಿ ದೂರಿದ್ದಾರೆ.

ಈ ಯೋಜನೆಗೆ ಅಗತ್ಯಕ್ಕಿಂತ ಹೆಚ್ಚಾಗಿ ಪ್ರಚಾರ ನೀಡಲಾಯಿತು. ಈ ಯೋಜನೆಯಿಂದ ವೈಜ್ಞಾನಿಕವಾಗಿ ಯಾವ ಭಾಗಕ್ಕೂ ತೊಂದರೆಯಾಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ತೊಂದರೆಯಾಗುವುದಾದರೆ ನಾನು ಇದಕ್ಕೆ ಬೆಂಬಲಿಸುತ್ತಿರಲಿಲ್ಲ. ಯೋಜನೆಯ ಸಾಧಕ ಬಾಧಕವನ್ನು ಅರಿತ ನಂತರವಷ್ಟೇ ಯೋಜನೆಗೆ ಸರಕಾರ ಚಾಲನೆ ನೀಡಿದೆ ಎಂದು ಹರ್ಷ ಮೊಯ್ಲಿ ಹೇಳಿದ್ದಾರೆ. (ಎತ್ತಿನಹೊಳೆ: ದಕ್ಷಿಣಕನ್ನಡ ಬಂದ್)
ಪಕ್ಷದ ಆಂತರಿಕ ಚುನಾವಣೆಯಲ್ಲಿ ನಾಮಪತ್ರ ಸರಿಯಾಗಿಯೇ ಸಲ್ಲಿಸಿದ್ದೆ. ಕೆಲವೊಮ್ಮೆ ತಪ್ಪುಗಳಾಗುತ್ತದೆ. ಇದಕ್ಕಾಗಿ ಯಾರನ್ನೂ ನಾನು ದೂಷಿಸುವುದಿಲ್ಲ ಮತ್ತು ಮೇಲ್ಮನವಿ ಸಲ್ಲಿಸುವುದಿಲ್ಲ. ಇಲ್ಲೇ ಇದ್ದು ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೇನೆ ಎಂದು ಹರ್ಷ ಮೊಯ್ಲಿ ಹೇಳಿದ್ದಾರೆ. (ಚುನಾವಣಾ ಕಣದಿಂದ ಹರ್ಷ ಮೊಯ್ಲಿ ಔಟ್)
ನನಗೆ ಟಿಕೆಟ್ ನೀಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಇಂಗ್ಲಿಷ್ ನಲ್ಲಿ ಉತ್ತರಿಸಿ ಗೋಷ್ಠಿಗೆ ಹರ್ಷ ಮೊಯ್ಲಿ ' The End' ಎಂದಿದ್ದಾರೆ.












Click it and Unblock the Notifications