ಜೀವನಪಾಠ ಕಲಿಸುವ ವಚನ ಮಹಾಸಂಪುಟ ಮಾರಾಟ
ಕೊಪ್ಪಳ ಆ. 29 : ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಸವಯುಗದ ವಚನಗಳ ಮಹಾಸಂಪುಟ ಹಾಗೂ ಬಸವೋತ್ತರ ಯುಗದ ವಚನ ಮಹಾ ಸಂಪುಟಗಳನ್ನು ಮುದ್ರಿಸಿ, ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಜಗಜ್ಯೋತಿ ಬಸವೇಶ್ವರ ಸೇರಿದಂತೆ ಕನ್ನಡದ ಹಲವಾರು ಮಹನೀಯರು ರಚಿಸಿರುವ, ಜೀವನಮೌಲ್ಯ, ಸ್ಫೂರ್ತಿ, ಆದರ್ಶ ತುಂಬಿರುವ, ಕನ್ನಡ ಸಾಹಿತ್ಯ ಶ್ರೀಮಂತಿಕೆಯ ವಚನಗಳಿಗೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ. ಹೀಗಾಗಿ ಯಾರು ಬೇಕಾದರೂ ಅವನ್ನು ಕೊಂಡು ಓದಿ, ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಕನ್ನಡ ನಾಡಿನ ಪ್ರಥಮ ಪ್ರಜಾ ಸಾಹಿತ್ಯವಾಗಿರುವ ವಚನಗಳು ನಮ್ಮ ಪರಂಪರೆಯ ಅಪೂರ್ವ ಆಸ್ತಿ. ಪ್ರಸ್ತುತ ಕನ್ನಡ ಸಾಹಿತ್ಯ ಲೋಕದಲ್ಲಿ ಹತ್ತಾರು ವಚನಗಳು ಲಭ್ಯವಿದೆ. ವಚನಗಳು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹವುಗಳಾಗಿದ್ದು, ಸಮಾಜಕ್ಕೆ ಅತ್ಯಂತ ಪ್ರಸ್ತುತ ಸಾಹಿತ್ಯವಾಗಿದೆ.
ಇಂತಹ ಸಾವಿರಾರು ವಚನಗಳನ್ನು ಒಟ್ಟುಗೂಡಿಸಿ, ಕನ್ನಡ ಪುಸ್ತಕ ಪ್ರಾಧಿಕಾರವು ಬಸವಯುಗದ ವಚನ ಮಹಾಸಂಪುಟ-1952 ಪುಟಗಳು ಹಾಗೂ ಬಸವೋತ್ತರ ಯುಗದ ವಚನ ಮಹಾ ಸಂಪುಟ-1536 ಪುಟಗಳನ್ನು ಹೊಂದಿದಂತೆ 3ನೇಯ ಮುದ್ರಣವಾಗಿ ಎರಡು ಮಹಾ ಸಂಪುಟಗಳನ್ನು ಮುದ್ರಣ ಮಾಡಿಸಿ ಬಿಡುಗಡೆ ಮಾಡಿದೆ.
ಬಸವಯುಗದ ಹಾಗೂ ಬಸವೋತ್ತರ ಯುಗದ ವಚನಗಳ ಈ ಎರಡು ಸಂಪುಟಗಳ ಒಟ್ಟಾರೆ ಖರೀದಿ ಮೌಲ್ಯ ರೂ. 600 ಗಳು. ಈ ಸಂಪುಟಗಳು ರಾಜ್ಯದ ಎಲ್ಲ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಿಲ್ಲಾ ಕಚೇರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.












Click it and Unblock the Notifications