ವಿ ಸೋಮಣ್ಣ ಕಾಂಗ್ರೆಸ್ ಗೆ ಹೋಗ್ತಾರಂತೆ: ಯಡಿಯೂರಪ್ಪ ಹೇಳಿದ್ದೇನು?
ಶಿವಮೊಗ್ಗ, ಡಿಸೆಂಬರ್ 07: ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡದ ಬಳಿಕೆ ಅಸಮಾಧಾನಗೊಂಡಿದ್ದ ವಿ ಸೋಮಣ್ಣ ಕಾಂಗ್ರೆಸ್ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆಗೆ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಗೆ ಹೋಗ್ತಾರೆ ಎಂಬ ಮಾತು ಕೇಳಿ ಬಂದಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಬುಧವಾರ ಶಿವಮೊಗ್ಗದಲ್ಲಿ ವಿ ಸೋಮಣ್ಣ ಕಾಂಗ್ರೆಸ್ ಗೆ ಹೋಗ್ತಾರಂತೆ ಎಂದು ಮಾಧ್ಯಮಗಳ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಸೋಮಣ್ಣ ಎಲ್ಲೂ ಹೋಗಲ್ಲ, ತಮ್ಮ ಪಕ್ಷದಲ್ಲೇ ಇರುತ್ತಾರೆ, ತಾನು ಅವರೊಂದಿಗೆ ಮಾತಾಡುವುದಾಗಿ ಹೇಳಿದರು.

ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ನಾಯಕ ವಿ ಸೋಮಣ್ಣ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗೇ ಅಸಮಾಧಾನ ವ್ಯಕ್ತಪಡಿಸಿದ್ದರು ಮತ್ತು ಅವರಿಂದಾಗಿಯೇ ಚುನಾವಣೆಗೆ ಮೊದಲು ಅವರು ಕಾಂಗ್ರೆಸ್ ಸೇರಲಿರುವ ವದಂತಿ ಹರಡಿತ್ತು. ಈಗ ಸೋಮಣ್ಣ ಕಾಂಗ್ರೆಸ್ ಸೇರುವ ಬಗ್ಗೆ ಮತ್ತೊಮ್ಮೆ ವದಂತಿ ಹರಡುತ್ತಿದ್ದು, ಸೋಮಣ್ಣ ಎಲ್ಲೂ ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ರೈತರಿಗೆ ಬರ ಪರಿಹಾರ ನಿಧಿ ಇನ್ನು ಕೇಂದ್ರದಿಂದ ಬಿಡುಗಡೆಯಾಗಿಲ್ಲ ಎಂಬ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಸಂಸದರು ಕೇಂದ್ರದ ನಾಯಕರನ್ನು ಭೇಟಿಯಾಗಿದ್ದಾರೆ, ವಿಜಯಯೇಂದ್ರ ಅಹ ಅವರೊಂದಿಗೆ ಮಾತಾಡಿದ್ದಾರೆ, ಆದಷ್ಟು ಬೇಗ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದ ಯಡಿಯೂರಪ್ಪ, ಹಾಗಂತ ರಾಜ್ಯ ಸರ್ಕಾರ ಪರಿಹಾರ ನಿಧಿ ನಿರೀಕ್ಷೆಯಲ್ಲಿ ಕೈಕಟ್ಟಿ ಕುಳಿತಿಕೊಳ್ಳಬಾರದು, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಹೇಳಿದರು.

ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಸಿಎಂ ಆಗಿ ನೀಡುವುದರಲ್ಲಿ ತಪ್ಪೇನಿಲ್ಲ. ಆದರೆ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಈಗಾಗಲೇ ಹಲವು ಮಠಾಧೀಶರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಬೆಳಗಾವಿ ಅಧಿವೇಶನದಲ್ಲಿ ವೀರ ಸಾವರ್ಕರ್ ಫೋಟೋ ತೆರವು ವಿಚಾರವಾಗಿ ಮಾತನಾಡಿ, ಈ ರೀತಿಯ ಕ್ರಮ ಸರಿಯಲ್ಲ. ಈ ರೀತಿಯ ಪ್ರಯತ್ನಕ್ಕೆ ಯಾರೂ ಕೈ ಹಾಕಬಾರದು, ಅಲ್ಪಸಂಖ್ಯಾತರ ಓಲೈಕೆಯಿಂದ ಗೆಲ್ಲಬಹುದು ಎಂಬ ಕಾಂಗ್ರೆಸ್ ಲೆಕ್ಕಾಚಾರ ಕೈಗೂಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.












Click it and Unblock the Notifications