ಹನೂರು ಕ್ಷೇತ್ರದಲ್ಲಿ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿ!
ಬೆಂಗಳೂರು, ಫೆಬ್ರವರಿ 02 : ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ವಿ.ಸೋಮಣ್ಣ ಅವರು ಬೆಂಗಳೂರು ನಗರದ ರಾಜಕೀಯ ತೊರೆಯಲು ಮುಂದಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ' ಎಂದು ಸೋಮಣ್ಣ ಘೋಷಿಸಿದ್ದಾರೆ.
ಸೋಮವಾರ ಹನೂರು ಕ್ಷೇತ್ರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ವಿ.ಸೋಮಣ್ಣ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. '2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಂಡಿತ' ಎಂದು ಅವರು ಭವಿಷ್ಯ ನುಡಿದಿದ್ದಾರೆ. [ಹನೂರು ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ]
ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ವಿ.ಸೋಮಣ್ಣ ಅವರ ಅವಧಿ ಜೂನ್ನಲ್ಲಿ ಅಂತ್ಯಗೊಳ್ಳಲಿದೆ. ಬಳಿಕ ಅವರು ಬೆಂಗಳೂರಿನ ಗೋವಿಂದರಾಜನಗರ ಮತ್ತು ವಿಜಯನಗರ ಕ್ಷೇತ್ರಗಳ ರಾಜಕೀಯದಿಂದ ದೂರವಾಗುತ್ತಿದ್ದು, ಚಾಮರಾಜನಗರ ಜಿಲ್ಲೆಗೆ ತೆರಳಲಿದ್ದಾರೆ. [2013ರ ಚುನಾವಣೆಯಲ್ಲಿ ಗೆದ್ದವರು, ಸೋತವರು]
2008ರ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಜಯಗಳಿಸಿದ್ದ ವಿ.ಸೋಮಣ್ಣ ಅವರು ಅಪರೇಷನ್ ಕಮಲದ ಬಳಿಕ ಬಿಜೆಪಿ ಸೇರಿದ್ದರು. 2013ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಕಾಂಗ್ರೆಸ್ನ ಎಂ.ಕೃಷ್ಣಪ್ಪ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಹನೂರು ಕ್ಷೇತ್ರದತ್ತ ಸೋಮಣ್ಣ ವಿವರಗಳು ಚಿತ್ರಗಳಲ್ಲಿ....
ಹನೂರು ಕ್ಷೇತ್ರಕ್ಕೆ ಸೋಮಣ್ಣ ಬಿಜೆಪಿ ಅಭ್ಯರ್ಥಿ
2018ರ ವಿಧಾನಸಭೆ ಚುನಾವಣೆಗೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಘೋಷಿಸಿದ್ದಾರೆ. ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಹಿಂದೆ ಸೋಮಣ್ಣ ಅವರು ಚುನಾವಣೆಗೆ ಸ್ಪರ್ಧಿಸಿದ್ದರು.
'ಕ್ಷೇತ್ರದಲ್ಲಿ ಅರಾಜಕತೆ ಉಂಟಾಗಿದೆ'
ಸೋಮವಾರ ಹನೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಮಾವೇಶ ಉದ್ದೇಶಿಸಿ ಮಾತನಾಡಿದ ಸೋಮಣ್ಣ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಮತ್ತು ಶಾಸಕರ ಉದ್ಧಟತನದಿಂದಾಗಿ ಈ ಕ್ಷೇತ್ರದಲ್ಲಿ ಅರಾಜಕತೆ ಉಂಟಾಗಿದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿ, ಸ್ಥಳೀಯವಾಗಿ ಬಜೆಪಿ ಬಲವಾಗಿದೆ ಎಂಬುದನ್ನು ಸಾಬೀತು ಪಡಿಸಬೇಕು' ಎಂದು ಸೋಮಣ್ಣ ಕರೆ ನೀಡಿದರು.
ಜಾತಿಯ ಬಲವೂ ದೊರೆಯಲಿದೆ
ವಿ.ಸೋಮಣ್ಣ ಅವರು ಸದ್ಯ ವಿಧಾನಪರಿಷತ್ ಸದಸ್ಯರಾಗಿದ್ದು, ಜೂನ್ನಲ್ಲಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಹನೂರು ಕ್ಷೇತ್ರ ಜಾತಿ ಬಲದ ಆಧಾರದ ಮೇಲೆಯೂ ವಿ.ಸೋಮಣ್ಣ ಅವರಿಗೆ ನೆರವು ನೀಡಲಿದ್ದು, ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಗೋವಿಂದರಾಜನಗರದಲ್ಲಿ ಗೆದ್ದಿದ್ದರು
2008ರ ಚುನಾವಣೆಯಲ್ಲಿ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಸೋಮಣ್ಣ ಅವರು 53,297 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ, ಅಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಿದರು. ಪುನಃ ಅದೇ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಿದ ಸೋಮಣ್ಣ ಸೋಲು ಅನುಭವಿಸಿದರು. ಆದರೆ, ಯಡಿಯೂರಪ್ಪ ಅವರು ಪರಿಷತ್ತಿಗೆ ಅವರನ್ನು ಆಯ್ಕೆ ಮಾಡಿ ಸಚಿವ ಸ್ಥಾನವನ್ನು ಉಳಿಸಿದರು.
ವಿಜಯನಗರಕ್ಕೆ ಬಂದ ಸೋಮಣ್ಣ
2013ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿ.ಸೋಮಣ್ಣ ಅವರು 44,249 ಮತಗಳನ್ನು ಪಡೆದು ಕಾಂಗ್ರೆಸ್ನ ಎಂ.ಕೃಷ್ಣಪ್ಪ ಅವರ ವಿರುದ್ಧ ಸೋಲು ಅನುಭವಿಸಿದ್ದರು. ಈಗ 2018ರ ಚುನಾವಣೆಗೆ ಬೆಂಗಳೂರಿನ ಎರಡು ಕ್ಷೇತ್ರವನ್ನು ತೊರೆದು ಚಾಮರಾಜನಗರದತ್ತ ಸೋಮಣ್ಣ ಅವರು ಮುಖ ಮಾಡಿದ್ದಾರೆ.
ಯಡಿಯೂರಪ್ಪ ಪುತ್ರ ಸ್ಪರ್ಧಿಸುವ ವಿಚಾರವಿತ್ತು
2013ರ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಹನೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸದ್ಯ, ಕಾಂಗ್ರೆಸ್ನ ಆರ್.ನರೇಂದ್ರ ಅವರು ಕ್ಷೇತ್ರದ ಶಾಸಕರು.