ರಾಜ್ಯದಲ್ಲಿ ನಡೆಯುವ ರೈಲ್ವೆ ಯೋಜನೆಗಳ ಸಂಪೂರ್ಣ ವೆಚ್ಚ ರೈಲ್ವೆ ಇಲಾಖೆಯೇ ಭರಿಸಲಿದೆ: ವಿ ಸೋಮಣ್ಣ
ಹುಬ್ಬಳ್ಳಿ,ಅಕ್ಟೋಬರ್ 04: ರಾಜ್ಯದಲ್ಲಿ ನಡೆಯುವ ರೈಲ್ವೆ ಯೋಜೆನಗಳ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಲಿದೆ. ಆದರೆ ಯೋಜನೆಗೆ ಬೇಕಾದ ಭೂಮಿಯನ್ನು ಸಕಾಲಕ್ಕೆ ಕೊಡುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ತಿಳಿಸಿದರು.
ಗುರುವಾರ ನೈಋತ್ಯ ರೈಲ್ವೆ ವಲಯದ ಹಿಂದಿನ, ಹೊಸ ಯೋಜನೆಗಳು ಹಾಗೂ ಈ ಭಾಗದ ಪ್ರಮುಖ ಬೇಡಿಕೆಗಳ ಕುರಿತು ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ವಿ ಸೋಮಣ್ಣ ಅವರು, ರಾಜ್ಯ ಸರಕಾರ ಇನ್ನುಮುಂದೆ ಸಕಾಲಕ್ಕೆ ಯೋಜನೆಗೆ ಸಂಬಂಸಿದ ಭೂಮಿ ನೀಡಿದರೆ ಸಾಕು. ಹಿಂದಿನ ಕಾರ್ಯವೈಖರಿ ಹೇಗಿತ್ತೋ ಗೊತ್ತಿಲ್ಲ. ನಾನು ಬಂದ ಮೇಲೆ ರಾಜ್ಯದ ಯೋಜನೆಗಳಿಗೆ ವೇಗ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ನಾಲ್ಕು ತಿಂಗಳಿಗೊಮ್ಮೆ ನೈಋತ್ಯ ರೈಲ್ವೆ ವಲಯದ ಸಭೆ ಮಾಡಲಾಗುವುದು ಎಂದರು.

ರಾಜ್ಯದ ಯೋಜನೆಗಳ ಕುರಿತಾಗಿ ನಾಲ್ಕು ಬಾರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಮುಖ್ಯಮಂತ್ರಿಗಳು ತಕ್ಷಣ ರೈಲ್ವೆ ಇಲಾಖೆಗೆ ಅಗತ್ಯವಿರುವ ಭೂಮಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೈಲ್ವೆ ಯೋಜನೆಗಳಿಗೆ ಸಂಬಂಽಸಿದಂತೆ ರಾಜ್ಯ ಸರಕಾರದಿಂದ ಸಕರಾತ್ಮಕ ಸಹಕಾರ ದೊರೆತಿದೆ. ವಿನಾಕಾರಣ ಇನ್ನೊಂದು ಸರಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.
ನೈರುತ್ಯ ರೈಲ್ವೆ ಯೋಜನೆಯಲ್ಲಿನ ನಡೆಯುತ್ತಿರುವ 11 ಯೋಜನೆಗಳನ್ನು 2027 ರೊಳಗೆ ಪೂರ್ಣಗೊಳಿಸಲಾಗುವುದು. ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ, ಗದಗ-ವಾಡಿ, ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು, ಬಾಗಲಕೋಟೆ-ಕುಡಚಿ ಸೇರಿದಂತೆ 11 ಯೋಜನೆಗಳಿವೆ. ಹುಬ್ಬಳ್ಳಿ-ಧಾರವಾಡ- ಕಿತ್ತೂರು-ಬೆಳಗಾವಿ ಮಾರ್ಗಕ್ಕೆ ಒತ್ತು ನೀಡಲಾಗುವುದು. ಡಿಸೆಂಬರ್-೨೦೨೪ ರೊಳಗೆ ಭೂ ಸ್ವಾಧೀನ ಪಡೆಸಿಕೊಂಡು ರೈಲ್ವೆ ಇಲಾಖೆಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ಮಳೆಗಾಲದಲ್ಲಿ ಮೂರ್ನಾಲ್ಕು ದಿನಗಳ ಕಾಲ ಸಂಚಾರ ಬಂದಾಗುತ್ತಿದೆ. ಹೀಗಾಗಿ ಇದಕ್ಕೆ ಪರ್ಯಾಯ ಮಾರ್ಗಕ್ಕೆ ಶಿಫಾರಸ್ಸು ಮಾಡಲಾಗಿದೆ. ಇದಕ್ಕೆ ನಾನೇನು ಮುತುವರ್ಜಿ ತೆಗೆದುಕೊಂಡು ಓಡಾಡುತ್ತಿದ್ದೇನೆ. ಅಂದು ಭೂ ಸ್ವಾಧಿನಕ್ಕೆ ಹೆಚ್ಚು ಕಷ್ಟವಿರಲಿಲ್ಲ. ಇಂದು ಬಹಳ ಕಷ್ಟವಾಗಿದೆ.
ಹುಬ್ಬಳ್ಳಿ-ಅಂಕೋಲಾ ಯೋಜನೆ ದಶಕದ ಬೇಡಿಕೆಯಾಗಿದ್ದು, ಇದಕ್ಕೆ ಹೊಸ ರೂಪ ನೀಡುವುದು ನನ್ನ ಗುರಿಯಾಗಿದೆ. ಆದಷ್ಟು ಬೇಗ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪರವಾನಿಗೆ ಸೇರಿದಂತೆ ಎಲ್ಲಾ ಪ್ರಕ್ರಿಯೆಯನ್ನು ನಾನೇ ಮುಂದೆ ನಿಂತು ಪೂರ್ಣಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈ ಭಾಗದ ಹಳೇಯ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಪ್ರತಿಯೊಂದು ಯೋಜನೆಗಳ ವಿವರಗಳನ್ನು ಪಡೆದುಕೊಂಡಿದ್ದೇನೆ. ಯಾವ ಕಾರಣಕ್ಕೆ ವಿಳಂಬವಾಗಿದೆ, ಮುಂದೇನು ಮಾಡಬೇಕು ಎಂಬುವುದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ಸಭೆಯಲ್ಲಿ ಇವುಗಳ ಪ್ರಗತಿಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ದೊರಕಿರುವ ಅವಕಾಶವನ್ನು ಸದ್ಬಳಿಕೆ ಮಾಡಿಕೊಂಡು ಈ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾತ್ಸವ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳಿದ್ದರು. ರೈಲ್ವೆ ಮೂಲ ಸೌಕರ್ಯ ಮತ್ತು ಸುರಕ್ಷತಾ ಯೋಜನೆಗಳಿಗೆ 2009-14 ರವರೆಗೆ 835 ಕೋಟಿ ರೂ. ಕೊಟ್ಟಿದ್ದರು. 2014-24 ರಲ್ಲಿ 2926 ಕೋಟಿ ರೂ. ತಲುಪಿದೆ. ಈ ವರ್ಷದ ಬಜೆಟ್ನಲ್ಲಿ ನೈಋತ್ಯ ರೈಲ್ವೆ ವಲಯಕ್ಕೆ 6493 ಕೋಟಿ ರೂ. ನೀಡಲಾಗಿದೆ.
ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ 531 ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಿಸಲಾಗಿದೆ. 48 ಜೋಡಿ ಹೊಸ ರೈಲು,44 ರೈಲುಗಳ ಸೇವೆ ವಿಸ್ತರಣೆ, 10 ಜೋಡಿ ವಂದೇ ಭಾರತ ರೈಲು, 1 ಜೋಡಿ ಅಮೃತ ಭಾರತ ರೈಲು ಬಂದಿವೆ. ಬಯಪ್ಪನಹಳ್ಳಿ-ಹೊಸೂರು (45.5 ಕಿಮೀ) ಚತುಷ್ಪಥ ಮಾರ್ಗದ ಅಂದಾಜು 19,400 ಕೋಟಿ ರೂ. ವೆಚ್ಚದ ಅಂತಿವ ಸ್ಥಳ ಸಮೀಕ್ಷೆ, ರೈಲ್ವೆ ಮಂಡಳಿಗೆ ಅಂತಿಮ ವರದಿ ಸಲ್ಲಿಸಲಾಗಿದೆ. ರೈಲ್ವೆ ನಿಲ್ದಾಣಗಳ ಬದಲಾವಣೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.












Click it and Unblock the Notifications