ಕೊರೊನಾ; ಆತಂಕಕಾರಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ
ಬೆಂಗಳೂರು, ಮಾರ್ಚ್ 22 : ಕರ್ನಾಟಕದಲ್ಲಿ ಈಗಾಗಲೇ ಕೊರೊನಾ ಸೋಂಕು ಆತಂಕ ಮೂಡಿಸಿದೆ. ದೇಶದಲ್ಲಿಯೇ ಮೊದಲ ಬಲಿ ಪ್ರಕರಣದ ದಾಖಲಾಗಿದ್ದು ಕರ್ನಾಟಕದಲ್ಲಿ. ಈಗ ಕಾಂಗ್ರೆಸ್ ನಾಯಕರೊಬ್ಬರು ಆತಂಕ ಮೂಡಿಸುವ ಟ್ವೀಟ್ ಮಾಡಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾನುವಾರ ಜನತಾ ಕರ್ಫ್ಯೂವನ್ನು ನಡೆಸಲಾಗುತ್ತಿದೆ. ಇಂತಹ ಸಮಯದಲ್ಲಿಯೇ ಒಂದು ಟ್ವೀಟ್ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಚ್. ಕೆ. ಪಾಟೀಲ್ ಭಾನುವಾರ ಒಂದು ಟ್ವೀಟ್ ಮಾಡಿದ್ದಾರೆ. "ಸರ್ಕಾರ ನಗರದ ಅಗತ್ಯವಿರುವ ಹೋಟೆಲ್ಗಳನ್ನು ವಶಪಡಿಸಿಕೊಂಡು ಕ್ವಾರಂಟೈನ್ ಮಾಡುವುದು ಅನಿವಾರ್ಯ" ಎಂದು ಸಲಹೆ ಮಾಡಿದ್ದಾರೆ.
"ರಾಜ್ಯಕ್ಕೆ ಕಳೆದ 2 ದಿನಗಳಿಂದ ಇಂದು ಮಧ್ಯರಾತ್ರಿ ವರೆಗೆ ಇಟಲಿ ಸೇರಿ ಹೊರದೇಶಗಳಿಂದ 22,000 ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಇವರಿಂದ ಸುರಕ್ಷಿತವಿರಲು ಸರ್ಕಾರ ತುರ್ತಾಗಿ ನಗರದ ಅಗತ್ಯವಿರುವ ಹೋಟೆಲಗಳನ್ನು ವಶಪಡಿಸಿಕೊಂಡು ಕ್ವಾರಂಟೈನ್ ಮಾಡುವುದು ಅನಿವಾರ್ಯ" ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.

ಜನತಾ ಕರ್ಫ್ಯೂ ಸಾಕಾಗುವುದಿಲ್ಲ
ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್. ಕೆ. ಪಾಟೀಲ್, "ಜನತಾ ಕರ್ಫ್ಯೂ ಉತ್ತಮ ತೀರ್ಮಾನ ಅದನ್ನು ನಾವು ಸಹ ಪಾಲಿಸುತ್ತೇವೆ. ಆದರೆ, ಇಷ್ಟು ಮಾತ್ರ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಆತಂಕಕಾರಿ ವಿಚಾರ
ಎಚ್. ಕೆ. ಪಾಟೀಲ್ ಅವರು, "22 ಸಾವಿರ ಜನರು ವಿದೇಶದಿಂದ ಆಗಮಿಸುತ್ತಿದ್ದಾರೆ. ಇಟಲಿಯಿಂದ 231 ಜನರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದು ಆತಂಕಕಾರಿ ವಿಚಾರ, ವಿದೇಶದಿಂದ ಬಂದವರನ್ನು ಒಂದೇ ಕ್ಯಾಂಪ್ನಲ್ಲಿ 14 ದಿನ ಇಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕು" ಎಂದರು.

ಹೋಟೆಲ್ಗಳನ್ನು ವಶಕ್ಕೆ ತೆಗೆದುಕೊಳ್ಳಿ
"ಇಟಲಿಯಿಂದ ಬಂದವರು ಸಾರ್ವಜನಿಕ ಕ್ಷೇತ್ರದಲ್ಲಿ ತಿರುಗಾಡಿದರೆ ಪರಿಸ್ಥಿತಿ ಕಷ್ಟವಾಗಬಹುದು. ಫೈವ್ ಸ್ಟಾರ್ ಹೋಟೆಲ್ಗಳನ್ನು ಸರ್ಕಾರ ವಶಕ್ಕೆ ಪಡೆದು ವಿದೇಶಗಳಿಂದ ಬಂದವರನ್ನು ಅಲ್ಲಿ ಇಡುವ ಕೆಲಸ ಮಾಡಬೇಕು" ಎಂದು ಎಚ್. ಕೆ. ಪಾಟೀಲ್ ಕರೆ ನೀಡಿದರು.

ಎಚ್. ಕೆ. ಪಾಟೀಲ್ ಆತಂಕ
"ನಾನು ತಪ್ಪು ಮಾಹಿತಿ ನೀಡಿದ್ದೇನೆ ಎಂದರೆ ಸರ್ಕಾರವೇ ಹೇಳಲಿ. ವಿದೇಶದಿಂದ ಎಷ್ಟು ಜನರು ಬಂದಿದ್ದಾರೆ. ಎಂದು. ರಾಜ್ಯದ ಗಡಿಗಳನ್ನು ಬಂದ್ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಆದರೆ, ವಿದೇಶದಿಂದ ಜನರು ಬರುತ್ತಲೇ ಇದ್ದಾರೆ" ಎಂದು ಎಚ್. ಕೆ. ಪಾಟೀಲ್ ಆತಂಕ ವ್ಯಕ್ತಪಡಿಸಿದರು.












Click it and Unblock the Notifications