ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ: ಇನ್ನು ಬಿಎಸ್ವೈ, ಡಿಕೆಶಿ?
ರಾಜಕೀಯ ನಿಂತ ನೀರಲ್ಲ, ಇಲ್ಲಿ ಯಾರಿಗೂ ಯಾರೂ ಶತ್ರುಗಳಲ್ಲ ಎನ್ನುವುದಕ್ಕೆ ಪೂರಕವಾದ ವಿದ್ಯಮಾನಗಳು ಬಹಳಷ್ಟು ಬಾರಿ ನಡೆದಿದೆ. ಸಾರ್ವಜನಿಕವಾಗಿ ಒಬ್ಬರೊನ್ನೊಬ್ಬರು ಕೀಳು ಮಟ್ಟದಲ್ಲಿ ಆರೋಪಿಸಲು ಹೇಸದ ಪಕ್ಷಗಳು ತಮಗೆ ಬೇಕಾದಾಗ ಮಾತ್ರ ಒಂದಾಗುತ್ತವೆ.
ಅದು ಬಿಬಿಎಂಪಿ ವಿಚಾರದಲ್ಲಾಗಿರಬಹುದು ಅಥವಾ ಇತ್ತೀಚೆಗೆ ಮುಕ್ತಾಯಗೊಂಡ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ವಿಚಾರದಲ್ಲಾಗಿರಲಿ, ನಡೆದಿದ್ದು ಸಮಯಸಾಧಕ ರಾಜಕಾರಣ. (ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ 21 ಅಭ್ಯರ್ಥಿಗಳು)
ಈಗ ಮತ್ತೊಂದು ಕುತೂಹಲದ ಚುನಾವಣೆಗೆ ರಾಜ್ಯ ಸಾಕ್ಷಿಯಾಗುತ್ತಿದೆ. ಜೂನ್ ಹನ್ನೊಂದರೊಂದು ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತ್ತು ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದೆ.
ಸಂಖ್ಯಾಬಲಕ್ಕೆ ಮೀರಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ, ಓಲೈಕೆ ಮತ್ತು ಸಮಯಾಧಾರಿತ ರಾಜಕಾರಣದ ಜೊತೆಗೆ ಸೂಟ್ ಕೇಸ್ ಸಂಸ್ಕೃತಿಯ ಬಗ್ಗೆ ಮಾತು ಕೇಳಿ ಬರುತ್ತಿದೆ.
ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲೇ ಬೇಕೆಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಆಖಾಡಕ್ಕಿಳಿದ ಮೇಲೆ, ಮೂರು ಪಕ್ಷಗಳ ನಡುವಣ ಚುನಾವಣಾ ಕದನ ಇನ್ನಷ್ಟು ಕುತೂಹಲ ಹುಟ್ಟುಹಾಕಿದೆ.
ಡಿ ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಜೊತೆ ಹಲವು ಸುತ್ತಿನ ಮಾತುಕತೆ ನಡೆದಿದೆ ಎನ್ನುವ ಸುದ್ದಿ ಭಾರೀ ಮಹತ್ವ ಪಡೆದುಕೊಂಡಿದೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿವುಸುವುದು ಒಂದು ಉದ್ದೇಶವಾಗಿದ್ದರೆ, ದೇವೇಗೌಡ್ರನ್ನು ಮಣಿಸುವುದು ಡಿ ಕೆ ಶಿವಕುಮಾರ್ ಅವರ ಪರಮೋದ್ದೇಶ ಎನ್ನುವುದು ಗೌಪ್ಯವಾಗಿ ಉಳಿದಿಲ್ಲ. (ಗೌಡ್ರ ಕ್ರಾಸ್ ವೋಟಿಂಗ್ ರಾಜಕೀಯ ದಾಳ)
ಮೇಲ್ಮನೆ ಚುನಾವಣೆಯ ಕೆಲವೊಂದು ಕುತೂಹಲಕಾರಿ ಲೆಕ್ಕಾಚಾರ ಹೀಗಿದೆ.. ಸ್ಲೈಡಿನಲ್ಲಿ..
ಗೀವ್ ಎಂಡ್ ಟೇಕ್ ಪಾಲಿಸಿ
ಗೀವ್ ಎಂಡ್ ಟೇಕ್ ಪಾಲಿಸಿ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವ ನಿರ್ಧಾರಕ್ಕೆ ಬಿಎಸ್ವೈ ಮತ್ತು ಡಿಕೆಶಿ ಬಂದಿದ್ದಾರೆ ಎನ್ನುವ ಸುದ್ದಿಯಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೌಖಿಕ ಅನುಮತಿಯೂ ಇದೆ ಎನ್ನಲಾಗುತ್ತಿದೆ.
ಡಿ ಕೆ ಶಿವಕುಮಾರ್ ಮತ್ತು ಯಡಿಯೂರಪ್ಪ
ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪರಸ್ಪರ ಎಷ್ಟೇ ಕಿತ್ತಾಡಿಕೊಂಡರೂ, ಡಿ ಕೆ ಶಿವಕುಮಾರ್ ಮತ್ತು ಯಡಿಯೂರಪ್ಪ ಒಬ್ಬರೊನ್ನೊಬ್ಬರು ಆರೋಪ, ಪ್ರತ್ಯರೋಪ ಮಾಡಿಕೊಂಡ ಉದಾಹರಣೆಗಳು ವಿರಳ. ಯಡಿಯೂರಪ್ಪ ಸಿಎಂ ಆದಾಗಲೂ, ಡಿಕೆಶಿ ವಿರುದ್ದ ಹಲವು ಹಗರಣಗಳ ಕುರಿತು ತನಿಖೆಗೆ ಒತ್ತಡ ಬಂದಿದ್ದರೂ, ಬಿಎಸ್ವೈ ಮನಸ್ಸು ಮಾಡಿರಲಿಲ್ಲ.
ಎಚ್ಡಿಕೆ ಮತ್ತು ಆರ್ ಅಶೋಕ್ ಮಾತುಕತೆ
ಎಚ್ಡಿಕೆ ಮತ್ತು ಆರ್ ಅಶೋಕ್ ಮಾತುಕತೆ ನಡೆಸಿ, ಅಂತಿಮ ನಿರ್ಧಾರಕ್ಕೆ ಬಂದಿದ್ದರು. ಇನ್ನೇನು ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಅಂತಿಮವಾಯಿತು ಎನ್ನುವಷ್ಟರಲ್ಲೇ ಈ ಮೈತ್ರಿ ಮುರಿದುಬಿದ್ದಿದೆ. ರಾತ್ರೋರಾತ್ರಿ ಡಿ ಕೆ ಶಿವಕುಮಾರ್, ಬಿಎಸ್ವೈ ಜೊತೆ ಮಾತುಕತೆ ನಡೆಸಿ ಮನವೊಲಿಸಿ ಹೂಡಿದ ದಾಳ ಇದಾಗಿತ್ತು.
ಯಡಿಯೂರಪ್ಪನವರ ಜೊತೆ ಡಿಕೆಶಿ ಮಾತುಕತೆ
ಮೈತ್ರಿ ಮುರಿದ ಬಗ್ಗೆ ಎಚ್ಡಿಕೆ, ಅಶೋಕ್ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಎಚ್ಡಿಕೆ, ನಮ್ಮ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ನಡೆಯುತ್ತಿಲ್ಲ. ಶಿವಕುಮಾರ್, ಯಡಿಯೂರಪ್ಪನವರ ಜೊತೆ ನಡೆಸುತ್ತಿರುವ ಮಾತುಕತೆ ಊರಿಗೆಲ್ಲಾ ಗೊತ್ತಿರುವ ವಿಚಾರ ಎಂದಿದ್ದರು. ಅಶೋಕ್ ಕೂಡಾ ಮೈತ್ರಿ ಮುರಿದಿದ್ದನ್ನು ಖಚಿತ ಪಡಿಸಿದ್ದರು.
ಬಿಎಸ್ವೈ ಪರಮಾಪ್ತ ಲೆಹರ್ ಸಿಂಗ್
ಕಾಂಗ್ರೆಸ್ ಹೊತೆ ಹೊಂದಾಣಿಕೆಗೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಿದ್ದರೂ, ಯಡಿಯೂರಪ್ಪ ಎಲ್ಲವನ್ನೂ ಸದ್ಯದ ನಿಯಂತ್ರಣಕ್ಕೆ ತಂದಿದ್ದಾರೆ ಎನ್ನುವ ಸುದ್ದಿಯಿದೆ. ಜೊತೆಗೆ, ಕೊನೇ ಕ್ಷಣದಲ್ಲಿ ಚುನಾವಣೆಗೆ ಸ್ಪರ್ಧಿಸಿದ ತಮ್ಮ ಪರಮಾಪ್ತ ಲೆಹರ್ ಸಿಂಗ್ ಅವರನ್ನು ವಿಜಯಿಯನ್ನಾಗಿ ಮಾಡುವುದು ಯಡಿಯೂರಪ್ಪನವರ ಗುರಿ ಕೂಡಾ.
ಜೆಡಿಎಸ್ ಶಾಸಕರು
ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಹೆಚ್ಚುವರಿ ಅಭ್ಯರ್ಥಿಗಳನ್ನು ವಿಜೇತರನ್ನಾಗಿ ಮಾಡಲು ಅವಲಂಬಿತರಾಗಿರುವುದು ವೋಟ್ ಎಕ್ಸ್ ಚೇಂಜ್, ಪಕ್ಷೇತರ ಶಾಸಕರು ಮತ್ತು ಜೆಡಿಎಸ್ ಶಾಸಕರನ್ನು. ಇದರ ಜೊತೆಗೆ ಮೂರು ಪಕ್ಷಗಳಿಗೆ ಕಾಡುತ್ತಿರುವ ಇನ್ನೊಂದು ಭೀತಿಯೆಂದರೆ ಕ್ರಾಸ್ ವೋಟಿಂಗ್.
ಜೆಡಿಎಸ್ ಅಭ್ಯರ್ಥಿ ಫಾರೂಕ್
ಮೇಲ್ನೋಟಕ್ಕೆ ಕಾಂಗ್ರೆಸ್ಸಿನ ಮೂವರು ಮತ್ತು ಬಿಜೆಪಿಯ ಒಬ್ಬರು ರಾಜ್ಯಸಭೆಗೆ ಆಯ್ಕೆಯಾಗಬಹುದು ಎನ್ನುವುದಾದರೂ, ಜೆಡಿಎಸ್ ಕಣಕ್ಕಿಳಿಸಿರುವ ಅಭ್ಯರ್ಥಿ ಫಾರೂಕ್ 'ಭಾರೀ ಕುಳ' ಆಗಿರುವುದರಿಂದ ಲೆಕ್ಕಾಚಾರ ಉಲ್ಟಾ ಹೊಡೆಯುವ ಭಯ ಕಾಂಗ್ರೆಸ್ ಮತ್ತು ಬಿಜೆಪಿಗೆ ಕಾಡುತ್ತಿದೆ.
ಸಿದ್ದರಾಮಯ್ಯನವರಿಗೆ ನಿರ್ಣಾಯಕ
ಪಕ್ಷದ ಮೂರನೇ ಅಭ್ಯರ್ಥಿ ಕೆ ಸಿ ರಾಮಮೂರ್ತಿಯವರನ್ನು ಗೆಲ್ಲಿಸುವುದು ಸಿಎಂ ಸಿದ್ದರಾಮಯ್ಯನವರಿಗೆ ನಿರ್ಣಾಯಕ. ಹೈಕಮಾಂಡ್ ಅವರನ್ನು ಒತ್ತಾಯಪೂರ್ವಕವಾಗಿ ಒಪ್ಪಿಸಿದ್ದ ಸಿದ್ದುಗೆ, ಮೂರನೇ ಅಭ್ಯರ್ಥಿ ಗೆಲ್ಲದೇ ಇದ್ದ ಪಕ್ಷದಲ್ಲಿ ತೀವ್ರ ಮುಜುಗರ ನಿಶ್ಚಿತ. ಹಾಗಾಗಿ, ಸಿಎಂ ಮತ್ತು ಸಂಪುಟ ಸಹದ್ಯೋಗಿಗಳು ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ.