ಮುಂದಿನ ವರ್ಷ ಸರ್ಕಾರ ಪತನವಾಗುತ್ತಾ? ಭವಿಷ್ಯ ನುಡಿದ ಎಚ್ಡಿಕೆ
ರಾಜ್ಯ ರಾಜಕಾರಣದಲ್ಲಿ ಹಗರಣಗಳು ಹೆಚ್ಚು ಸದ್ದು ಮಾಡುತ್ತಿದ್ದು, ಒಂದೆಡೆ ಸಿಎಂ ಬದಲಾವಣೆ, ಸರ್ಕಾರ ಪತನದ ಮಾತುಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಇದೀಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಫೋಟಕ ಭವಿಷ್ಯ ನುಡಿದಿರುವುದು ಚರ್ಚೆಗೆ ಗ್ರಾಸವಾಗಿದೆ. ಇವರ ಹೇಳಿಕೆಯು ಶೀಘ್ರದಲ್ಲೇ ಸರ್ಕಾರ ಪತನವಾಗಲಿದೆ ಎನ್ನುವ ಕಡೆಗೆ ಬೊಟ್ಟು ಮಾಡುವಂತಿದೆ.
ಶಿವಮೊಗ್ಗದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಯಾವ ಸಮಯದಲ್ಲಾದರೂ ಮತ್ತೆ ಎಲೆಕ್ಷನ್ ಬರಬಹುದು. ಎಲ್ಲದಕ್ಕೂ ರೆಡಿಯಾಗಿರಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ. ಮುಂದಿನ ಎಲೆಕ್ಷನ್ 2028ರಲ್ಲೇ ಬರಬಹುದು, 2026ರಲ್ಲಿ ಅಥವಾ ಮುಂದಿನ ವರ್ಷವಾದ 2025ರಲ್ಲೇ ಬರಬಹುದು. ಯಾವುದಕ್ಕೂ ಮುಂದಿನ ಚುನಾವಣೆಗೆ ನೀವೆಲ್ಲ ಈಗಿನಿಂದಲೇ ಸಿದ್ಧರಾಗಿರಿ ಎಂದು ಹೇಳಿದ್ದಾರೆ.

ರಾಜ್ಯದ ಜನತೆಯಲ್ಲಿ ಈ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನ ಇದೆ. ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡುತ್ತಲೇ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಆದರೆ, ಇಲ್ಲಿ ಅಭಿವೃದ್ಧಿ ಕಾಣದೆ ಜನ ಬೇಸತ್ತಿದ್ದಾರೆ. ಹಾಗಾಗಿ ಮುಂದಿನ ಮೂರೂವರೆ ವರ್ಷದವರೆಗೂ ಅವಧಿಯಿದ್ದರೂ ಕಾಂಗ್ರೆಸ್ ನಾಯಕರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಮಾತ್ರವೇ ಒಳ್ಳೆಯ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ಹುಟ್ಟಿಸಬೇಕು. ನಮ್ಮ ಬಿಜೆಪಿ ಜೊತೆಗಿನ ಮೈತ್ರಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಜೆಡಿಎಸ್ನ ಬೇರು ಗಟ್ಟಿಯಾಗಿದೆ. ಆದರೆ, ಕೆಲವರು ನಮ್ಮ ಪಕ್ಷಕ್ಕೆ ಬರುತ್ತಾರೆ. ಎಲೆಕ್ಷನ್ ಮುಗಿದ ಮೇಲೆ ಬಿಟ್ಟು ಹೋಗುತ್ತಾರೆ. ಈ ಕಾರಣದಿಂದಲೇ ನಮ್ಮ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಪ್ರತಿ ಬೂತ್ ಮಟ್ಟದಲ್ಲಿ ಯುವಕರು, ಮಹಿಳೆಯರನ್ನು ಪಕ್ಷಕ್ಕೆ ನೋಂದಣಿ ಮಾಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.

ಇನ್ನು ಕುಮಾರಸ್ವಾಮಿ ಅವರ ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಒಂದು ವರ್ಷಗಳನ್ನು ಪೂರೈಸಿದೆ. ಈ ಸಮಯದಲ್ಲೇ ಕುಮಾರಸ್ವಾಮಿ ಅವರ ಈ ಹೇಳಿಕೆಯು ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬರ್ಥ ನೀಡುತ್ತಿದೆ.
ವಾಲ್ಮೀಕಿ ಹಗರಣ, ಮುಡಾ ಹಗರಣಗಳು ರಾಜ್ಯ ಸರ್ಕಾರಕ್ಕೆ ಸವಾಲೊಡ್ಡಿದೆ. ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋಟ್ ಅನುಮತಿ ನೀಡಿದ ವಿಚಾರ ದೊಡ್ಡ ಮಟ್ಟದಲ್ಲಿ ವಿರೋಧ ಎದುರಿಸಿತ್ತು. ಬಳಿಕ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇಡೀ ಪಕ್ಷವೇ ನಿಂತಿದ್ದಲ್ಲದೆ, ಸರ್ಕಾರ ಭದ್ರವಾಗಿದೆ ಎಂಬ ಸಂದೇಶ ನೀಡಿದ್ದರು.












Click it and Unblock the Notifications