ಬೆಳಗಾವಿಯಲ್ಲಿ ಅಮಿತ್ ಶಾ ಭಾಷಣ ಕೇಳಿ ನಗು ತಡೆಯಲಾಗಲಿಲ್ಲ!
ಬೆಂಗಳೂರು, ಜ 18: "ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಬೆಳಗಾವಿಯ ಭಾಷಣ ನಿನ್ನೆ ಕೇಳುತ್ತಿದ್ದೆ, ನನಗೆ ನಗು ತಡೆಯಲಾಗಲಿಲ್ಲ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಸಿದ ನಂತರ ಮಾತನಾಡುತ್ತಿದ್ದ ಕುಮಾರಸ್ವಾಮಿ, "32 ಪ್ರಮುಖ ನಾಯಕರ ಸಭೆ ಕರೆಯಲಾಗಿತ್ತು. ವೈಎಸ್ವಿ ದತ್ತಾ ಕುಟುಂಬದವರಿಗೆ ಆರೋಗ್ಯ ಸಮಸ್ಯೆ ಕಾರಣ ಬಂದಿಲ್ಲ. ದೇವೇಂದ್ರ ಚೌಹಾಣ್ ಡಿಸಿಎಂ ಕಾರ್ಯಕ್ರಮ ಇರುವ ಕಾರಣ ಬಂದಿಲ್ಲ"ಎಂದು ಎಚ್ಡಿಕೆ ಹೇಳಿದರು.
"ನಿನ್ನೆ ಗೃಹ ಸಚಿವ ಅಮಿತ್ ಶಾ ಭಾಷಣ ನೋಡಿದೆ, ಭಾಷಣ ನೋಡಿ ನನಗೆ ನಗು ಬರುತ್ತಿತ್ತು. ಕೊಪ್ಪಳದಲ್ಲಿ ಆಟಿಕೆ ತಯಾರಿಕೆಗೆ ನಾನು ಯೋಜನೆ ತಂದಿದ್ದೆ. ಕಾಂಪೀಟ್ ವಿತ್ ಚೈನಾ ಯೋಜನೆ ತಂದಿದ್ದೆ. ಕೊಪ್ಪಳದಲ್ಲಿ ಆಟಿಕೆ ತಯಾರಿಕೆ ಕೇಂದ್ರ ತಂದಿದ್ದು ನಾನು, ಆದರೆ ಬಿಜೆಪಿ ನಿನ್ನೆ ಅಡಿಗಲ್ಲು ಹಾಕಿದ್ದಾರೆ" ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

"ಸರಕಾರದವರು ಸೌಜನ್ಯಕ್ಕೂ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ. ಮಾನವೀಯತೆ ಇಲ್ಲದ ಸರಕಾರವಿದು, ಬಹಳ ಮೈಲೇಜ್ ಪಡೆದುಕೊಂಡ ನರೇಂದ್ರ ಮೋದಿಯವರ ಆತ್ಮ ನಿರ್ಭರ್ ನನ್ನ ಯೋಜನೆಯ ಕಾಪಿ. ಇನ್ನು, ಕಿಸಾನ್ ಸಮ್ಮಾನ್ ತೆಲಂಗಾಣದ ಮಾದರಿ ಅನುಕರಣೆ"ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
"ಕಾಂಗ್ರೆಸ್ ಹಾಗೂ ಬಿಜೆಪಿಯವರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾವು ಅತಿಹೆಚ್ಚು ಕಡೆ ಗೆದ್ದಿದ್ದೇವೆ ಅಂತಾರೆ, ಆದರೆ, ವಾಸ್ತವಾಂಶ ಏನೆಂಬುದನ್ನು ನಾನು ಅರಿತಿದ್ದೇನೆ" ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.
"ಅಮಿತ್ ಶಾ ಡಬಲ್ ಇಂಜಿನ್ ತರುತ್ತೇವೆ ಎಂದಿದ್ದಾರೆ. ಡಬಲ್ ಇಂಜಿನ್ ರಾಜ್ಯವನ್ನು ಹಾಳು ಮಾಡಿವೆ, ಬಿಜೆಪಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ನಾವು ಭಯ ಪಡುವ ಅವಶ್ಯಕತೆ ಇಲ್ಲ"ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.












Click it and Unblock the Notifications