ಪ್ರಗತಿಪರರ, ವಿರೋಧಿಗಳ ಎಚ್ಚರಿಕೆಗೆ ಬೆದರಿ, ಅಮಿತ್ ಶಾ ರ್ಯಾಲಿ ರದ್ದು!
ಹೇಳಿಕೇಳಿ ಮಂಗಳೂರು ಕೇಸರಿಯ ಭದ್ರಕೋಟೆ. ದೇಶದ ಗೃಹಸಚಿವರು, ಅದೂ ಇತ್ತೀಚಿನ ದಿನಗಳಲ್ಲಿ ಈ ದೇಶದ ಪ್ರಧಾನಿ ಮೋದಿಯೋ ಅಥವಾ ಇವರೇ ಎನ್ನುವಂತೆ ಸುದ್ದಿಯಲ್ಲಿರುವ ಅಮಿತ್ ಶಾ ಅವರ ಸಾರ್ವಜನಿಕ ಸಭೆ ಅಲ್ಲಿ ರದ್ದಾಗಿದೆ ಎಂದರೆ ಏನು ಕಾರಣವಿರಬಹುದು?
ಪೌರತ್ವ ತಿದ್ದುಪಡಿ ಮಸೂದೆಯ ವಿಚಾರದಲ್ಲಿ ಜನಜಾಗೃತಿ ಮೂಡಿಸುತ್ತಿರುವ ಬಿಜೆಪಿಗೆ, ಪ್ರಮುಖವಾಗಿ ಮುಸ್ಲಿಂ ಸಮುದಾಯದಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಖುದ್ದು ಕೇಂದ್ರ ಗೃಹ ಸಚಿವರಿಗೂ ಇದರ ಅನುಭವವಾಗಿದೆ.
ಈ ಮಸೂದೆ, ತಮ್ಮ ಸಮುದಾಯದ ವಿರುದ್ದವಾಗಿದೆ ಎನ್ನುವುದು ಈಗಾಗಲೇ ಮುಸ್ಲಿಮರ ಮನಸ್ಸಿನಲ್ಲಿ ಬೇರೂರಿಯಾಗಿದೆ. ಇಂತಹ ಸಮಯದಲ್ಲಿ ತಡವಾಗಿಯಾದರೂ, ಅವರನ್ನು ಓಲೈಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಅದರ ಭಾಗವಾಗಿಯೇ, ಮಂಗಳೂರಿಗೆ ಬಂದು, ಅಮಿತ್ ಶಾ ಭಾಷಣ ಮಾಡಬೇಕಾಗಿತ್ತು.
ಅಮಿತ್ ಶಾ, ಮಂಗಳೂರಿಗೆ ಬರುತ್ತಾರೆ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಪ್ರಗತಿಪರ ಹೋರಾಟಗಾರರು ಮತ್ತು ಕಾಂಗ್ರೆಸ್ ಮುಖಂಡರು ಧುತ್ತೆಂದು ಎದ್ದು ಕೂತಿದ್ದಾರೆ. ಯಾವ ಕಾರಣಕ್ಕೂ, ಅಮಿತ್ ಶಾ ಅವರನ್ನು ಮಂಗಳೂರಿಗೆ ಬರಲು ಬಿಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ.

ಮಂಗಳೂರು ಸಾರ್ವಜನಿಕ ಸಭೆ ರದ್ದು
ಮೊದಮೊದಲು ಇದ್ಯಾವುದಕ್ಕೂ ಜಗ್ಗದ ಬಿಜೆಪಿಯವರು, ಈಗ ಮಂಗಳೂರು ಸಾರ್ವಜನಿಕ ಸಭೆಯನ್ನು ರದ್ದುಪಡಿಸಿ, ಬಿಜೆಪಿಯ ಇನ್ನೊಂದು ಭದ್ರಕೋಟೆ, ರಾಜ್ಯದ ವಾಣಿಜ್ಯ ನಗರಿಯೆಂದೇ ಹೆಸರಾಗಿರುವ ಹುಬ್ಬಳ್ಳಿಯಲ್ಲಿ ನಡೆಸಲು ನಿರ್ಧರಿಸಿದೆ. ಈ ಬಗ್ಗೆ ಬಿಜೆಪಿಯ ಅಧಿಕೃತ ಪ್ರಕಟಣೆಯೂ ಹೊರಬಿದ್ದಿದೆ.

ಹುಬ್ಬಳ್ಳಿಯ ನೆಹರೂ ಮೈದಾನ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ, ಜನವರಿ ಹದಿನೆಂಟರಂದು ಅಮಿತ್ ಶಾ ರ್ಯಾಲಿ ನಡೆಯಲಿದೆ. ಪೌರತ್ವ ಕಾಯಿದೆ ಜಾರಿ ತಂದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಲು ವಿವಿಧ ಕಡೆ ಸಾರ್ವಜನಿಕ ಸಭೆಯನ್ನು ನಡೆಸಲು ಬಿಜೆಪಿ ಉದ್ದೇಶಿಸಿದೆ. ಅದರ ಭಾಗವಾಗಿ, ರಾಜ್ಯದಲ್ಲಿ ನಡೆಯುತ್ತಿರುವ ಸಮಾವೇಶವಿದು.

ಕರಾವಳಿಯಲ್ಲಿ ಮತ್ತೆ ಶಾಂತಿ, ನೆಮ್ಮದಿ ಹದಗೆಡುವ ಸಾಧ್ಯತೆ
ಅಮಿತ್ ಶಾ ಅವರ ಉದ್ದೇಶಿತ ಮಂಗಳೂರು ಭೇಟಿಯಿಂದ ಕರಾವಳಿಯಲ್ಲಿ ಮತ್ತೆ ಶಾಂತಿ, ನೆಮ್ಮದಿ ಹದಗೆಡುವ ಸಾಧ್ಯತೆಯಿದೆ ಎಂದು ಆಕ್ಷೇಪ ಎತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ, ಜಿಲ್ಲೆಯಾದ್ಯಂತ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಉಪವಾಸ ಕೂರುವುದಾಗಿ ಐವಾನ್ ಡಿಸೋಜ ಹೇಳಿದ್ದರು. ಇದರ ಜೊತೆಗೆ, ಪ್ರಗತಿಪರ ಸಂಘಟನೆಯೂ ಪ್ರತಿಭಟನೆ ನಡೆಸುವುದಾಗಿ ಹೇಳಿತ್ತು.

ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
"ಅಮಿತ್ ಶಾ ಈ ದೇಶದ ಗೃಹ ಸಚಿವರು ಹಾಗೂ ರಾಷ್ಟ್ರ ನಾಯಕರು, ಅವರು ನಮ್ಮ ಜಿಲ್ಲೆಗೆ ಬರಬೇಕು, ಬಂದೇ ಬರುತ್ತಾರೆ'' ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದರು. ಜೊತೆಗೆ, "ಐವಾನ್ ಡಿಸೋಜಾ ಅವರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದ್ದಾರೆ, ಉಪವಾಸ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು" ಎಂದು ಬೊಮ್ಮಾಯಿ ವ್ಯಂಗ್ಯವಾಡಿದ್ದರು.

ಕರಾವಳಿಯಲ್ಲೇ ಬಿಜೆಪಿ, ಅಮಿತ್ ಶಾ ಅವರ ರ್ಯಾಲಿಯನ್ನು ನಡೆಸಲು ಹಿಂಜರಿಯಿತೇ
ಈಗ, ಈ ಎಲ್ಲಾ ಅನಗತ್ಯ ವಿವಾದ ಬೇಡವೆಂದು ಅಮಿತ್ ಶಾ ರ್ಯಾಲಿ, ಮಂಗಳೂರಿನಿಂದ ಹುಬ್ಬಳ್ಳಿಗೆ ಶಿಫ್ಟ್ ಆಗಿದೆ. ಒಟ್ಟಿನಲ್ಲಿ, ಹಿಂದುತ್ವ ಪ್ರಯೋಗಶಾಲೆ ಎಂದು ಕರೆಯಲ್ಪಡುವ ಕರಾವಳಿಯಲ್ಲೇ ಬಿಜೆಪಿ, ಅಮಿತ್ ಶಾ ಅವರ ರ್ಯಾಲಿಯನ್ನು ನಡೆಸಲು ಹಿಂಜರಿಯಿತೇ ಎನ್ನುವುದೀಗ ಪ್ರಶ್ನೆಯಾಗಿ ಉಳಿದಿರುವುದು.












Click it and Unblock the Notifications