ಕರ್ನಾಟಕ: ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಒಪ್ಪಿಗೆ, ಆ ಹೆದ್ದಾರಿ ಯಾವವು? ತಿಳಿಯಿರಿ
ಕರ್ನಾಟಕ ರಾಜ್ಯದ ವಿವಿಧೆಡೆ ಇರುವು ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ. ಎಷ್ಟು ಕೋಟಿ ಹಣದಲ್ಲಿ ಎಲ್ಲಿ ಹೆದ್ದಾರಿಗಳು ಅಭಿವೃದ್ಧಿ ಆಗಲಿವೆ, ಪ್ರಯೋಜನೆ ಯಾರಿಗೆ ಎಂದು ತಿಳಿಯಿರಿ.
ನವದೆಹಲಿ, ಫೆಬ್ರವರಿ 09: ಕರ್ನಾಟಕ ರಾಜ್ಯದ ವಿವಿಧೆಡೆ ಇರುವು ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಲಿವೆ. ಆದಷ್ಟು ಶೀಘ್ರವೇ ಕೋಟ್ಯಂತರ ರೂಪಾಯಿ ಹಣದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದ್ದು, ಈ ಸಂಬಂಧದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಬುಧವಾರ ಈ ಕುರಿತಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಸರಣಿ ಟ್ವೀಟ್ ಮಾಡಿದ್ದಾರೆ. ಗತಿ ಶಕ್ತಿ ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಕರ್ನಾಟಕ ಪ್ರಗತಿಯ ಪಥದಲ್ಲಿದೆ ಎಂದು ಅವರ ತಿಳಿಸಿದ್ದಾರೆ.
ಗತಿ ಶಕ್ತಿ ಯೋಜನೆಯಡಿ ಕರ್ನಾಟಕದ ಒಟ್ಟು ಸುಮಾರು ಆರು ಕಡೆಗಳಲ್ಲಿ ಅಂದಾಜು ಮೊತ್ತ 3,579 ಕೋಟಿ ಹಣದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳಲಿವೆ. ಈ ಸಂಬಂಧದ ಪ್ರಸ್ತಾವ ಹಾಗೂ ಕಾಮಗಾರಿ ಆರಂಭಕ್ಕೆ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯವು ಅನುಮತಿ ನೀಡಿದೆ.

ನೆರೆ ರಾಜ್ಯ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿಯ ರಾಷ್ಟ್ರೀಯ ಹೆದ್ದಾರಿ 166 E ಯಲ್ಲಿ ಕನಮಡಿಯಿಂದ ಬಿಜ್ಜೋಡಿ ಮತ್ತು ತಿಕೋಟಾ ದ್ವಿಪಥ ರಸ್ತೆಯು ರೂ.196.05 ಕೋಟಿ ಹಣದಲ್ಲಿ ವಿಸ್ತರಣೆಯಾಗಲಿದೆ. ಇನ್ನು ಮಹಾರಾಷ್ಟ್ರ ಗಡಿಯ ರಾಷ್ಟ್ರೀಯ ಹೆದ್ದಾರಿ 548 B ಯಲ್ಲಿ ಮುರುಂ-ಐಬಿ ವೃತ್ತದವರೆಗೆ ರೂ.957 ಕೋಟಿ ಅಂದಾಜು ವೆಚ್ಚದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಉತ್ತರ ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಅನುಕೂಲ
ಸರ್ಕಾರದ ಈ ನಿರ್ಧಾಗಳಿಂದ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕದ ಕಲಬುರಗಿ ಭಾಗದ ಜಿಲ್ಲೆಗಳು/ಪಟ್ಟಣಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಬಯಲು ಸೀಮೆ ಭಾಗಗಳಾದ ಕೊಪ್ಪಳ ಹಾಗೂ ಗದಗ ಜಿಲ್ಲೆಗಳ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಭಾನಾಪುರ-ಗದ್ದನಕೇರಿ ವಿಭಾಗದ ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡದಲ್ಲಿ ಬೈಪಾಸ್ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಒಟ್ಟು ಸುಮಾರು 333.96 ಕೋಟಿ ರೂಪಾಯಿ ತಗುಲಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ವೆಚ್ಚ ಮಾಡಲಾಗುತ್ತದೆ.

ಇನ್ನೂ ಮಧ್ಯ ಕರ್ನಾಟಕ ಎನ್ನಲಾಗುವ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಜೇಂದ್ರಗಡದಲ್ಲಿ ಅಂದರೆ ಭೂಸ್ವಾಧೀನ ಒಳಗೊಂಡು ಉಣಚಗೇರಿ-ಕೊಡಗಾನೂರ- ಪುರ್ತಗೇರಿ ಹಾಗೂ ರಾಜೂರ ಒಳಗೊಂಡ ಬೈಪಾಸ್ ನಿರ್ಮಾಣಕ್ಕೆ 110 ಕೋಟಿ ವೆಚ್ಚ ಆಗಲಿದೆ. ಇದರಲ್ಲಿ ಭೂಸ್ವಾಧೀನ ವೆಚ್ಚವೂ ಸೇರಿದೆ ಎಂದು ಸಂಸದರಾದ ಶಿವಕುಮಾರ್ ಉದಾಸಿ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯ ಸರ್ಜಾಪುರದಿಂದ ಪಟ್ಟಣಕಲ್ಲು ವರೆಗಿನ ರಾಷ್ಟ್ರೀಯ ಹೆದ್ದಾರಿಯು ಒಟ್ಟು ಅಂದಾಜು 445.62 ಕೋಟಿ ರೂಪಾಯಿಯಲ್ಲಿ ವಿಸ್ತರಣೆ ಆಗಲಿದೆ ಎಂದು ಗಡ್ಕರಿಯವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮೈಸೂರು ಹಾಗೂ ಕುಶಾಲನಗರ ಭಾಗದಲ್ಲಿ ₹909.86 ಕೋಟಿ ಮೊತ್ತದಲ್ಲಿ ನಾಲ್ಕು ಪಥಗಳ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತದೆ. ಕುಶಾಲನಗರ ಬೈಪಾಸ್ನ ಪ್ರಾರಂಭದಲ್ಲಿ ಗುಡ್ಡೆ
ಹೊಸೂರಿನಿಂದ ಈ ಕಾಮಗಾರಿ ನಡೆಸಲಾಗುತ್ತದೆ. ಅದೇ ರೀತಿಯಲ್ಲಿ, ಇಲವಾಲ-ಕೆ.ಆರ್.ನಗರ ರಸ್ತೆ ಜಂಕ್ಷನ್ನ ಯಲಚಹಳ್ಳಿಯಿಂದ ಶ್ರೀರಂಗ ಪಟ್ಟಣದ ಬೈಪಾಸ್ ವರೆಗೆ ನಾಲ್ಕು ಪಥದ ಹೆದ್ದಾರಿ ಅಭಿವೃದ್ಧಿ ಮಾಡಲಾಗುವುದು. ಈ ಯೋಜನೆಗೆ ₹739.39 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಯೋಜನೆ ಗಳಿಗೆ ಸಹ ಅನುಮೋದನೆ ನೀಡಲಾಗಿದೆ ಎಂದು ಸಚಿವ ಗಡ್ಕರಿ ಅವರು ತಿಳಿಸಿದ್ದಾರೆ.
ರೋಪ್ ವೇ ಯೋಜನೆ: ಗಡ್ಕರಿ ಮಾಹಿತಿ
ಅದೇ ರೀತಿ ಚಾಮುಂಡಿ ಬೆಟ್ಟ ಸೇರಿ ಹದಿನೈದು ಕಡೆಗಳಲ್ಲಿ 'ರೋಪ್ವೇ ಯೋಜನೆ ಆರಂಭಿಸಲಾಗುವುದು. ರೋಪ್ ವೇ ಪ್ರಸ್ತಾವನೆ ಪ್ರಕಾರ ನೋಡುವುದಾದರೆ, ಬೆಂಗಳೂರು ಸಮೀಪದ ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಗಿರಿಧಾಮ, ಮುಳ್ಳಯ್ಯನ ಗಿರಿ (ಚಿಕ್ಕಮಗಳೂರು ಜಿಲ್ಲೆ), ಕೆಮ್ಮಣ್ಣು ಗುಂಡಿ, ಮೈಸೂರಿನ ಚಾಮುಂಡಿ ಬೆಟ್ಟ, ಉಡುಪಿಯ ಕೊಡಚಾದ್ರಿ ಪರ್ವತ, ದೇವರಾಯನ ದುರ್ಗ ಮತ್ತು ಮಧುಗಿರಿ ಕೋಟೆ (ತುಮಕೂರು ಜಿಲ್ಲೆ), ಕೊಪ್ಪಳದ ಅಂಜನಾದ್ರಿ ಬೆಟ್ಟ, ಕೊಡಗು ಜಿಲ್ಲೆಯ ಕುಮಾರ ಪರ್ವತ ಸೇರಿದಂತೆ 15 ಕಡೆಗಳಲ್ಲಿ ರೋಪ್ ವೇ ನಿರ್ಮಾಣವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.












Click it and Unblock the Notifications