ಚುನಾವಣಾ ವರ್ಷದಲ್ಲಿ ಜೆಡಿಎಸ್ ಮೇಲೆ ಸಿಎಂ ಎರಡೆರಡು ಬ್ರಹ್ಮಾಸ್ತ!
ಹಾಲೀ ಸರಕಾರದ ಅವಧಿ ಅಧಿಕೃತವಾಗಿ ಮುಗಿಯಲು ಇನ್ನೂ ಆರು ತಿಂಗಳು ಬಾಕಿಯಿದೆ, ಆದರೂ ಚುನಾವಣೆಯ ಕಾವು ಈಗಾಗಲೇ ಭರ್ಜರಿಯಾಗಿಯೇ ಆರಂಭವಾಗಿದೆ. ತಾವು ಸರಿ, ಇನ್ನೊಂದು ಪಕ್ಷದವರದ್ದು ಬರೀ ಬೊಗಳೆ ಎನ್ನುವ ಹೇಳಿಕೆಗಳನ್ನು ಮೂರೂ ಪ್ರಮುಖ ಪಕ್ಷಗಳು ನೀಡುತ್ತಿವೆ.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವ ಕೆಲವು ಸಮೀಕ್ಷೆಗಳ ನಂತರ, ಹಳೇ ಮೈಸೂರು ಭಾಗದ ಪ್ರಮುಖ ಜೆಡಿಎಸ್ ಮುಖಂಡರ ಮೇಲೆ, ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರಾ? ಜೆಡಿಎಸ್ ಪ್ರಕಾರ ಹೌದು, ಕಾಂಗ್ರೆಸ್ ಪ್ರಕಾರ ಇಲ್ಲ.
ಈ ಎಲ್ಲಾ ಹೌದು, ಅಲ್ಲಗಳ ನಡುವೆ, ಜೆಡಿಎಸ್ ಪಕ್ಷದ ಇಬ್ಬರು ಮುಖಂಡರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ 'ಎಸಿಬಿ' ಅನ್ನೋ ಬ್ರಹ್ಮಾಸ್ತ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಸಿಎಂ ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದ ಹಾಲೀ ಶಾಸಕ, ಹಾಗೂ ಮುಂದಿನ ಚುನಾವಣೆಯಲ್ಲಿ ಸಂಭಾವ್ಯ ಜೆಡಿಎಸ್ ಅಭ್ಯರ್ಥಿ ಜಿ ಟಿ ದೇವೇಗೌಡ ಮತ್ತು ಮಂಡ್ಯ ಸಂಸದ ಪುಟ್ಟರಾಜು ಮೇಲಿನ ಹಳೇ ಕೇಸನ್ನು ಮತ್ತೆ ಓಪನ್ ಮಾಡಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಖುದ್ದು ಪುಟ್ಟರಾಜು ಹೇಳಿದ್ದಾರೆ.
ಚುನಾವಣಾ ಹೊತ್ತಿನಲ್ಲಿ ನಮ್ಮ ಪಕ್ಷದ ಮುಖಂಡರ ಮೇಲೆ ತನಿಖೆಯ ಅಸ್ತ್ರವನ್ನು ಬಳಸಿ ಸಿದ್ದರಾಮಯ್ಯ ನಮ್ಮನ್ನು ಮಟ್ಟಹಾಕಲು ನೋಡುತ್ತಿದ್ದಾರೆ. ಚುನಾವಣೆಯ ಹೊತ್ತಿನಲ್ಲಿ ಇವರು ಆಡುವ ಆಟವನ್ನು ಮತದಾರ ಅರಿಯದೇ ಇರುತ್ತಾನಾ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ. ಏನಿದು ಜೆಡಿಎಸ್ ಮುಖಂಡರ ಮೇಲಿನ ಕೇಸ್, ಮುಂದೆ ಓದಿ..
ಪುಟ್ಟರಾಜು ಕುಟುಂಬದವರಿಂದ ಅಕ್ರಮ ಕಲ್ಲುಗಣಿಗಾರಿಕೆ
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ, ಕ್ಷೇತ್ರದ ಜೆಡಿಎಸ್ ಸಂಸದ ಸಿ ಎಸ್ ಪುಟ್ಟರಾಜು ಮತ್ತು ಅವರ ಕುಟುಂಬದವರು, ಸರಕಾರಕ್ಕೆ ಯಾವುದೇ ರಾಜಧನ ನೀಡದೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ ಎನ್ನುವುದು ಪುಟ್ಟರಾಜು ಅವರ ಮೇಲಿರುವ ಆರೋಪ.
ವರದಿ ನೀಡುವಂತೆ ಅರಣ್ಯ ಇಲಾಖೆಗೆ ಸೂಚನೆ
ಸರಕಾರಕ್ಕೆ ಪುಟ್ಟರಾಜು ವಂಚಿಸುತ್ತಿದ್ದಾರೆಂದು ಸರಕಾರ, ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಹದಿನೈದು ದಿನದೊಳಗೆ ವರದಿ ನೀಡುವಂತೆ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ, ಜಾಗೃತ ದಳಕ್ಕೆ ಸೂಚನೆ ನೀಡಲಾಗಿದೆ ಎನ್ನುವುದು ಪುಟ್ಟರಾಜು ಆರೋಪ. ಅಕ್ರಮ ಗಣಿಗಾರಿಕೆಯ ಬಗ್ಗೆ ಆರ್ಟಿಐ ದೂರು ಬಂದಿರುವ ಹಿನ್ನಲೆಯಲ್ಲಿ ವರದಿ ನೀಡುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎನ್ನುವುದು ಸರಕಾರದ ಸ್ಪಷ್ಟನೆ.
ಜಿ ಟಿ ದೇವೇಗೌಡ ಎಂಡ್ ಟೀಮ್ ಭಾರೀ ಅಕ್ರಮ
ಇನ್ನು ಮೈಸೂರು ಹೊರವಲಯದ ಇಲವಾಲದ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿನ ( ನಾಗನಹಳ್ಳಿ, ಯಲಚನಹಳ್ಳಿ) ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಿ ಟಿ ದೇವೇಗೌಡ ಎಂಡ್ ಟೀಮ್ ಭಾರೀ ಅಕ್ರಮ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಲೋಕಾಯುಕ್ತದಲ್ಲಿದ್ದ ಈ ಪ್ರಕರಣವನ್ನು ಈಗ ದಿಢೀರ್ ಆಗಿ ಎಸಿಬಿಗೆ ವರ್ಗಾಯಿಸಲಾಗಿದೆ.
ಸಿದ್ದರಾಮಯ್ಯನವರಿಗೆ ತೀವ್ರ ಪೈಪೋಟಿ ಇರುವ ಸಾಧ್ಯತೆ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ನನ್ನಿಂದ ತೀವ್ರ ಪೈಪೋಟಿ ಇರುವ ಸಾಧ್ಯತೆಯಿದೆ ಎನ್ನುವ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಹಾಗಾಗಿ ಸೋಲಿನ ಭೀತಿಯಿಂದ ಮುಖ್ಯಮಂತ್ರಿಗಳು ಒಂಬತ್ತು ವರ್ಷದ ಹಳೇ ಕೇಸನ್ನು ಎಸಿಬಿಗೆ ವರ್ಗಾಯಿಸಿದ್ದಾರೆ. ಕಾಂಗ್ರೆಸ್ ಸೇರುವಂತೆ ಅವರ ಒತ್ತಡಕ್ಕೆ ನಾನು ಮಣಿಯದಿದ್ದಾಗ, ನನ್ನ ಈ ಮೇಲೆ ಕ್ರಮ ತೆಗೆದುಕೊಳ್ಳಲು ಸಿಎಂ ಮುಂದಾಗಿದ್ದಾರೆ. ನಾನು ಇದಕ್ಕೆಲ್ಲಾ ತಲೆಕೆಡೆಸಿಕೊಳ್ಳುವುದಿಲ್ಲ - ಜಿ ಟಿ ದೇವೇಗೌಡ.
ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ
ಗಣಿಗಾರಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ಸಂಬಂಧ ಎಸಿಬಿಯವರಾದರೂ ತನಿಖೆ ನಡೆಸಲಿ, ಬೇರೆ ಯಾರಾದರೂ ತನಿಖೆ ನಡೆಸಲಿ. ತನಿಖಾಧಿಕಾರಿಗಳಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಸಿದ್ದರಾಮಯ್ಯನವರದ್ದು ಅವಿವೇಕಿ ಸರಕಾರ, ಇದೊಂದು ರಾಜಕೀಯ ಪ್ರೇರಿತ ನಡೆ - ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿಕೆ
ಚುನಾವಣೆಯ ವೇಳೆ ಹಳೇ ಕೇಸುಗಳಿಗೆ ಸಿದ್ದರಾಮಯ್ಯ ಮರುಜೀವ ನೀಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ಸೇರದಿದ್ದರೆ ಜೈಲಿಗೆ ಹಾಕಿಸ್ತೀನಿ ಎನ್ನುವ ಬೆದರಿಕೆಗಳನ್ನು ಸಿದ್ದರಾಮಯ್ಯ ನಮ್ಮ ಪಕ್ಷದ ಮುಖಂಡರಿಗೆ ಹಾಕುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರನ್ನು ಜೈಲಿಗೆ ಕಳುಹಿಸಲಿ, ಅವರು ಅಲ್ಲಿಂದಲೇ ಸ್ಪರ್ಧಿಸಿ, ಗೆದ್ದು ಬರುತ್ತಾರೆ - ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ.