ಬಂಟ್ವಾಳದಲ್ಲಿ ಕಲ್ಲು ಕೋರೆಗೆ ಬಿದ್ದು ಇಬ್ಬರು ಯುವಕರ ಸಾವು
ಬಂಟ್ವಾಳ, ಆಗಸ್ಟ್, 10 : ನೀರು ತುಂಬಿದ ಕೋರೆ ಗುಂಡಿಯಲ್ಲಿ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದು, ನಾಲ್ವರು ಪ್ರಾಣಪಾಯದಿಂದ ಪಾರಾದ ಘಟನೆ ಬಂಟ್ವಾಳ ತಾಲೂಕು ಚೇಳೂರು ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಕೋರೆ ಗುಂಡಿಗೆ ಆರು ಮಂದಿ ಯುವಕರು ಭಾನುವಾರ ಈಜಾಡಲು ತೆರಳಿದ ಸಮಯದಲ್ಲಿ ಸುಮಾರು 2ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಕೋರೆಗುಂಡಿ ಮುಚ್ಚದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಕಂದಾಯ ಅಧಿಕಾರಿಗಳು ದೂರಿದ್ದಾರೆ.[ಚಿತ್ರಗಳು : ಥಾಣೆ ಕಟ್ಟಡ ದುರಂತ, ಐವರು ಕನ್ನಡಿಗರ ಸಾವು]

ಬೋಳಿಯಾರು ಗ್ರಾಮದ ಮಜಿ ನಿವಾಸಿ ಜಯಪ್ರಕಾಶ್ (23), ದೀಕ್ಷಿತ್(18) ಮತಪಟ್ಟ ಯುವಕರು. ದುರಂತದಲ್ಲಿ ಶೇಖರ್ (24), ಸಂತೋಷ್(22), ಸುದೇಶ್ (20), ಅಕ್ಷಯ್ (19) ಪಾರಾಗಿದ್ದು, ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿ ಭಾನುವಾರ ಕೋರೆಗುಂಡಿಗೆ ನಾವು ಈಜಾಡಲು ಹೋಗುತ್ತಿದ್ದೆವು. ಎಲ್ಲರೂ ಒಟ್ಟಾಗಿ ಈಜಾಡುತ್ತಿದ್ದಾಗ ಜಯಪ್ರಕಾಶ್ ಮತ್ತು ದೀಕ್ಷಿತ್ ಸ್ವಲ್ಪ ಆಳಕ್ಕೆ ತೆರಳಿದ್ದರು. ಗುಂಡಿಯಲ್ಲಿ ತುಂಬಿದ್ದ ಕೆಸರಿಗೆ ಅವರ ಕಾಲು ಹೂತು ಹೋಗಿದ್ದರಿಂದ ಅವರು ಮೇಲೆ ಬರಲು ಆಗಿರಲಿಲ್ಲ ಎಂದು ಅಪಾಯದಿಂದ ಪಾರಾದ ಯುವಕರು ಹೇಳಿದ್ದಾರೆ.
ಜಿಲ್ಲಾಡಳಿತದ ಆದೇಶವೂ ಇತ್ತು :
ಮೃತ್ಯು ಕೂಪವಾಗಿ ಪರಿಗಣಿಸಿದ ತೆರೆದಗುಂಡಿಯನ್ನು ಮುಚ್ಚುವಂತೆ 3 ವರ್ಷ ಹಿಂದೆ ಜಿಲ್ಲಾಡಳಿತ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ಮೂಲಕ ಆದೇಶ ನೀಡಲಾಗಿತ್ತು. ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರಗಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ತೆರೆದ ಕೋರೆ ಗುಂಡಿ, ಬಾವಿಗಳನ್ನು ಮುಚ್ಚಿದ್ದರು. ಆದರೆ ಈ ಗುಂಡಿ ಕಡೆ ಗ್ರಾಪಂ ಯಾವುದೇ ಕ್ರಮ ಜರುಗಿಲು ಮುಂದಾಗಲಿಲ್ಲ. ಇದರಿಂದ ಕುಪಿತರಾದ ಸ್ಥಳೀಯರು ಹಾಗೂ ಕಂದಾಯ ಅಧಿಕಾರಿಗಳು ಈ ಘಟನೆಗೆ ಜಮೀನು ಮಾಲೀಕ ಸಂಸ್ಥೆಯನ್ನು ನೇರ ಹೊಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪುರಂದರ್ ಹೆಗ್ಡೆ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಸಬ್ ಇನ್ಸ್ ಪೆಕ್ಟರ್ ರಕ್ಷಿತ್ ಕುಮಾರ್, ರೆವಿನ್ಯೂ ಇನ್ಸ್ ಪೆಕ್ಟರ್ ನಾರಾಯಣ ಪೂಜಾರಿ, ಗ್ರಾಮಲೆಕ್ಕಾಧಿಕಾರಿಗಳಾದ ಬಸವರಾಜ್ ಸನದಿ, ಜ್ಯೋತಿಬಾಯಿ, ರಾಜು ಲಂಬಾಣಿ, ಕಂದಾಯ ಅಧಿಕಾರಿಗಳಾದ ತೌಫೀಕ್ ಮುಂದಿನ ದಿನಗಳಲ್ಲಿ ಜಾಗ್ರತಾ ಕ್ರಮಗಳನ್ನು ಅನುಸರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.












Click it and Unblock the Notifications