ಪ್ರತಿಭಟನಾನಿರತ ಬಿಜೆಪಿ ಸಂಸದ ಪ್ರಾಮಾಣಿಕತೆ ಪ್ರಶ್ನಿಸಿದ ಟ್ವಿಟ್ಟಿಗರು
ನವದೆಹಲಿ, ಜುಲೈ 18 : ಭ್ರಷ್ಟಾಚಾರದ ವಿರುದ್ಧ ಪತ್ರ ಬರೆದಿದ್ದಕ್ಕಾಗಿ ವರ್ಗಾವಣೆಯ ಶಿಕ್ಷೆ ಪಡೆದ ಖಡಕ್ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗೀಲ್ ಅವರ ಪರ ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಹತ್ಯೆಗಳ ವಿರುದ್ಧ ಸಂಸತ್ತಿನಲ್ಲಿ ಕರ್ನಾಟಕ ಬಿಜೆಪಿ ನಾಯಕರು ದನಿ ಎತ್ತಿದ್ದಾರೆ.
"ಕರ್ನಾಟಕದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಿ", "ಕೆಎಫ್ಡಿ ಮತ್ತು ಪಿಎಫ್ಐ ಸಂಘಟನೆ ನಿಷೇಧಿಸಿ, ದೇಶ ಉಳಿಸಿ", "ರಾಜಕೀಯ ಪ್ರೇರಿತ ಕೊಲೆ ಕೇಸುಗಳನ್ನು ಎನ್ಐಎಗೆ ವಹಿಸಿ, ಕರ್ನಾಟಕ ಉಳಿಸಿ" ಎಂಬ ಫಲಕ ಹಿಡಿದುಕೊಂಡು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸಂಸದರು ಸಂಸತ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಡಿ ರೂಪಾ ವರ್ಗಾವಣೆ: ಕುಮಾರಸ್ವಾಮಿಯವರೇ ನಾಲಿಗೆ ಒಂದಿರಲಿ!
ಶಿವಮೊಗ್ಗ ಸಂಸದ ಯಡಿಯೂರಪ್ಪ, ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸುವ ಬಿ ಶ್ರೀರಾಮುಲು ಮತ್ತಿತರರು ಕಾಂಗ್ರೆಸ್ಸಿನ ದಮನಕಾರಿ ನೀತಿ ಮತ್ತು ರೂಪಾ ಪರ ದನಿ ಎತ್ತಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ 24 ರಾಜಕೀಯ ಪ್ರೇರಿತ ಹತ್ಯೆಗಳು ನಡೆದಿವೆ. ಆದರೂ ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಅಲ್ಲದೆ, ರೂಪಾ ಅವರನ್ನು ಇದ್ದಕ್ಕಿದ್ದಂತೆ ಏಕೆ ಎತ್ತಂಗಡಿ ಮಾಡಲಾಯಿರು ಎಂದು ಕಿಡಿ ಕಾರಿದರು.
ಡಿಐಜಿ ರೂಪಾ ವರ್ಗಾವಣೆ: ಗಣ್ಯರು ಏನಂತಾರೆ?
ಬಿಜೆಪಿ ನಾಯಕರು ದೆಹಲಿಯ ಸಂಸತ್ತಿನಲ್ಲಿ ಮಾಡುತ್ತಿರುವ ಪ್ರತಿಭಟನೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ಪ್ರತಿಕ್ರಿಯೆಗಳಲ್ಲಿ ಬಿಬೆಜಿ ಸಂಸದರ ಗೋಸುಂಬೆ ನಡವಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ ಮತ್ತು ಬಳ್ಳಾರಿ ಗಣಿಧಣಿಗಳ ಪ್ರತಿಭಟನೆಯ ಬಗ್ಗೆ ವ್ಯಂಗ್ಯದ ಚಾಟಿ ಬೀಸಿದ್ದಾರೆ.
ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿ
(ಶ್ರೀರಾಮುಲು - ಬಳ್ಳಾರಿ ಗ್ರಾಮೀಣ ಸಂಸದ) ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿ. ಬಳ್ಳಾರಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು. ಈಗ ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ವ್ಯವಸ್ಥೆಯ ವ್ಯಂಗ್ಯವಲ್ಲದೆ ಮತ್ತೇನೂ ಅಲ್ಲ ಎಂದು ಮನೋಜ್ ಎಂಬುವವರು ಕುಹಕವಾಡಿದ್ದಾರೆ.
ಪ್ರತಿಭಟನೆ ಮಾಡುವುದು ಬಿಟ್ಟು ಮತ್ತೇನು ಬರುತ್ತದೆ?
ಇವರೆಲ್ಲರಿಗೆ ಪ್ರತಿಭಟನೆ ಮಾಡುವುದು ಬಿಟ್ಟು ಮತ್ತೇನೂ ಬರುವುದಿಲ್ಲ ಎಂದು ಪ್ರಶಾಂತ್ ಪಾಂಡೆ ಎಂಬುವವರು ಟೀಕಿಸಿದ್ದರೆ, ಸುನೀಲ್ ಎಚ್ ಪಿ ಎಂಬುವವರು ಈ ಪ್ರತಿಭಟನೆ ಎಂಬುದು ಪ್ರಹಸನವಲ್ಲದೆ ಮತ್ತೇನೂ ಅಲ್ಲ. ಇದಕ್ಕಿಂತ ದುರಂತ ಮತ್ತೊಂದಿಲ್ಲ ಎಂದು ಪ್ರತಿಭಟನಾನಿರತ ಕರ್ನಾಟಕದ ಸಂಸದರಿಗೆ ಶಾಲಿನಲ್ಲಿ ಸುತ್ತಿ ಬಾರಿಸಿದ್ದಾರೆ.
ನಾವೇ ಭೂಮಿ ಬಿಟ್ಟುಹೋಗುವ ಕಾಲ ಬಂದಿದೆ!
ಶ್ರೀರಾಮುಲು ಅವರು ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಿ ಎಂದು ಹೇಳುತ್ತಿರುವುದೆಂದರೇನು! ಅವರು ಬಳ್ಳಾರಿ ರಿಪಬ್ಲಿಕ್ ಪ್ರೈಮ್ ಮಿನಿಸ್ಟರ್ ಜನಾರ್ದನ ರೆಡ್ಡಿ ಅವರನ್ನು ಪ್ರತಿಭಟನೆಯಲ್ಲಿ ಏಕೆ ಸೇರಿಸಿಕೊಂಡಿಲ್ಲ ಎಂದು ಮಾರುತಿ ಎಂಬುವವರು ಗಣಿಧಣಿಗಳಾಗಿರುವ ಬಳ್ಳಾರಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಶ್ರೀರಾಮುಲು ಪ್ರತಿಭಟನೆ ಮಾಡುತ್ತಿದ್ದಾರೆಂದರೆ ನಾವು ಈ ಭೂಮಿಯನ್ನು ಬಿಟ್ಟುಹೋಗುವ ಕಾಲ ಬಂದಿದೆ ಎಂದು ಮತ್ತೊಬ್ಬರು ತಣ್ಣಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಕ ರೈತರ ಪರವಾಗಿ ಇವರೇಕೆ ಪ್ರತಿಭಟಿಸುತ್ತಿಲ್ಲ?
ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದಲ್ಲಿ ರೈತರು ಮತ್ತಿತರ ಗ್ರಾಮಸ್ಥರು ಕಳೆದ 2 ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಈಗ ರಾಜಕೀಯ ಪ್ರೇರಿತ ಹತ್ಯೆ ಮತ್ತು ರೂಪ್ ಪ್ರಕರಣದಲ್ಲಿ ಪ್ರತಿಭಟಿಸುತ್ತಿರುವ ಇವರು ಉತ್ತರ ಕರ್ನಾಟಕದ ರೈತರ ಪರವಾಗಿಯೂ ಇದೇ ರೀತಿ ಪ್ರತಿಭಟನೆ ನಡೆಸಲಿ ಎಂದು ಪ್ರತಾಪ್ ಕಣಗಾಲ್ ಎಂಬುವವರು ಕೇಳಿದ್ದಾರೆ. ಪ್ರತಿಭಟನೆ ಮಾಡ್ತಾರಾ ನಮ್ಮ ಶಾಸಕರು?
ಉಪ್ರದಲ್ಲಿ ಅನ್ಯಾಯವಾದಾಗ ಇವರೇಕೆ ಪ್ರತಿಭಟಿಸಲಿಲ್ಲ?
ಉತ್ತರಪ್ರದೇಶದಲ್ಲಿಯೂ ಪ್ರಾಮಾಣಿಕ ಮಹಿಳಾ ಪೊಲೀಸ್ ಅಧಿಕಾರಿಯನ್ನು, ಅವರು ಬಿಜೆಪಿ ಶಾಸಕನ ವಿರುದ್ಧ ದನಿಯೆತ್ತಿದ್ದರ ವಿರುದ್ಧ (ಬಿಜೆಪಿಯ ಯೋಗಿ ಆದಿತ್ಯನಾಥ್ ಸರಕಾರ) ವರ್ಗಾವಣೆ ಮಾಡಿದಾಗ ಇವರೆಲ್ಲ ಎಲ್ಲಿದ್ದರು, ಏಕೆ ಪ್ರತಿಭಟನೆ ನಡೆಸಲಿಲ್ಲ ಎಂದು ಸುಕೇಶ್ ನಾಯಕ್ ಎಂಬುವವರು ಪ್ರತಿಭಟನೆಯಲ್ಲಿ ತೊಡಗಿರುವ ಕರ್ನಾಟಕದ ಸಂಸದರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ.
ಮಹಿಳಾ ಹಕ್ಕುಗಳ ತಜ್ಞ ರಾಹುಲ್ ಎಲ್ಲಿ?
ಮಹಿಳಾ ಹಕ್ಕುಗಳ ಹೋರಾಟಗಾರ, ತಜ್ಞ ರಾಹುಲ್ ಗಾಂಧಿ ಅವರು ಎಲ್ಲಿದ್ದಾರೆ? ನಿಮ್ಮದೇ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಪ್ರಾಮಾಣಿಕ, ದಿಟ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ನೀವೇಕೆ ಡಾ. ಮನಮೋಹನ ಸಿಂಗ್ ಅವರಂತೆ ಮೌನವಾಗಿದ್ದೀರಿ? ಎಂದು ಸಂದೇಶ್ ಎಂಬುವವರು ಕಾಂಗ್ರೆಸ್ ಉಪಾಧ್ಯಕ್ಷರನ್ನು ಕೇಳಿದ್ದಾರೆ. ಇದಕ್ಕೂ ರಾಹುಲ್ ಗಾಂಧಿ ಅವರದು ಮೌನವೇ ಉತ್ತರವೆ?